ಸಂಘಟನೆಯ ಭಿನ್ನತೆಯ ಹೆಸರಿನಲ್ಲಿ ವಿದ್ವಾಂಸರನ್ನು ದೂಷಿಸದಿರಿ : ಶಾಫಿ ಸ ಅದಿ

ಕುವೈತ್ , ಡಿ. 24 : ಸಾಮಾಜಿಕ ತಾಣಗಳ ಬಳಕೆ ಅಧಿಕಗೊಳ್ಳುತ್ತಿರುವ ಆಧುನಿಕ ಕಾಲಘಟ್ಟದಲ್ಲಿ ಯಾವುದೇ ಪೂರ್ವಾಪರಗಳನ್ನು ತಿಳಿಯುವ ಪ್ರಯತ್ನ ನಡೆಸದೆ ಧಾರ್ಮಿಕ ನಾಯಕರನ್ನು ಏಕವಚನದಲ್ಲಿ ನಿಂದಿಸುವ ಪ್ರವೃತ್ತಿ ಅಧಿಕಗೊಳ್ಳುತ್ತಿದ್ದು, ಸಂಘಟನಾ ಭಿನ್ನತೆಯ ಹೆಸರಿನಲ್ಲಿ ವಿದ್ವಾಂಸರನ್ನು ದೂಷಿಸುತ್ತಿರುವುದು ದುರದೃಷ್ಟಕರ ಎಂದು ಶಾಫಿ ಸಅದಿಯವರು ಕುವೈತ್ ನಲ್ಲಿ ನಡೆದ ಬೃಹತ್ ಇಲಲ್ ಹಬೀಬ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಪ್ರಪಂಚದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ ಪ್ರವಾದಿ (ಸ.ಅ) ರವರ ಜೀವನ . ಪ್ರವಾದಿ (ಸ .ಅ) ರವರ ಜೀವನ ಶೈಲಿ, ಅವರು ತೋರಿಸಿಕೊಟ್ಟ ಮಾನವೀಯತೆಯ ಹಾದಿಯನ್ನು ಅಧ್ಯಯನ ನಡೆಸಿ ಜಗತ್ತಿನ ಮುಂದುವರಿದ ದೇಶಗಳಲ್ಲಿ ಇಸ್ಲಾಮಿನತ್ತ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಪ್ರವಾದಿರವರು ತೋರಿಸಿಕೊಟ್ಟ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವಿಸಬೇಕು.
ಸಣ್ಣ ಒಂದು ಪಟಾಕಿ ಸ್ಪೋಟಗೊಂಡರೂ ಮುಸ್ಲಿಮರ ಹೆಸರು ಕಾಣಿಸಿದ ಮಾತ್ರಕ್ಕೆ ಅದನ್ನು ವೈಭವೀಕರಿಸಿ ಸುದ್ದಿ ಪ್ರಕಟಿಸುವ ಮಾಧ್ಯಮಗಳು ಬರ್ಮಾ, ಸಿರಿಯ, ಪ್ಯಾಲೆಸ್ತೀನ್ ನಲ್ಲಿ ಅನ್ಯಾಯವಾಗಿ ಕೊಲೆಗೀಡಾಗುತ್ತಿರುವ ಸಣ್ಣ ಮಕ್ಕಳ ಕುರಿತು ವರದಿ ಪ್ರಕಟಿಸದೇ ಇರುವುದು ದುರಂತ.
ಹೈದರಬಾದ್ ಸ್ಪೋಟದಲ್ಲಿ ಆರೋಪಿಗಳಾದ ಯಾಸೀನ್ ಭಟ್ಕಳ್ ಹಾಗೂ ಸಹಚರರಿಗೆ ಮೂರು ವರ್ಷದಲ್ಲಿ ಗಲ್ಲು ಶಿಕ್ಷೆ ವಿಧಿಸುವ ನ್ಯಾಯಾಲಯ, ಅದೇ ರೀತಿಯಲ್ಲಿ ಬಾಬರೀ ಮಸ್ಜಿದ್ ಧ್ವಂಸ ,ಮಾಲೆಂಗಾವ್ ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್, ಮೆಕ್ಕಾ ಸ್ಫೋಟದ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಿ ಮುಸ್ಲಿಮರು ಇಲ್ಲಿನ ನ್ಯಾಯ ವ್ಯವಸ್ಥೆಯ ಮೇಲೆ ಇಟ್ಟಂತಹ ನಂಬಿಕೆಯನ್ನು ಹುಸಿಯಾಗಿಸದಿರಲಿ ಎಂದು ಹೇಳಿದ ಅವರು , ಕರ್ನಾಟಕ ರಾಜ್ಯದಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ಎರಡನೇ ಅತೀ ದೊಡ್ಡ ಜನಸಂಖ್ಯೆ ಮುಸ್ಲಿಮರದ್ದಾಗಿರುತ್ತದೆ. ಅದರಲ್ಲಿ ಉತ್ತರ ಕನ್ನಡ, ಹೃದರಾಬಾದ್ ಕನ್ನಡ ಭಾಗದ ಮುಸ್ಲಿಮರ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಒಂದು ಹೊತ್ತಿನ ಊಟ ,ವಿದ್ಯಾಭ್ಯಾಸಗಳನ್ನು ಪಡೆಯಲು ಸಾಧ್ಯವಾಗದೆ ಸ್ಲಮ್ ಗಳಲ್ಲಿ ಜೀವಿಸಿ ರಾಜ್ಯ ಸರ್ಕಾರ ನೀಡುತ್ತಿರುವ ಅನ್ನಭಾಗ್ಯದಿಂದ ಜೀವನವನ್ನು ಮುನ್ನಡೆಸುತ್ತಿದ್ದಾರೆ.
