ಮಂಗಳೂರು: ಬೃಹತ್ ಶರೀಅತ್ ಸಂರಕ್ಷಣಾ ಮಹಿಳಾ ಸಮಾವೇಶ
![ಮಂಗಳೂರು: ಬೃಹತ್ ಶರೀಅತ್ ಸಂರಕ್ಷಣಾ ಮಹಿಳಾ ಸಮಾವೇಶ ಮಂಗಳೂರು: ಬೃಹತ್ ಶರೀಅತ್ ಸಂರಕ್ಷಣಾ ಮಹಿಳಾ ಸಮಾವೇಶ](https://www.varthabharati.in/sites/default/files/images/articles/2016/12/20/1.jpg)
ಮಂಗಳೂರು, ಡಿ.20: ಶರೀಅತ್ ಅನ್ನು ತಿದ್ದುಪಡಿ ಮಾಡುವ ಹಕ್ಕು ಯಾವುದೇ ವ್ಯಕ್ತಿಗೆ ನೀಡಿಲ್ಲ ಎಂದು ಸಲಫಿ ಗಲ್ಸ್ ಆ್ಯಂಡ್ ವಿಮೆನ್ಸ್ ಮೂವ್ಮೆಂಟ್, ಎಸ್ಕೆಎಸ್ಎಂನ ಮಹಿಳಾ ವಿಭಾಗದ ಮುಮ್ತಾಝ್ ಬಿಂತ್ ಶಂಸುದ್ದೀನ್ ಹೇಳಿದರು.
ನಗರದ ಪುರಭವನದಲ್ಲಿ ಮಂಗಳವಾರ ಮುಸ್ಲಿಮ್ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ ಹಾಗೂ ಉಭಯ ಜಿಲ್ಲೆಯ ವಿವಿಧ ಮುಸ್ಲಿಮ್ ಮಹಿಳಾ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಶರೀಅತ್ ಸಂರಕ್ಷಣಾ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶರೀಅತ್ ಎನ್ನುವುದು ಕೇವಲ ಮುಸ್ಲಿಮರಿಗೆ ಅಷ್ಟೇ ಅಲ್ಲ ಪ್ರತಿಯೊಬ್ಬರಿಗೂ ದಾರಿದೀಪವಾಗಿದೆ. ಮನುಷ್ಯ ವರ್ಗಕ್ಕೆ ಒಳಿತನ್ನು ಉಂಟು ಮಾಡಲು ಶರೀಅತ್ ಕಾನೂನಿದ್ದು, ಇದರಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪವನ್ನು ಮಾಡುತ್ತಿದೆ. ಏಕನಾಗರಿಕ ಸಂಹಿತೆ ಕಾನೂನು ಹೆಸರಿನಲ್ಲಿ ಜಾರಿಗೆ ತರಲು ಹೊರಟಿರುವುದು ಮೂರ್ಖತನದ ವಿಚಾರವಾಗಿದೆ. ಸಮಾಜದಲ್ಲಿ ಹಲವಾರು ಸಮಸ್ಯೆಗಳಿದ್ದು, ಮೊದಲು ಅವುಗಳನ್ನು ತೊಡೆದು ಹಾಕಲು ಕೇಂದ್ರ ಸರಕಾರ ಗಮನಹರಿಸಲಿ ಎಂದು ಹೇಳಿದರು.
ತ್ರಿವಳಿ ತಲಾಖ್ ನೀಡಿದ ತಕ್ಷಣ ಕೌಟುಂಬಿಕ ಸಂಬಂಧ ಕೊಂಡಿ ಕಳಚುವುದಿಲ್ಲ. ಅದಕ್ಕೂ ನೀತಿ ನಿಯಮಗಳಿವೆ. ಮಾಧ್ಯಮಗಳು ತಲಾಖ್ ಕುರಿತು ಅಪಪ್ರಚಾರ ಮಾಡುತ್ತಿವೆ. ಮದುವೆ ಬಳಿಕ ಕುಟುಂಬದಲ್ಲಿ ಹೊಂದಾಣಿಕೆ ಕಾಣದಿದ್ದಾಗ ಮಹಿಳೆಗೂ ‘ಖಲಾ’ ಹಕ್ಕನ್ನು ನೀಡಿದೆ. ಪತಿ ಕ್ಷುಲ್ಲಕ ಕಾರಣಕ್ಕಾಗಿ ತಲಾಖ್ ನೀಡಲು ಬರುವುದಿಲ್ಲ ಎಂದು ಅವರು ಹೇಳಿದರು.
