ಡಿ.24-25: ಮಂಗಳೂರಿನಲ್ಲಿ ‘ಜನನುಡಿ’ ಕಾರ್ಯಕ್ರಮ

ಮಂಗಳೂರು, ಡಿ.22: ಸಾಹಿತ್ಯವನ್ನು ವ್ಯಾಪಾರವನ್ನಾಗಿಸುತ್ತಿರುವ ಮತ್ತು ವೈಭವದ ಸಾಹಿತ್ಯ ಜಾತ್ರೆಗಳನ್ನು ವಿರೋಧಿಸಿ ‘ಅಭಿಮತ ಮಂಗಳೂರು’ ಬಳಗವು 2013ರಲ್ಲಿ ಆರಂಭಿಸಿರುವ ‘ಜನನುಡಿ’ ಕಾರ್ಯಕ್ರಮವು ನಾಲ್ಕನೆ ವರ್ಷಕ್ಕೆ ಕಾಲಿಟ್ಟಿದೆ. ಈ ಬಾರಿ ಡಾ.ಬಿ.ಆರ್.ಅಂಬೇಡ್ಕರ್ರ 125ನೆ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಅಂಬೇಡ್ಕರರ ಸಮಾನತೆಯ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಡಿ.24,25ರಂದು ನಗರದ ಬಜ್ಜೋಡಿ ಶಾಂತಿಕಿರಣದಲ್ಲಿ ಸಮತೆ ಎಂಬುದು ಅರಿವು ಘೋಷಣೆಯೊಡನೆ ‘ಜನನುಡಿ’ ಕಾರ್ಯಕ್ರಮ ನಡೆಯಲಿದೆ.
ಡಿ.24ರಂದು ಮರಾಠಿ ಸಾಹಿತಿ ಶರಣಕುಮಾರ್ ಲಿಂಬಾಳೆ ‘ಜನನುಡಿ’ ಉದ್ಘಾಟಿಸಲಿದ್ದು, ಡಾ.ಕೆ.ವಿ.ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ನಡೆಯುವ ಗೋಷ್ಠಿಯಲ್ಲಿ ಮತೀಯತೆ, ವೈದಿಕತೆಯ ವಿರುದ್ಧ ತತ್ವ ಪದಗಳ ಪ್ರಸ್ತುತಿ ನಡೆಯಲಿದೆ. ಉಳಿದಂತೆ ಸಮಾನತೆಯ ಆಶಯ ಮತ್ತು ಮೀಸಲಾತಿ, ತುಳುನಾಡಿನ ಸಾಂಸ್ಕೃತಿಕ-ನೆಲಮೂಲ ಪರಂಪರೆಗಳು, ಕವಿಗೋಷ್ಠಿ, ಜಾತಿ ವಿನಾಶ ಮತ್ತು ನಾನು, ಹಾಗೂ ಮುಸ್ಲಿಂ-ದಲಿತ- ಹಿಂದುಳಿದ ವರ್ಗಗಳ ಐಕ್ಯತೆ: ಸವಾಲು ಸಾಧ್ಯತೆ ಗೋಷ್ಠಿಗಳು ನಡೆಯಲಿವೆ. ಸಂಜೆ ಕುರಲ್ ಕಲಾತಂಡ ಕುಡ್ಲ, ಫೇಸ್ ಟ್ರಸ್ಟ್ ತಂಡ ಮಂಗಳೂರು ತಂಡವು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದೆ.
ಡಾ. ವಿಜಯ, ಡಾ. ನಾಗಪ್ಪಗೌಡ, ಎರಿಕ್ ಒಝಾರಿಯೊ, ಅಬ್ದುಸ್ಸಲಾಂ ಪುತ್ತಿಗೆ, ಡಾ. ಮೀನಾಕ್ಷಿ ಬಾಳಿ, ಡಾ.ಸಿ. ಜಿ. ಲಕ್ಷ್ಮಿಪತಿ, ಪ್ರೊ.ರಹಮತ್ ತರೀಕೆರೆ, ಡಾ.ಬಂಜಗೆರೆ ಜಯಪ್ರಕಾಶ್, ಡಾ ಅರವಿಂದ ಮಾಲಗತ್ತಿ, ದಿನೇಶ್ ಅಮೀನ್ ಮಟ್ಟು, , ಡಾ. ಎಚ್. ಎಸ್. ಅನುಪಮಾ, ರಾಜಪ್ಪದಳವಾಯಿ, ಹುಲಿಕುಂಟೆ ಮೂರ್ತಿ, ಪ್ರದೀಪ್ ರಮಾವತ್, ಡಾ.ಕಿರಣ್ ಗಾಜನೂರು, ಡಾ.ಅಪ್ಪಗರೆ ಸೋಮಶೇಖರ್, ಪ್ರೊ.ಪುರುಷೋತ್ತಮ ಬಿಳಿಮಲೆ, ಮೂಡ್ನಾಕಾಡು ಚಿನ್ನಸ್ವಾಮಿ, ಶಿವಾಜಿ ಗಣೇಶನ್, ಡಾ. ಸಬಿತಾ ಬನ್ನಾಡಿ, ಮಲ್ಲಿಕಾ ಬಸವರಾಜು, ಶೈಲಜಾ ನಾಗರಘಟ್ಟ, ವಿ.ಕೆ. ಸಂಜ್ಯೋತಿ, ಭಾರತೀ ದೇವಿ ಮತ್ತು 20ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.