ಕರ್ನಾಟಕದ ಮುಸ್ಲಿಮರ ಶೋಚನೀಯ ಅವಸ್ಥೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಲ್ತಾನುಲ್ ಉಲಮಾ ರವರ ಸಾರಥ್ಯದಲ್ಲಿ ಕರ್ನಾಟಕ ಯಾತ್ರೆ ನಡೆಸಿದಾಗ ಅದರ ವಿರುದ್ಧವೂ ಅಪಸ್ವರ ಕೇಳಿಬಂತು. ಯಾರನ್ನು ವೈಭವೀಕರಿಸಲೋ, ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲೋ ಕಾರ್ಯಕ್ರಮ ಸಂಘಟಿಸುವ ಅಗತ್ಯತೆ ಎಸ್ಸೆಸ್ಸಫ್ ಗೆ ಇಲ್ಲ. ಕಳೆದ ಹತ್ತು ವರ್ಷಗಳಿಂದ ಧಾರ್ಮಿಕತೆಯ ಅರಿವಿಲ್ಲದೆ ಬದುಕುತ್ತಿದ್ದ ಉತ್ತರ ಕನ್ನಡ ಹಾಗೂ ಮಧ್ಯ ಭಾಗದ ಜನರಿಗೆ ಧಾರ್ಮಿಕತೆಯ ಅರಿವನ್ನು ಮೂಡಿಸುವ ಸಲುವಾಗಿ ತಿಂಗಳಿಗೆ ಸರಿಸುಮಾರು ಎರಡೂವರೆ ಲಕ್ಷದಷ್ಟು ಖರ್ಚು ಮಾಡಿ ಇಪ್ಪತ್ತಕ್ಕಿಂತಲೂ ಅಧಿಕ ಉಸ್ತಾದರನ್ನು ನೇಮಿಸಿ ಅವರಿಗೆ ಧಾರ್ಮಿಕ ಅರಿವನ್ನು ಕಲಿಸಿಕೊಡುವಲ್ಲಿ ಎಸ್ಸೆಸ್ಸಫ್ ಗೆ ಸಾಧ್ಯವಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಹತ್ತಕ್ಕಿಂತಲೂ ಅಧಿಕ ಮಸೀದಿ ಹಾಗೂ ಹಲವಾರು ಮದ್ರಸಾಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಎಸ್ಸೆಸ್ಸಫ್ ಐಕ್ಯತೆಗೆ ಯಾವತ್ತೂ ಬದ್ಧವಾಗಿರುತ್ತದೆ. ಯಾವತ್ತೂ ಗ್ರೂಪಿಝಂ ಗೆ ಬೆಂಬಲ ನೀಡುವ ಸಂಘಟನೆಯಲ್ಲ. ಗ್ರೂಪಿಝಂ ಮಾಡುವ ಉದ್ದೇಶವನ್ನು ಹೊಂದಿದ ಯಾರಿಗೂ ಎಸ್ಸೆಸ್ಸಫ್, ಕೆ.ಸಿ.ಎಫ್ ಸಂಘಟನೆಯ ಸದಸ್ಯತನ ಪಡೆಯುವ ಅರ್ಹತೆಯಿಲ್ಲ. ಐಕ್ಯತೆಗೆ ಬೇಕಾದ ಎಲ್ಲಾ ಪ್ರಯತ್ನಗಳು ಎಸ್ಸೆಸ್ಸಫ್ ನಡೆಸುತ್ತಾ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಝೀರ್ ನಯೀಮಿ ವಹಿಸಿದ್ದರು.
ಸಯ್ಯದ್ ಆಲವಿ ಸಖಾಫಿ ತಂಙಳ್ ದುವಾಗೆ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಹಕೀಮ್ ದಾರಿಮಿ,ಹಬೀಬ್ ಕೋಯ, ಸಯ್ಯದ್ ಹಬೀಬ್ ತಂಙಳ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಅಹ್ಮದ್ ನಬೀಲ್ ಬರಕಾತಿ ಬೆಂಗಳೂರು ಇವರಿಂದ ನಾತ್ ಕಾರ್ಯಕ್ರಮ ನಡೆಯಿತು.