ಯಾವುದೇ ಧರ್ಮ ಆಚರಣೆ, ಪ್ರಚಾರ ಮಾಡಲು ಸಂವಿಧಾನ ಅವಕಾಶ ನೀಡಿದೆ. ಏಕ ನಾಗರಿಕ ಸಂಹಿತೆ ಕಾನೂನು ಜಾರಿಗೆ ತರಲು ಹೊರಟಿರುವ ಕೆಂದ್ರ ಸರಕಾರದ ಪ್ರಯತ್ನವು ಮನುಷ್ಯ ವರ್ಗಕ್ಕೆ ಅಪಾಯವನ್ನು ತಂದಿಡಲಿದೆ. ಎಲ್ಲರೂ ಶರೀಅತ್ನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂದು ತಿಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಸಬೀಹಾ ಫಾತಿಮಾ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಮುಸ್ಲಿಮರಿಗೆ ಅಷ್ಟೇ ಅಲ್ಲದೆ, ಇತರರಿಗೂ ಮುಕ್ತ ಅವಕಾಶವನ್ನು ನೀಡಿತ್ತು. ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲು ಉತ್ತಮ ಕಾನೂನುಗಳನ್ನು ತಿದ್ದಿದರು. ಮುಸ್ಲಿಮ್ ವಿದ್ವಾಂಸರು ಮುಸ್ಲಿಮ್ ಪರ್ಸನಲ್ ಲಾ ಜಾರಿಗೆ ತರಲು ಅವಕಾಶ ನೀಡಿದ್ದರು. ಇಸ್ಲಾಮ್ ಜೀವನ ವ್ಯವಸ್ಥೆಯೇ ಶರೀಅತ್ ಆಗಿದೆ. ಕೇಂದ್ರ ಸರಕಾರವು ದೇಶವಾಸಿಗಳಿಗೆ ಒಂದು ಕಾನೂನು ನೀಡಿದ್ದರೆ, ಮುಸ್ಲಿಮರಿಗೆ ಮತ್ತೊಂದು ಕಾನೂನನ್ನು ನೀಡಿದೆ. ಮುಸ್ಲಿಮ್ ಪರ್ಸನಲ್ ಲಾ ನಲ್ಲಿ ವಯಕ್ತಿಕ ಶರೀಅತ್ ಎಲ್ಲರಿಗೂ ಸಂಬಂದಿಸಿದ್ದಾಗಿದೆ ಎಂದು ತಿಳಿಸಿದರು.
ಶರೀಅತ್ ಭಾರತ ಸಂವಿಧಾನಕ್ಕೆ ವಿರುದ್ಧವಾದುದು ಎಂದು ಪುಕಾರು ಎಬ್ಬಿಸಲಾಗಿದೆ. ನಾಗರಿಕ ಸಂಹಿತೆ ಮತ್ತು ಭಾವೈಕ್ಯತೆಗೆ ಯಾವುದೇ ಸಂಬಂಧವಿಲ್ಲ. ಸಮಾನ ನಾಗರಿಕ ಸಂಹಿತೆ ರಚನೆಗೆ ಸ್ಪಷ್ಟ ಕಲ್ಪನೆ ಇರಬೇಕು. ಆದರೆ ಪ್ರಸ್ತುತವಿರುವ ಎಲ್ಲ ವರದಿಗಳು ಸುಳ್ಳುಗಳಿಂದ ಕೂಡಿವೆ. ಮೊದಲು ಹಿಂದೂ ಮಹಿಳೆಯರಿಗೆ ಸಮಾನ ಗೌರವ, ಸ್ಥಾನ ಮಾನ ನೀಡುತ್ತಿರಲಿಲ್ಲ. ಆದರೆ ಇಸ್ಲಾಮ್ನಲ್ಲಿ ಯಾವಾಗಲೋ ಆ ಸ್ಥಾನಮಾನವನ್ನು ಕೊಟ್ಟಿದೆ ಎಂದು ಹೇಳಿದರು.
