ನೋಟು ರದ್ದತಿಯಿಂದ ಹಬ್ಬದ ಸಂಭ್ರಮಕ್ಕೆ ಮಂಕು : ಐವನ್ ಡಿಸೋಜ
![ನೋಟು ರದ್ದತಿಯಿಂದ ಹಬ್ಬದ ಸಂಭ್ರಮಕ್ಕೆ ಮಂಕು : ಐವನ್ ಡಿಸೋಜ ನೋಟು ರದ್ದತಿಯಿಂದ ಹಬ್ಬದ ಸಂಭ್ರಮಕ್ಕೆ ಮಂಕು : ಐವನ್ ಡಿಸೋಜ](https://www.varthabharati.in/sites/default/files/images/articles/2016/12/21/01.jpg)
ಮಂಗಳೂರು, ಡಿ.21: ಡಿಸೆಂಬರ್, ಜನವರಿ ತಿಂಗಳಲ್ಲಿ ಹಬ್ಬ ಹರಿದಿನಗಳನ್ನು ಏರ್ಪಡಿಸುವ ಸಮಯವಾಗಿದೆ. ಪ್ರಧಾನಿ ಮೋದಿ ಅವರು ದೊಡ್ಡ ನೋಟು ಅಮಾನ್ಯ ಮಾಡಿದ ಪರಿಣಾಮ ಹಬ್ಬಗಳ ಆಚರಣೆ ಮಂದಗತಿಯಿಂದ ಕೂಡಿದೆ ಎಂದು ಮುಖ್ಯ ಸಚೇತಕ ಐವನ್ ಡಿಸೋಜ ಬೇಸರ ವ್ಯಕ್ತ ಪಡಿಸಿದರು.
ನಗರದ ಮಹಾನಗರ ಪಾಲಿಕೆಯ ಸ್ವ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನೋಟು ಅಭಾವದಿಂದಾಗಿ ಬಡ ಕೂಲಿ ಕಾರ್ಮಿಕರು ಹಬ್ಬ ಆಚರಣೆಗಳಲ್ಲಿ ತೊಡಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕಿನ ಖಾತೆಯಲ್ಲಿ ನಮ್ಮದೇ ಹಣವಿದ್ದರೂ ಅದನ್ನು ತೆಗೆದುಕೊಳ್ಳದಂತಾಗಿದ್ದು, ಈ ಕ್ರಮ ಜನರ ಕೈ ಕಟ್ಟಿ ಹಾಕಿದೆ ಎಂದು ಹೇಳಿದರು.
ಮೀನು, ತರಕಾರಿ ಮಾರುವವರು, ಕೊಳ್ಳುವವರ ಪರಿಸ್ಥಿತಿ ಹೇಳತೀರದಾಗಿದೆ. ರೂ.5000ಕ್ಕಿಂತ ಹೆಚ್ಚು ಹಣ ಹಾಕಲು ಸ್ಪಷ್ಟ ಕಾರಣ ನೀಡಬೇಕೆಂದ ಮರುದಿನವೇ ಪಾನ್ ಕಾರ್ಡ್ ಕೊಡಲೇಬೇಕು ಎನ್ನುವಂತಹ ಹೇಳಿಕೆಗಳನ್ನು ಮೋದಿ ನೀಡುತ್ತಿದ್ದಾರೆ. ನೋಟು ನಿಷೇಧ ಕ್ರಮವು ಅವೈಜ್ಞಾನಿಕತೆಯಿಂದ ಕೂಡಿದೆ. ಕ್ಯಾಶ್ಲೆಸ್, ಸ್ವೈಪ್ ಬಳಸುವುದು ಬಡ ಕೂಲಿ ಕಾರ್ಮಿಕರಿಗೆ ತಿಳಿಯುವುದಿಲ್ಲ. ತಕ್ಷಣವೇ ದೊಡ್ಡ ಮೊತ್ತದ ಹಣವನ್ನು ಖಾತೆಯಿಂದ ಪಡೆಯಲು ಅವಕಾಶವನ್ನು ನೀಡಬೇಕೆಂದು ಆಗ್ರಹಿಸಿದರು.
ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳ ಜತೆ ಆಟವಾಡುತ್ತಿರುವ ಮೋದಿ ಸರಕಾರದ ಬಗ್ಗೆ ಮಾತನಾಡಿದರೆ ಆಡಳಿತ ವಿರೋಧಿಗಳೆಂದು ಹೇಳುತ್ತಿರುವುದು ಸಲ್ಲದು. ಶ್ರೀಮಂತ ಕಾರ್ಪೊರೇಟ್ ವರ್ಗ ಎಷ್ಟು ಹಣವನ್ನು ಬ್ಯಾಂಕ್ಗೆ ಜಮಾ ಮಾಡಿದೆ ಎಂದು ಸರಕಾರ ದೇಶದ ಜನತೆಗೆ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರಕಾರವನ್ನು ಅತಂತ್ರ ಸ್ಥಿತಿಗೆ ಸಿಲುಕಿಸಲು ಸಿಬಿಐನ್ನು ಬಳಸಿಕೊಂಡಿರುವ ಕೇಂದ್ರ ಸರಕಾರ,ಇಂತಹ ಷಡ್ಯಂತ್ರವನ್ನು ಹೂಡುತ್ತಿದೆ ಎಂದರು.
ಡಿ.26 ರಂದು ಎತ್ತಿನಹೊಳೆ ಯೋಜನೆ ಕುರಿತು ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಡಿ.22ರಂದು ಸೌಹಾರ್ದ ಕ್ರಿಸ್ಮಸ್:
ಸರ್ವ ಧರ್ಮ ಸಮನ್ವಯ ಸಾರುವ ಕ್ರಿಸ್ಮಸ್ ಹಬ್ಬದ ಉದ್ಘಾಟನೆಯು ಕಂಕನಾಡಿ ಮಾರುಕಟ್ಟೆ ಮೈದಾನದಲ್ಲಿ ಡಿ.22ರಂದು ಸಂಜೆ 4 ಗಂಟೆಗೆ ಕ್ರಿಸ್ಮಸ್ ನಕ್ಷತ್ರ ಸ್ಪರ್ಧೆ ಮೂಲಕ ನಡೆಯಲಿದೆ ಎಂದು ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದರು.
ಕ್ರಿಸ್ಮಸ್ ಹಬ್ಬದ ಉದ್ಘಾಟನೆಯನ್ನು ಕೇಂದ್ರ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ನಡೆಸಿಕೊಡಲಿದ್ದಾರೆ. ಕ್ರಿಸ್ಮಸ್ ಕೇಕ್ ಪ್ರದರ್ಶನ, ಕ್ಯಾರಲ್ ಹಾಡುಗಳ ಸ್ಪರ್ಧೆ, ಅಕ್ಕಿ ವಿತರಣೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಸಚಿವ ಯು.ಟಿ. ಖಾದರ್ ಚಾಲನೆ ನೀಡಲಿದ್ದಾರೆ. ಮನಪಾ ಮೇಯರ್ ಎಂ. ಹರಿನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಫಾ. ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ವಂ.ರಿಚರ್ಡ್ ಕುವೆಲ್ಲೋ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಸಂಚಾಲಕಿ ಬ್ರಹ್ಮಕುಮಾರಿ ವಿಶ್ವೇಶ್ವರಿ, ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ರಶೀದ್ ಉಳ್ಳಾಲ್, ಸಂದೇಶ ನೀಡಲಿದ್ದಾರೆ. ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರು, ಮುಖಂಡರು, ಮನಪಾ ಸದಸ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಡಿ.23ರಂದು ಬೆಂಗಳೂರಿನಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ
ಬೆಂಗಳೂರಿನಲ್ಲಿ ಸೌಹಾರ್ದ ಕ್ರಿಸ್ಮಸ್ ಹಬ್ಬಾಚರಣೆಯ ಉದ್ಘಾಟನೆಯನ್ನು ಡಿ.23ರಂದು ಸಂಜೆ 5ಗಂಟೆಗೆ ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಹಿಸಲಿದ್ದಾರೆ ಎಂದು ಮುಖ್ಯ ಸಚೇತಕ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದ ಮಹಾನಗರ ಪಾಲಿಕೆಯ ಸ್ವ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯರ್ರ್ಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ರೋಶನ್ ಬೇಗ್, ವಸತಿ ಸಚಿವ ಎಂ.ಕೃಷ್ಣಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಯೋಜನಾ ಸಚಿವ ಎಂ.ಆರ್. ಸೀತಾರಾಮ್, ಬಿಬಿಎಂಪಿ ಮಹಾಪೌರರಾದ ಪದ್ಮಾವತಿ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ಅಹ್ಮದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.