ಕೇಂದ್ರದ 70 ಕೋ.ರೂ. ವಾಪಸ್: ರವಿಕುಮಾರ್
ಮಂಗಳೂರು, ಡಿ.20: ಬರಗಾಲ ಎದುರಿಸಲು ಕೇಂದ್ರ ಸರಕಾರ ರಾಜ್ಯಕ್ಕೆ 2,270 ಕೋ.ರೂ. ಬಿಡುಗಡೆ ಮಾಡಿತ್ತು. ಆದರೆ ರಾಜ್ಯ ಸರಕಾರ ಅದನ್ನು ಸದ್ಬಳಕೆ ಮಾಡದ ಕಾರಣ 70 ಕೋ.ರೂ. ವಾಪಸ್ ಹೋಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರಕಾದಿಂದ ಪರಿಹಾರ ಕೇಳುವುದಕ್ಕೆ ಆಕ್ಷೇಪವಿಲ್ಲ. ಆದರೆ ನೀಡಿದ್ದನ್ನು ಬಳಕೆ ಮಾಡಲು ಸಿದ್ದರಾಮಯ್ಯ ಸರಕಾರಕ್ಕೆ ಗೊತ್ತಿಲ್ಲ. ರಾಜ್ಯದ 134 ತಾಲೂಕುಗಳಲ್ಲಿ ಬರಗಾಲ ಪರಿಸ್ಥಿತಿ ಇದೆ ಎಂದು ಘೋಷಿಸಿದ್ದೇ ರಾಜ್ಯ ಸರಕಾರದ ಸಾಧನೆ. ರೈತರಿಗೆ ಪರಿಹಾರ, ಜಾನುವಾರುಗಳಿಗೆ ಮೇವು, ನೀರಿನ ಸೌಲಭ್ಯ ಕೊಡಿಸುವ ಪ್ರಾಥಮಿಕ ಜವಾಬ್ದಾರಿಯನ್ನೇ ಮರೆತ ಬೇಜವಾಬ್ದಾರಿ ಸರಕಾರ ಇದಾಗಿದೆ ಎಂದು ರವಿಕುಮಾರ್ ಟೀಕಿಸಿದರು.
ಸಚಿವರು, ಅಧಿಕಾರಿಗಳು ಸಮೀಕ್ಷೆ ನಡೆಸದೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ವರದಿ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರತ್ಯೇಕ ಸಮೀಕ್ಷೆ ನಡೆಸುತ್ತಿದ್ದು, ತಿಂಗಳಾಂತ್ಯಕ್ಕೆ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಅವರು ಹೇಳಿದರು.
ಮಡಿಕೇರಿಯ ದಿಡ್ಡಳ್ಳಿಯಲ್ಲಿ ವನವಾಸಿಗಳ ಒಕ್ಕಲೆಬ್ಬಿಸಿರುವುದು ಅಮಾನವೀಯ. ಮೊದಲು ಜಾಗ, ಮನೆ ಕೊಟ್ಟ ನಂತರ ಒಕ್ಕಲೆಬ್ಬಿಸಬೇಕಿತ್ತು ಎಂದ ಅವರು, ರಾಜ್ಯದ ಪರಿಶಿಷ್ಟರ ಮತ್ತು ಹಿಂದುಳಿದ ವರ್ಗದವರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಮೂಲಸೌಲಭ್ಯಗಳ ಮಾಹಿತಿ ಪಡೆಯಲಾಗುತ್ತಿದೆ. ಹಲವು ಕಡೆ ಕುಡಿಯುವ ಶುದ್ಧ ನೀರು, ಶೌಚಾಲಯ, ಸ್ನಾನಗೃಹ ಇಲ್ಲದಿರುವುದು, 10 ಮಂದಿಯ ಕೊಠಡಿಯಲ್ಲಿ 25 ಮಂದಿಯನ್ನು ಕೂಡಿ ಹಾಕಿರುವ ದಯನೀಯ ಸ್ಥಿತಿ ಇದೆ. ಶೇ.90ರಷ್ಟು ಕಡೆ ಕಂಪ್ಯೂಟರ್ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಪ್ರಭಾಮಾಲಿನಿ, ವಿಕಾಸ್ ಪುತ್ತೂರು, ಸಂಜಯ ಪ್ರಭು, ರಾಮ ಅಮೀನ್, ನಮಿತಾ ಉಪಸ್ಥಿತರಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.