ಏಕರೂಪ ಕಾನೂನು ಹೇರುವುದು ಅಸಾಧ್ಯದ ಮಾತು. ಬಹು ಸಂಸ್ಕೃತಿಯ ರಾಷ್ಟ್ರ ಎನ್ನುವವರು ವಿವಿಧ ಕಾನೂನುಗಳನ್ನು ಹೇರುತ್ತಿದ್ದಾರೆ. ಬಟ್ಟೆ ಧರಿಸುವುದು, ಆಹಾರ ಪದ್ಧತಿ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದರು. ಕೆಲ ರಾಷ್ಟ್ರಗಳಲ್ಲಿ ತಲಾಖ್ ನಿಷೇಧವಿದೆ. ಆದರೆ ಆ ರಾಷ್ಟ್ರಗಳ ಮಾದರಿ ನಮಗೆ ಅಗತ್ಯವಿಲ್ಲ. ದೇಶದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎಂದು ತಿಳಿಸಿದರು.
ಯೂನಿವರ್ಸಲ್ ವಿಮೆನ್ಸ್ ಫಾರಂ(ಯಿನಿವೆಫ್)ನ ಯು ಸುನೈನಾ ಆಸಿಫ್ ಮಾತನಾಡಿ, ಬೆರಳೆಣಿಕೆಯಷ್ಟು ಜನರ ರಕ್ಷಣೆಗೆ ಮೋದಿ ಅವರು ಏಕ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಹೊರಟಿರುವುದು ಮೂರ್ಖತನದ ವಿಚಾರವಾಗಿದೆ. ವಾಸ್ತವಿಕತೆಯನ್ನು ಮನಗಾಣಬೇಕಿದೆ. ಸಂವಿಧಾನ ನೀಡಿರುವ ಅವಕಾಶ ಭಿಕ್ಷೆಯಲ್ಲ, ಅದು ಹಕ್ಕು ಎಂದು ತಿಳಿಸಿದರು.
ಮೋದಿ ಸರಕಾರ ಬಂದ ಮೇಲೆ ಶರೀಅತ್ ಬಂದಿಲ್ಲ. ಶರೀಅತ್ ಬದಲಾಯಿಸಲು ಜಗತ್ತಿನ ಯಾವ ವ್ಯಕ್ತಿಗೆ ಸಾಧ್ಯವಿಲ್ಲ. ದೇಶದಲ್ಲಿ ನಡೆಯುತ್ತಿರುವ ಬಲಾತ್ಕಾರ, ವರದಕ್ಷಿಣೆ, ಅತ್ಯಾಚಾರ, ಕೋಮುಗಲಭೆಗಳನ್ನು ಮೊದಲು ನಿಲ್ಲಿಸಲಿ. ಭಾರತದ ಮಹಿಳೆಯರ ಜೀವನ ಜರ್ಜರಿತವಾಗಿದೆ. ಕೌಟುಂಬಿಕ ಕಲಹಗಳು, ಬಡವರ ಸ್ಥಿತಿ ಚಿಂತಾಜನಕವಾಗಿದೆ. ಇವುಗಳ ಬಗ್ಗೆ ಯಾಕೆ ಕಾಳಜಿ ಇಲ್ಲ ಎಂದು ಪ್ರಶ್ನಿಸಿದರು. ಮುಸ್ಲಿಮ್ ಮಹಿಳೆಯರು ಪ್ರಬುದ್ಧರಾಗಿದ್ದಾರೆ. ನಿಮ್ಮ ಉಪದೇಶ, ಸಹಾಯ ಯಾಚನೆ ಬೇಕಿಲ್ಲ ಎಂದರು.
ನ್ಯಾಶನಲ್ ವಿಮೆನ್ಸ್ ಫ್ರಂಟ್ ನ ಶಾಹಿದಾ ಅಸ್ಲಂ ಮಾತನಾಡಿ, ಏಕ ನಾಗರಿಕ ಸಂಹಿತೆ ಬಿಜೆಪಿಗೆ ಅನಿವಾರ್ಯವಾಗಿದೆ. ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆಗಳು ಅವರಿಗೆ ಮುಖ್ಯವೆನಿಸುವುದಿಲ್ಲ, ಬಡತನ, ಸಾರಾಯಿ, ಕೋಮುವಾದ ಸಮಸ್ಯೆಯೇ ಹೊರತು, ತಲಾಖ್ ಸಮಸ್ಯೆಯಲ್ಲ ಎಂದು ಹೇಳಿದರು. ಕಾರ್ಪೊರೇಟ್ ವರ್ಗ, ಕೋಮುವಾದದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸಂಘಪರಿವಾರ ಮುಸ್ಲಿಮರನ್ನು ಶತ್ರುಗಳಂತೆ ಗುರುತಿಸುತ್ತಿವೆ. ತಲಾಖ್ ನಿಷೇಧ ಊಹೆಯಿಂದ ನಿಲ್ಲಿಸುವಂತಹದ್ದಲ್ಲ. ಆಳವಾದ ಅಧ್ಯಯನ ನಡೆಸಬೇಕು. ಕೇಂದ್ರ ಸರಕಾರ ಫ್ಯಾಶಿಸ್ಟ್ ನ ಮನುವಾದದಿಂದ ಕೂಡಿದೆ ಎಂದು ಹೇಳಿದರು.
