ದಿಡ್ಡಳ್ಳಿ ನಿರಾಶ್ರಿತರಿಗೆ ಮೂರು ತಿಂಗಳಿನಲ್ಲಿ ನಿವೇಶನ : ಸಚಿವ ಸೀತಾರಾಂ ಭರವಸೆ
ಧರಣಿಯನ್ನು ಮುಂದುವರಿಸಲು ನಿರ್ಧಾರ

ಮಡಿಕೇರಿ ಡಿ.19 : ಗುಡಿಸಲುಗಳನ್ನು ಕಳೆದುಕೊಂಡು ಸೂಕ್ತ ನೆಲೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ದಿಡ್ಡಳ್ಳಿ ಗಿರಿಜನ ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ಒಳಗಾಗಿ ಸೂಕ್ತ ಜಾಗವನ್ನು ಗುರುತಿಸಿ ನಿವೇಶನ ಒದಗಿಸಿಕೊಡಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಭರವಸೆ ನೀಡಿದ್ದಾರೆ.
ಪ್ರತಿಭಟನಾ ನಿರತ ನಿರಾಶ್ರಿತ ಆದಿವಾಸಿಗಳೊಂದಿಗೆ ಚರ್ಚಿಸಿದ ಸಚಿವರು ಮುಂದಿನ ಮೂರು ತಿಂಗಳಿನಲ್ಲಿ ದಿಡ್ಡಳ್ಳಿ ವ್ಯಾಪ್ತಿಯಲ್ಲೆ ನಿವೇಶನ ಒದಗಿಸಿ ಕೊಡುವ ಭರವಸೆ ನೀಡಿದರು. ಆದರೆ ಹೋರಾಟಗಾರರು ಈ ಭರವಸೆಗೆ ಆಕ್ಷೇಪ ವ್ಯಕ್ತಪಡಿಸಿ, ಈ ರೀತಿಯ ಅನೇಕ ಭರವಸೆಗಳು ಹುಸಿಯಾಗಿವೆ ಎಂದು ಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ ಸಚಿವರು, ಗುಡಿಸಲುಗಳಿದ್ದ ಪ್ರದೇಶವನ್ನು ಅರಣ್ಯ ಇಲಾಖೆ ಮೀಸಲು ಅರಣ್ಯ ಪ್ರದೇಶವೆಂದು ಹೇಳುತ್ತಿದೆ. ಆದ್ದರಿಂದ ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದೆ ಅಥವಾ ಕಂದಾಯ ಇಲಾಖೆಯದ್ದೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಲು ಕಾಲಾವಕಾಶದ ಅಗತ್ಯವಿದೆ. ಅಲ್ಲದೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲು ಕಂದಾಯ ಸಚಿವರು, ಅರಣ್ಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ನಿವೇಶನ ಮಂಜೂರಾತಿಗೆ ಸಂಬಂಧಿಸಿದಂತೆ ಎದುರಾಗಬಹುದಾದ ಕಾನೂನಾತ್ಮಕ ತೊಡಕುಗಳನ್ನು ದೂರ ಮಾಡಲು ಆದ್ಯತೆ ನೀಡಲಾಗುವುದೆಂದು ತಿಳಿಸಿದರು.
ಮೂರು ತಿಂಗಳ ಒಳಗೆ ಇದೇ ಪ್ರದೇಶದಲ್ಲಿ ಪೈಸಾರಿ ಜಾಗವನ್ನು ಗುರುತಿಸಿ ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗವುದು ಎಂದು ಭರವಸೆ ನೀಡಿದ ಸಚಿವರು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಪ್ರತಿಭಟನಾ ನಿರತರು ಅಹೋರಾತ್ರಿ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದಿಲ್ಲ, ನಿವೇಶನ ಸಿಗುವಲ್ಲಿಯವರೆಗೆ ಇಲ್ಲಿಯೇ ಇರುತ್ತೇವೆಂದು ಪಟ್ಟು ಹಿಡಿದರು. ಈ ಸಂದರ್ಭ ಮಾತನಾಡಿದ ಸಚಿವರು ಮುಂದಿನ ಮೂರು ತಿಂಗಳ ಕಾಲ ಪ್ರಸ್ತುತ ಪ್ರದೇಶದಲ್ಲಿ ತಾತ್ಕಾಲಿಕ ಶೆಡ್ಡ್ಗಳನ್ನು ಮತ್ತು ನಿರಾಶ್ರಿತರಿಗೆ ಪಡಿತರ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಸಂಸದ ಪ್ರತಾಪ ಸಿಂಹ ಮಾತನಾಡಿ, ಪ್ರತಿಭಟನಾಕಾರರು ಗುಡಿಸಲುಗಳು ಇದ್ದ ಪ್ರದೇಶದಲ್ಲೆ ನಿವೇಶನ ಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ, ಇದು ಅರಣ್ಯ ಪ್ರದೇಶವಾಗಿರುವುದರಿಂದ ಕಾನೂನಾತ್ಮಕ ತೊಡಕುಗಳು ಎದುರಾಗಿದೆ. ರಾಜ್ಯ ಸರ್ಕಾರ ತೊಡಕುಗಳನ್ನು ದೂರ ಮಾಡಿ ನಿರಾಶ್ರಿತರಿಗೆ ವಸತಿ ನೀಡಲು ಕ್ರಮ ಕೈಗೊಳ್ಳಲಿ ಎಂದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ನಿವೇಶನ ಹಂಚಿಕೆ ಅಡ್ಡಿಯಾಗಿರುವ ಕಾನೂನಾತ್ಮಕ ಮತ್ತು ತಾಂತ್ರಿಕ ಅಡಚಣೆೆಗಳನ್ನು ನಿವಾರಿಸಲು ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದರು.
