ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 40 ಪದಕಗಳನ್ನು ಗೆದ್ದ ಅಂಧರ ಶಾಲೆ

ಚಿಕ್ಕಮಗಳೂರು, ಡಿ.22: ಇಂಡಿಯನ್ ಬ್ಲೈಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ 20ನೆ ರಾಷ್ಟ್ರ ಮಟ್ಟದ ಅಂಧರ ಕ್ರೀಡಾಕೂಟದಲ್ಲಿ ನಗರದ ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆಯ ಕ್ರೀಡಾ ತಂಡ ಭಾಗವಹಿಸಿ ರಾಷ್ಟ ಮಟ್ಟದಲ್ಲಿ 40 ಪದಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಟೀಂ ಚಾಂಪಿಯನ್ ಶಿಪ್ ಹಾಗೂ 15 ಚಿನ್ನ 17 ಬೆಳ್ಳಿ, 8 ಕಂಚಿನ ಪದಕಗಳನ್ನು ಗೆಲ್ಲುವುದರ ಮೂಲಕ ಶಾಲೆ, ಜಿಲ್ಲೆ ಹಾಗೂ ರಾಜ್ಯಕ್ಕೆ ಮಕ್ಕಳು ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದಲ್ಲಿ 10 ಬಾಲಕರು, 10 ಬಾಲಕಿಯರು ಸೇರಿ ಒಟ್ಟು 20 ಮಕ್ಕಳು ಆಶಾಕಿರಣವನ್ನು ಪ್ರತಿನಿಧಿಸಿದ್ದರು. ತಂಡದಲ್ಲಿ ಸಾಧನೆಗೈದ ಪ್ರಮುಖರೆಂದರೆ ವಿ.ರಾಧಾ 400, 800, 1,500 ಮೀಟರ್ ಓಟದಲ್ಲಿ ಚಿನ್ನದ ಪದಕ, ಪಿ, ವರದರಾಜು 400, 800, 1500 ಮೀಟರ್ ಓಟದಲ್ಲಿ ಕ್ರಮವಾಗಿ ಚಿನ್ನ ಹಾಗೂ 2 ಕಂಚಿನ ಪದಕಗಳು, ಆರ್. ರಕ್ಷಿತ 400, 100 ಮೀಟರ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
ಸಂಜೂಬಾಯಿ 200, 100 ಹಾಗೂ 400 ಮೀಟರ್ನಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು, ಪ್ರಮಿಳಾ 400 ಹಾಗೂ 100 ಮೀಟರ್ನಲ್ಲಿ ಚಿನ್ನ, ಬೆಳ್ಳಿ, ಎಂ.ಎಸ್. ಶರತ್ 200, 400 ಮೀಟರ್ಗಳಲ್ಲಿ ಬೆಳ್ಳಿ, ಹೆಚ್.ಎಸ್.ಅನೂಪ 400, 800 ಮೀಟರ್ಗಳಲ್ಲಿ ಬೆಳ್ಳಿ, ಎಂ.ಎನ್.ಸೌಮ್ಯಾ 400, 800, 1,500 ಮೀಟರ್ಗಳಲ್ಲಿ ಬೆಳ್ಳಿ, ಎ.ಮೈನಾ 100, 400 ಮೀಟರ್ಗಳಲ್ಲಿ ಬೆಳ್ಳಿ, ಬಿ.ಎಂ.ಸುದೀಪ್ 200 ಮೀಟರ್ ನಲ್ಲಿ ಬೆಳ್ಳಿ, ಕೆ.ಜಿ.ಕೇಶವಮೂರ್ತಿ 200 ಮೀಟರ್ ನಲ್ಲಿ ಕಂಚು ಪಡೆದುಕೊಂಡಿದ್ದಾರೆ.
ಅಲ್ಲದೆ ಸೀನಿಯರ್ ಬಾಲಕಿಯರ ವಿಭಾಗದ 4x400, 4x100 ರಿಲೆಗಳಲ್ಲಿ ಚಿನ್ನ, ಜೂನಿಯರ್ ಬಾಲಕಿಯರ ವಿಭಾಗದ 4x100 ರಿಲೆಯಲ್ಲಿ ಬೆಳ್ಳಿ, ಸೀನಿಯರ್ ಬಾಲಕರ ವಿಭಾಗದ 4x100 ರಿಲೆಯಲ್ಲಿ ಕಂಚಿನ ಪದಕಗಳನ್ನು ಗೆದ್ದಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜೇತ ತಂಡದೊಂದಿಗೆ ಮುಖ್ಯೋಪಾಧ್ಯಾಯ ಬಿ.ಜಿ.ಚಂದ್ರಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ಪಿ.ಮಂಜಣ್ಣ, ಶಿಕ್ಷಕ ಎನ್.ಪಿ.ರವಿ, ನೌಕರ ಜಿ.ಬಿ. ಸುಧಾ ವೇಣುಗೋಪಾಲ್ ರನ್ನು ಚಿತ್ರದಲ್ಲಿ ಕಾಣಬಹುದು.