ಈ ಸಂದರ್ಭ ಸಿಸ್ಟರ್ಸ್ ಆಫ್ ಹೋಪ್ನ ಮರಿಯಂ ಶಫೀನಾ, ಅಲ್-ಹಕ್ ಫೌಂಡೇಶನ್ ವಿಮೆನ್ಸ್ ವಿಂಗ್ ಸದಸ್ಯೆ ಮಸೀರ ಅಬ್ದುಲ್ ಲತೀಫ್, ಎಚ್.ಐ.ಎಫ್ ಮಹಿಳಾ ಘಟಕದ ರೈಹಾನ ಬಿಂತಿ ಹಕೀಂ, ಹಿದಾಯ ಅರೆಬಿಕ್ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನ ಪ್ರಾಂಶುಪಾಲೆ ಶಹನಾಝ್ ಅಹ್ಮದ್ ಮಾತನಾಡಿದರು.
ಕ್ಯಾಲಿಕಟ್ ಗ್ಲೋಬಲ್ ಬ್ರಿಟಿಷ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಝುಹುರಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಲಫಿ ಗರ್ಲ್ಸ್ ಆ್ಯಂಡ್ ವಿಮೆನ್ಸ್ ಮೂವ್ಮೆಂಟ್ ನ ಎಂ.ಬಶೀರಾ, ನ್ಯಾಶನಲ್ ವಿಮೆನ್ಸ್ ಫ್ರಂಟ್ ನ ರಝಿಯಾ ಸುಮಯ್ಯ, ಯುನಿವರ್ಸಲ್ ವಿಮೆನ್ಸ್ ಫಾರಂ(ಯುನಿವೆಫ್)ನ ಫಾತಿಮಾ ಶರೀಫ್, ಹೈಲ್ಯಾಂಡ್ ಇಸ್ಲಾಮಿಕ್ ಫಾರಂ ವಿಭಾಗದ ಹಫ್ಸಾ ಅಹ್ಮದ್, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಝೀನತ್ ಹಸನ್, ಆಸರೆ ಫೌಂಡೇಶನ್ನ ಸಲ್ಮಾ ಉಮರ್, ಹಿದಾಯಾ ಫೌಂಡೇಶನ್ನ ಸುಮಯ್ಯ, ಅಲ್ಹಕ್ ಫೌಂಡೇಶನ್ ಮಹಿಳಾ ವಿಭಾಗದ ಕೈರುನ್ನೀಸಾ ಅಬ್ದುಲ್ ಸಮದ್ ಉಪಸ್ಥಿತರಿದ್ದರು.
ವಿಮೆನ್ಸ್ ಇಂಡಿಯಾ ಮೂವ್ಮೆಂಟ್ನ ನಸ್ರಿಯಾ ಬೆಳ್ಳಾರೆ ನಿರ್ಣಯ ಮಂಡಿಸಿದರು . ಹುದಾ ಅಬ್ದುರ್ರಹ್ಮಾನ್, ಹಫೀಝಾ ಕಿರಾಅತ್ ನಡೆಸಿಕೊಟ್ಟರು. ಶರೀಅತ್ ಸಂರಕ್ಷಣಾ ಮಹಿಳಾ ಸಮಾವೇಶದ ಸಂಚಾಲಕಿ ಸಾಜಿದಾ ಮೂಮಿನ್ ಸ್ವಾಗತಿಸಿದರು. ಆಸರೆ ಫೌಂಡೇಶನ್ನ ಮುಮ್ತಾಝ್ ಪಕ್ಕಲಡ್ಕ ವಂದಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.