ಉಡುಪಿ ನಗರಸಭೆ ಕುಡಿಯುವ ನೀರು, ಒಳಚರಂಡಿಗೆ 320ಕೋಟಿ ಮಂಜೂರು : ಸಚಿವ ಪ್ರಮೋದ್

ಮಲ್ಪೆ, ಡಿ.24: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ದಿನದ 24 ಗಂಟೆ ಕುಡಿಯುವ ನೀರು ಹಾಗೂ ಒಳಚರಂಡಿ ಕಾಮಗಾರಿಗಾಗಿ ರಾಜ್ಯ ಸರಕಾರ 320 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. ನಗರೋತ್ಥಾನದಿಂದ ಮಂಜೂರಾಗಿರುವ 35ಕೋಟಿ ರೂ. ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ನಗರಸಭೆ ವ್ಯಾಪ್ತಿಯ ಒಂದನೇ ಕೊಳ ವಾರ್ಡಿನ ಜನ ಸಂಪರ್ಕ ಸಭೆಯನ್ನು ಮಲ್ಪೆಯ ಲಯನ್ಸ್ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಲ್ಪೆ ಬಂದರಿನಿಂದ ಪರ್ಕಳದವರೆಗೆ ಚತುಷ್ಪಥ ರಸ್ತೆ ಕಾಮ ಗಾರಿಗೆ 95ಕೋಟಿ ರೂ. ಯೋಜನೆಯನ್ನು ತಯಾರಿಸಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಕಳೆದ ಮೂರುವರೆ ವರ್ಷಗಳಲ್ಲಿ ಉಡುಪಿ ಕ್ಷೇತ್ರಕ್ಕೆ 1800ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದರು.
ಉಡುಪಿ ನಗರಸಭೆ ವ್ಯಾಪ್ತಿಯ 35ವಾರ್ಡ್ ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 30 ಗ್ರಾಮಗಳಲ್ಲಿ ನಿರಂತರ ಜನಸಂಪರ್ಕ ಸಭೆ ನಡೆಸಲಾಗುವುದು. ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 65 ವಾರ್ಡ್ ಹಾಗೂ ಗ್ರಾಮಗಳಲ್ಲಿ ಜನಸಂಪರ್ಕ ನಡೆಸುವ ಉದ್ದೇಶ ಹೊಂದಲಾಗಿದೆ. ಕೊಳ ವಾರ್ಡ್ವೊಂದರಲ್ಲೇ ಕಳೆದ ಮೂರುವರೆ ವರ್ಷಗಳಲ್ಲಿ 8-10ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಅವರು ಹೇಳಿದರು.
94ಸಿಸಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ 1.5ಸೆಂಟ್ಸ್ನಿಂದ ಮೂರು ಸೆಂಟ್ಸ್ ಜಾಗವನ್ನು ಡಿನೋಟೀಸ್ ಮಾಡುವ ಕುರಿತು ಕಂದಾಯ ಸಚಿವರು ಸದ್ಯ ದಲ್ಲೇ ಕಾನೂನು ತಿದ್ದುಪಡಿ ತರಲಿದ್ದಾರೆ. 94ಸಿಸಿಯಲ್ಲಿ ಅರ್ಜಿ ಹಾಕುವ ಅವಧಿಯನ್ನು ಜ.27ರವರೆಗೆ ವಿಸ್ತರಿಸಲಾಗಿದೆ. ಸಿಆರ್ಝೆಡ್ 500ಮೀ. ವ್ಯಾಪ್ತಿಯನ್ನು 50ಮೀಟರ್ಗೆ ಇಳಿಸುವಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಸ ಲಾಗಿದೆ. ಈ ಕುರಿತು ಕೇಂದ್ರ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಸಿಂಗಲ್ ಲೇಔಟ್ ಸಮಸ್ಯೆಯನ್ನು ರಾಜ್ಯ ಸರಕಾರ ಬಗೆಹರಿಸಿದ್ದು, ಮುಂದೆ 9/11 ಹಾಗೂ ಮರಳುಗಾರಿಕೆ ಸಮಸ್ಯೆಯನ್ನು ಪರಿಹರಿಸಲಾಗು ವುದು. ಮೀನುಗಾರರಿಗೆ ಈಗ ಒಂದು ವಾರದಲ್ಲಿ ಸಾಧ್ಯತಾ ಪತ್ರ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ 32 ಫಲಾನುಭವಿಗಳಿಗೆ ವಿವಿಧ ಪಿಂಚಣಿ ಯೋಜನೆಯನ್ನು ವಿತರಿಸಲಾಯಿತು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ನಗರಸಭೆ ಸದಸ್ಯರಾದ ಪ್ರಶಾಂತ್ ಅಮೀನ್, ನಾರಾಯಣ ಕುಂದರ್, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಜನಾರ್ದನ ಭಂಡಾರ್ಕರ್, ಚಂದ್ರಕಾಂತ್, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಪೌರಾಯುಕ್ತ ಡಿ.ಮಂಜುನಾಥಯ್ಯ ಮೊದಲಾದವರು ಉಪಸ್ಥಿತರಿದ್ದರು.







