ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನಿರ್ಗಮನ ಪಥಸಂಚಲನ

ಕಾರವಾರ, ಡಿ.23: ಕಳೆದ 9 ತಿಂಗಳಿನಿಂದ ಇಲ್ಲಿನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಬೇಸಿಕ್ ತರಬೇತಿ ಪಡೆಯುತ್ತಿದ್ದ 125 ನಾಗರಿಕ ಪೊಲೀಸ್ ಕಾನ್ಸ್ಟೇಬಲ್ಗಳ ನಿರ್ಗಮನ ಪಥಸಂಚಲನ ಶುಕ್ರವಾರ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಶ್ಚಿಮ ವಲಯ ಐಜಿ ಅರುಣ್ ಚಕ್ರವರ್ತಿ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ಮಾತನಾಡಿದ ಅವರು, ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳಿಗೆ ಕಳೆದ 9 ತಿಂಗಳಲ್ಲಿ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡಲಾಗಿದೆ. ಸಮಾಜ ಸೇವೆಯನ್ನು ಮಾಡಲು ದೊರಕಿರುವ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು.
ಪೊಲೀಸ್ ವ್ಯವಸ್ಥೆಯಲ್ಲಿ ಕಾನ್ಸ್ಟೇಬಲ್ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ದುರ್ಜನರು, ಅಪರಾಧಿಗಳನ್ನು ಕಾನೂನಿನ ಮುಂದೆ ನಿಲ್ಲಿಸುವ ಕಾರ್ಯ ಪೊಲೀಸರದ್ದಾಗಿದೆ. ಎಲ್ಲರನ್ನೂ ಪಾರದರ್ಶಕವಾಗಿ ನೇಮಕಾತಿ ಮಾಡಲಾಗಿದ್ದು, ಉನ್ನತ ಶಿಕ್ಷಣ ಹೊಂದುವ ಆಸಕ್ತಿ ಇರುವವರಿಗೆ ಇಲಾಖೆ ಸಹಕಾರ ನೀಡಲಿದೆ. ಇಲಾಖೆಯಲ್ಲಿ ಸೇವಾ ಮನೋಭಾವದಿಂದ ಜನಪರವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು. ಸೇವೆಗೆ ಸೇರಿದ ಬಳಿಕ ನಿರಂತರವಾಗಿ ತಾಂತ್ರಿಕ ಜ್ಞಾನ ಗಳಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದಕ್ಕಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಬಗ್ಗೆ ಅರಿವು ಹೊಂದಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಹುಮಾನ: ತರಬೇತಿ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಒಳಾಂಗಣ ವಿಷಯಗಳ ಪರೀಕ್ಷೆಯಲ್ಲಿ ಸಿದ್ದರಾಮೇಶ ಎಸ್. (ಪ್ರಥಮ), ಶೇಖರಗೌಡ (ದ್ವಿತೀಯ) ಹಾಗೂ ಸಂತೋಷ ಧರನವರ (ತೃತೀಯ). ಹೊರಾಂಗಣ ಪರೀಕ್ಷೆಯಲ್ಲಿ ದಯಾನಂದ (ಪ್ರಥಮ), ಮಧು ಎನ್. (ದ್ವಿತೀಯ) ಹಾಗೂ ಸತೀಶ್ ಬಿರಾದಾರ (ತೃತೀಯ). ಫೈರಿಂಗ್ನಲ್ಲಿ ಪರಶುರಾಮ ಅತನೂರ್ (ಪ್ರಥಮ), ಪ್ರಕಾಶ ಭಜಂತ್ರಿ (ದ್ವಿತೀಯ) ಸುರೇಶ ಕಣ್ಣೂರು (ತೃತೀಯ) ಹಾಗೂ ಸರ್ವೋತ್ತಮ ಪ್ರಶಸ್ತಿಯನ್ನು ಸಂತೋಷ ಧರನವರ ಅವರಿಗೆ ನೀಡಿ ಗೌರವಿಸಲಾಯಿತು.
ಆಕರ್ಷಕ ಪಥಸಂಚಲನ: ನಿರ್ಗಮನ ಪಥಸಂಚಲನ ಅಂಗವಾಗಿ ಪ್ರಶಿಕ್ಷಣಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನ ಎಲ್ಲರ ಮೆಚ್ಚುಗೆಗೆಪಾತ್ರವಾಯಿತು.







