ಮಂಜೇಶ್ವರ: ಡಿ.29 ರಂದು ಸಹಕಾರಿ ರಂಗದ ರಕ್ಷಣೆಗೆ ನಡೆಯಲಿದೆ ಮಾನವ ಸರಪಳಿ
ಎಡರಂಗ ಕಾಲ್ನಡಿಗೆ ಪ್ರಚಾರ ಜಾಥ
.jpg)
ಮಂಜೇಶ್ವರ, ಡಿ.23 : ಸಹಕಾರಿ ರಂಗವನ್ನು ರಕ್ಷಿಸಬೇಕು, ಕೇಂದ್ರ ಸರಕಾರದ ನೋಟು ನಿಷೇಧದಿಂದಾಗಿ ಉಂಟಾದ ಆರ್ಥಿಕ ಬಿಕ್ಕಟ್ಟಗೆ ಸರಿಯಾದ ಮಾರ್ಗೋಪಾಯವನ್ನು ಹುಡುಕಬೇಕು ಎಂಬ ನಿಟ್ಟಿನಲ್ಲಿ ಎಡರಂಗದ ಪ್ರಚಾರ ಜಾಥಾ ಬಾಯಾರುಪದವಿನಲ್ಲಿ ನಡೆಯಿತು.
ಡಿ. 29 ರಂದು ನಡೆಯಲಿರುವ ಕಾಸರಗೋಡಿನಿಂದ ತಿರುವನಂತಪುರದ ವರೆಗಿನ ಎಡರಂಗ ಬೃಹತ್ ಮಾನವ ಸರಪಳಿ ರಚನೆಯ ಪೂರ್ವಭಾವಿಯಾಗಿ ನಡೆದ ಕಾಲ್ನಡಿಗೆ ಪ್ರಚಾರ ಜಾಥಾವು ಸುಬ್ಬಯ್ಯಕಟ್ಟೆಯಿಂದ ಆರಂಭವಾಗಿ ಬಾಯಾರುಪದವು ಮುಳಿಗದ್ದೆಯಲ್ಲಿ ಸಮಾಪ್ತಿಯಾಯಿತು.
ಪ್ರಚಾರ ಜಾಥಾದ ಮುಂಚೂಣಿ ನಾಯಕರಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಕೆ.ಆರ್ ಜಯಾನಂದ ಭಾಗವಹಿಸಿ ಮಾತನಾಡಿದರು.
ಕೇರಳ ರಾಜ್ಯ ಜನತೆಯ ನಾಡಿ ಮಿಡಿತದಂತಿರುವ ಸಹಕಾರಿ ರಂಗದ ರಕ್ಷಣೆಗೆ ಎಡರಂಗ ಸದಾ ಬದ್ಧ, ಕೇಂದ್ರ ಸರಕಾರವು ಕಳ್ಳ-ಧನವೆನ್ನುವ ನೆಪದಲ್ಲಿ ಇಂತಹ ಸಹಕಾರಿ ರಂಗವನ್ನು ಬುಡಮೇಲುಗೊಳಿಸುವ ಯತ್ನಕ್ಕೆ ಕೈ ಹಾಕಿದೆ. ಕೃಷಿಕರು, ಸಾಮಾನ್ಯರ ಅಭ್ಯುದಯಕ್ಕೆ ನಾಂದಿ ಹಾಡಿದ ಸಹಕಾರಿ ರಂಗವನ್ನು ಯಾರಿಂದಲೂ ಅಲುಗಾಡಿಸಲಾಗದು ಎಂದರು.
ಕಾಸರಗೋಡು ಸಹಿತ ವಿವಿಧ ಜಿಲ್ಲೆಗಳಲ್ಲಿರುವ ಸಹಕಾರಿ ಬ್ಯಾಂಕುಗಳ ಬೆಳವಣಿಗೆಗೆ ಹಲವು ರಾಜಕೀಯ ಪಕ್ಷಗಳು ತಮ್ಮದೇ ಆದ ಕೊಡುಗೆ ನೀಡಿವೆ. ರಾಜ್ಯದಲ್ಲಿ ಶೆ. 70 ರಷ್ಟು ಆರ್ಥಿಕ ವ್ಯವಹಾರಗಳು ಸಹಕಾರಿ ಬ್ಯಾಂಕುಗಳ ಮೂಲಕವೇ ನಡೆಯುತ್ತಿವೆ. ಸಹಕಾರಿ ರಂಗವು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆಗಳನ್ನು ನೀಡಿದ್ದು, ಇಂತಹ ಸದೃಢ ವಲಯವನ್ನು ಬುಡಮೇಲುಗೊಳಿಸುವ ಕೃತ್ಯಕ್ಕೆ ಕೈ ಹಾಕಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ದ್ರೋಹ ಎಂದರು.
ಜಾಥ ಪ್ರಬಂಧಕ ಪುರುಷೋತ್ತಮ ಬಳ್ಳೂರು ಮಾತನಾಡಿದರು.
ಪ್ರಚಾರ ಜಾಥ ಸಭೆಯಲ್ಲಿ ಲಾರೆನ್ಸ್, ಅಧ್ಯಕ್ಷರಾಗಿ ಎಸ್. ನಾರಾಯಣ ಭಟ್ ಕುರುವೇರಿ, ನಾರಾಯಣ ಶೆಟ್ಟಿ, ಸಿದ್ದಿಕ್ ಆವಳ, ರಹೀಂ ನಡುಮನೆ, ಚನಿಯ ಕೊಮ್ಮಂಗಳ, ರಾಮಚಂದ್ರ ಮಾಸ್ತರ್ ಉಪಸ್ಥಿತರಿದ್ದರು.
ನೋಟು ನಿಷೇಧದ ವಿರುದ್ದ ನಡೆಯಲಿರುವ ಮಾನವ ಸರಪಳಿಯು 700 ಕಿ.ಮೀ ಉದ್ದವಿರಲಿದ್ದು , ಎಡರಂಗ ನೇತೃತ್ವದಲ್ಲಿ ಡಿ.27 ರಂದು ಸಂಜೆ ಏಕಕಾಲದಲ್ಲಿ ಕಾಸರಗೋಡಿನಿಂದ ಆರಂಭವಾಗಲಿದೆ.