ಜನಪ್ರತಿನಿಧಿಗಳ ಈ ಭರವಸೆಯ ಬಳಿಕ ಮಾತನಾಡಿದ ವಸತಿ ಮತ್ತು ನಿವೇಶನ ಹೋರಾಟ ಸಮಿತಿಯ ಸಂಚಾಲಕ ಸಿರಿಮನೆ ನಾಗರಾಜು ಹಾಗೂ ಸಿಪಿಐಎಂಎಲ್ ಪಕ್ಷದ ಪ್ರಮುಖ ನಿರ್ವಾಣಪ್ಪ , ಇದು ಅಸಹಾಯಕರ ಹೋರಾಟಕ್ಕೆ ಸಂದ ಗೆಲುವಾಗಿದೆಯೆಂದು ಅಭಿಪ್ರಾಯಪಟ್ಟರು. ತಕ್ಷಣಕ್ಕೆ ಭರವಸೆ ಈಡೇರದೆ ಇದ್ದರು ಇಷ್ಟು ದಿನ ಆದಿವಾಸಿಗಳನ್ನು ಮರೆತು ಕುಳಿತಿದ್ದ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ದುಃಖವನ್ನು ಆಲಿಸುವ ಬೆಳವಣಿಗೆ ಸೃಷ್ಟಿಯಾಗಿದೆ. ಜನಪ್ರತಿನಿಧಿಗಳು ಭರವಸೆ ನೀಡಿದಾಕ್ಷಣ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲವೆಂದ ಅವರು ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದರು.
ಜಿಲ್ಲೆಯಲ್ಲಿರುವ ಎಲ್ಲಾ ಆದಿವಾಸಿಗಳಿಗೆ ನಿವೇಶನ ನೀಡಬೇಕೆಂದು ಅವರು ಇದೇ ಸಂದರ್ಭ ಒತ್ತಾಯಿಸಿದರು.
ಡಿ.22 ರಂದು ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆ ಬಗ್ಗೆ ಮಂಗಳವಾರ ಕೇಂದ್ರ ಸಮಿತಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದೆಂದು ಸಿರಿಮನೆ ನಾಗರಾಜು ಸ್ಪಷ್ಟಪಡಿಸಿದರು.
ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಧಿಕ್ಕಾರದ ಘೋಷಣೆ ಕೇಳಿ ಬಂದವು, ಗಿರಿಜನ ಮುಖಂಡರುಗಳಾದ ಅಪ್ಪಾಜಿ ಹಾಗೂ ಮುತ್ತಮ್ಮ ಅವರು ಗಿರಿಜನರು ಅನುಭವಿಸುತ್ತಿರುವ ನರಕ ಯಾತನೆಯನ್ನು ಸಚಿವರೆದುರು ಬಿಚ್ಚಿಟ್ಟರು. ಇನ್ನು ಮುಂದೆ ಜೀತದಾಳುಗಳಾಗಿ ದುಡಿಯಲು ನಾವು ಸಿದ್ಧರಿಲ್ಲ. ಸ್ವಾಭಿಮಾನಿಗಳಾಗಿ ಬದುಕಲು ನಮಗೂ ಅವಕಾಶ ನೀಡಿ ಎಂದು ಒತ್ತಾಯಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







