ಜಿಲ್ಲೆಯಲ್ಲಿ ಜಂಗಲ್ ರಾಜ್ಯವಿದೆ-ಸಂಸದ ನಳಿನ್ಕುಮಾರ್ ಕಟೀಲು ಟೀಕೆ

ಪುತ್ತೂರು , ಡಿ.19 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾ ಗದ್ದಲ ಮುಂದುವರಿದಿದ್ದು, ಇಲ್ಲಿ ಮರಳು ನೀತಿಯಿಲ್ಲ, ಮರುಳು (ಹುಚ್ಚು) ನೀತಿಯಿದೆ. ಅರಣ್ಯ ಲೂಟಿ ಕಾರ್ಯ, ಹಟ್ಟಿಯಿಂದಲೇ ಗೋವುಗಳ ಕಳ್ಳತನ , ಹಲ್ಲೆ, ಹತ್ಯೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಜಿಲ್ಲೆಯಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣ ವೈಫಲ್ಯವಾಗಿದೆ. ಒಂದಕ್ಕೂ ಸೂತ್ರ ಮತ್ತು ಹತೋಟಿ ಇಲ್ಲ. ಇಲ್ಲಿ ಜಂಗಲ್ ರಾಜ್ಯದ ವಾತಾವರಣ ಸೃಷ್ಠಿಯಾಗಿದ್ದು, ಅಹಂಕಾರದ ಷಂಡ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲು ಟೀಕಿಸಿದ್ದಾರೆ.
ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಉಳ್ಳಾಲದಲ್ಲಿ 8 ಹಲ್ಲೆ ಪ್ರಕರಣಗಳು ಮತ್ತು 3 ಹತ್ಯೆ ಪ್ರಕರಣಗಳು ನಡೆದಿದ್ದರೂ ಸಮರ್ಪಕ ತನಿಖೆಯಾಗಿಲ್ಲ. ಹಲ್ಲೆ -ಹತ್ಯೆ ಮಾಡಿದವರನ್ನೇ ರಕ್ಷಿಸುವ ಕೆಲಸ ನಡೆಯುತ್ತಿದ್ದು, ಅಕ್ಬರನ ಕಾಲದಲ್ಲಿಯೂ ಈ ರೀತಿ ಆಗಿರಲಿಕ್ಕಿಲ್ಲ ಎಂದ ಅವರು, ಇದು ಸದ್ದಾಂ ಹುಸೇನ್ ಸರ್ಕಾರವೇ ಎಂದು ಪ್ರಶ್ನಿಸಿದರು. ಮುಖ್ಯ ಮಂತ್ರಿಗಳ ಆಪ್ತರೇ ಜೈಲು ಸೇರಿದ್ದು, ಮುಂದೆ ಮುಖ್ಯಮಂತ್ರಿಗಳ ಕುತ್ತಿಗೆಗೆ ಉರುಳು ಎಂದು ಬೀಳುವುದೋ ಕಾದು ನೋಡಬೇಕಾಗಿದೆ ಎಂದವರು ತಿಳಿಸಿದರು.
ಈ ಹಿಂದೆ ಬಿಜೆಪಿ ರಾಜ್ಯ ಸರ್ಕಾರವಿದ್ದ ಸಂದರ್ಭದಲ್ಲಿ ಜಿಲ್ಲೆಯ ರೈತರ ಬೇಡಿಕೆಯಂತೆ ಕುಮ್ಕಿ ಹಕ್ಕು,ಕಾನ,ಬಾನ ಹಕ್ಕು ನೀಡುವ ಪ್ರಯತ್ನ ನಡೆಸಿತ್ತು. ಮುಖ್ಯ ಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಈ ಮಸೂದೆ ಮಂಡನೆ ಮಾಡುವ ವೇಳೆ ರಾಜ್ಯಪಾಲರ ಮೇಲೆ ಒತ್ತಡ ತಂದು ಕಾಂಗ್ರೆಸಿಗರು ಅದಕ್ಕೆ ತಡೆಯೊಡ್ಡಿದ್ದರು ಎಂದು ಆರೋಪಿಸಿದ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈ 4 ವರ್ಷಗಳ ಅವಧಿಯಲ್ಲಿ ರೈತರಿಗೆ ಈ ಹಕ್ಕು ವ್ಯವಸ್ಥೆ ಮಾಡಲು, ಆಶ್ರಯ ಕಲ್ಪಿಸಲು ವಿಫಲವಾಗಿದೆ ಎಂದು ದೂರಿದರು.
ರಬ್ಬರ್ ಧಾರಣೆ ಕುಸಿತವಾದಾಗ ಕೇರಳ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿ ಕೃಷಿಕರಿಗೆ ಬೆಂಬಲ ಬೆಲೆ ಒದಗಿಸಿಕೊಡುವ ಪ್ರಯತ್ನ ಮಾಡಿದ್ದರೂ ರಾಜ್ಯ ಸರ್ಕಾರ ಈ ತನಕ ರಬ್ಬರ್ ಬೆಳೆಯ ಸರ್ವೆ ಮಾಡಿಲ್ಲ. ವೈಜ್ಞಾನಿಕ ದರ ನಿಗದಿ ಪಡಿಸಿ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಬೇಡಿಕೆ ಸಲ್ಲಿಸುವ ಕೆಲಸ ಮಾಡಿಲ್ಲ. ಸುಳ್ಯ ತಾಲ್ಲೂಕಿನ ಮರ್ಕಂಜ,ಸಂಪಾಜೆ, ಪುತ್ತೂರು ತಾಲ್ಲೂಕಿನ ಕಾಣಿಯೂರು ಭಾಗದಲ್ಲಿ ಅಡಿಕೆ ಕೃಷಿಗೆ ಮಾರಕ ಹಳದಿ ರೋಗ ಬಾಧಿಸಿದ್ದರೂ ಈ ತನಕ ಸಮೀಕ್ಷೆ ಮಾಡಿ ವರದಿ ಸಲ್ಲಿಸುವ ಕೆಲಸ ಕೂಡ ಮಾಡಿಲ್ಲ ಎಂದು ಅವರು ಆರೋಪಿಸಿದರು.
ನೇತ್ರಾವತಿ ನದಿ ತಿರುವು ವಿಚಾರದಲ್ಲಿ ಸಭೆ,ಸಂವಾದ ಕೂಡ ನಡೆಸಲು ಮುಂದಾಗದೆ ಹಠಕ್ಕೆ ಬಿದ್ದಂತೆ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಜಿಲ್ಲೆಯ ಜನತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ 8 ಕ್ಷೇತ್ರಗಳ ಪೈಕಿ 7ರಲ್ಲಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದರೂ ಈಗ ಕಾಂಗ್ರೆಸ್ ಸರ್ಕಾರ ಇಲ್ಲಿನ ಮತದಾರರಿಗೆ ಅನ್ಯಾಯ ದ್ರೋಹ ಮಾಡುತ್ತಿದೆ .ಜಿಲ್ಲೆಯ ರೈತರ ಅನ್ನದ ಬಟ್ಟಲಿಗೆ ಕಾಂಗ್ರೆಸ್ ನಾಯಕರು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ನೇತ್ರವಾತಿ ನದಿ ತಿರುವು ಯೋಜನೆ ಕೈಬಿಡುವಂತೆ ಕಾಲಾವಕಾಶ ನೀಡಲಾಗಿದ್ದು, ಜ.26ರಿಂದ ಮತ್ತೆ ಹೋರಾಟ ಆರಂಭಿಸುತ್ತೇವೆ ಎಂದು ಅವರು ತಿಳಿಸಿದರು.
ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ತೋಟಗಾರಿಕಾ ಬೆಳೆಗಳಾದ ರಬ್ಬರ್,ಅಡಿಕೆ ಮೊದಲಾದ ಕೃಷಿ ಉತ್ಪನ್ನಗಳಿಗೆ ಬೆಂಬಲ ನೀಡಿ ಕೃಷಿಕರ ಬೆಂಬಲಕ್ಕೆ ನಿಂತಿದೆ. ಈಗಾಗಲೇ ರಾಜ್ಯಕ್ಕೆ ರೂ.160 ಕೋಟಿ ಬಿಡುಗಡೆ ಮಾಡಿದ್ದು, ಕ್ಯಾಂಪ್ಕೋ ಸಂಸ್ಥೆಯ ಮೂಲಕ ಕೃಷಿಕರಿಗೆ ಬೆಂಬಲ ಬೆಲೆ ದೊರೆಯಲಿದೆ. ಕ್ಯಾಂಪ್ಕೋ ಸಂಸ್ಥೆ ನೀಡಿದ ವೈಜ್ಞಾನಿಕ ದರ ನಿಗದಿ ಆಧಾರದಲ್ಲಿ ಅಡಿಕೆಗೆ ಕಿಲೋ ಒಂದಕ್ಕೆ ರೂ.250 ರಂತೆ ಬೆಂಬಲ ಬೆಲೆ ಸಿಗಲಿದೆ ಎಂದು ನಳಿನ್ಕುಮಾರ್ ಕಟೀಲು ಅವರು ತಿಳಿಸಿದರು.
ರಾಜ್ಯ ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ಕ್ಯಾಂಪ್ಕೋ ಸಂಸ್ಥೆ ಮಾಡಿದೆ. ಕ್ಯಾಂಪ್ಕೋ ಸಂಸ್ಥೆ ಅಂತರ್ರಾಜ್ಯ ಸಂಸ್ಥೆಯಾದ ಕಾರಣ ಎಲ್ಲಿಯ ಅಡಿಕೆಗೆ ಬೆಂಬಲ ಬೆಲೆ ನೀಡಬೇಕು ಎಂಬ ವಿಚಾರದಲ್ಲಿ ಸ್ಪಲ್ಪ ಮಟ್ಟಿನ ಜಿಜ್ಞಾಸೆ ಎದುರಾಗಿದೆ. ಹೊಸ ಅಡಿಕೆ ಮತ್ತು ಹಳೆ ಅಡಿಕೆಯಲ್ಲಿ ಯಾವುದಕ್ಕೆ ಬೆಂಬಲ ಬೆಲೆ ನೀಡಬೇಕು ಎನ್ನುವ ವಿಚಾರದಲ್ಲೂ ಸ್ವಲ್ಪ ಮಟ್ಟಿನ ಗೊಂದಲವಿದ್ದು, ಕ್ಯಾಂಪ್ಕೋ ಸಂಸ್ಥೆಯೇ ಈ ಸಮಸ್ಯೆಯನ್ನು ನಿವಾರಿಸಲಿದೆ ಎಂದು ಅವರು ತಿಳಿಸಿದರು. ಅಡಿಕೆಗೆ ಶಾಶ್ವತವಾಗಿ ಬೆಂಬಲ ಬೆಲೆ ನೀಡಬೇಕು. ಪ್ರತೀ ವರ್ಷವೂ ನೀಡಬೇಕು ಎಂಬುವುದು ನಮ್ಮ ಆಗ್ರಹವಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದರು.
ಪುತ್ತೂರು ಗ್ರಾಮಾಂತರ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಸಮಿತಿಯ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಗೌರಿ ಬನ್ನೂರು, ನಗರ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಹಾರಾಡಿ ಮತ್ತಿತರರು ಉಪಸ್ಥಿತರಿದ್ದರು.
ಇತ್ತೀಚೆಗೆ ಅನಾರೋಗ್ಯಕ್ಕೊಳಗಾಗಿ ನಿಧನರಾದ ಪುತ್ತೂರು ನಗರ ವ್ಯಾಪ್ತಿಯ ತಾರಿಗುಡ್ಡೆ ಬಿಜೆಪಿ ಬೂತ್ ಕಮಿಟಿಯ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಬಿಜೆಪಿ ನಗರ ಮಂಡಲ ಸಮಿತಿ ಹಾಗೂ ತಾರಿಗುಡ್ಡೆ ವಾರ್ಡ್ ಸಮಿತಿಯ ವತಿಯಿಂದ ಸಂಗ್ರಹಿಸಲಾದ ರೂ.28.800 ನಗದು ಹಣವನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ಪ್ರಕಾಶ್ ಅವರ ಪತ್ನಿಗೆ ನೀಡಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







