ದೀರ್ಘಾವಧಿಯ ಲಾಭಕ್ಕಾಗಿ ಅಲ್ಪಾವಧಿಯ ನೋವು: ಮೋದಿ
ನೋಟು ರದ್ದತಿ
ಮುಂಬೈ,ಡಿ.24: ನೋಟು ರದ್ದತಿಯಿಂದಾಗಿ ಸೃಷ್ಟಿಯಾಗಿರುವ ತೊಂದರೆಗಳು ಕೇವಲ ತಾತ್ಕಾಲಿಕವಾಗಿದ್ದು, ದೀರ್ಘಾವಧಿಯಲ್ಲಿ ಅದು ಲಾಭದಾಯಕವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದರು.
ಮಹಾರಾಷ್ಟ್ರದ ರಾಯಗಡದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ನ ನೂತನ ಕ್ಯಾಂಪಸ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ತನ್ನ ಸರಕಾರವು ಸದೃಢ ಮತ್ತು ವಿವೇಚನೆಯುಳ್ಳ ಆರ್ಥಿಕ ನೀತಿಗಳನ್ನು ಮುಂದುವರಿಸಲಿದೆ. ಅಲ್ಪಕಾಲೀನ ರಾಜಕೀಯ ಗಳಿಕೆಗಾಗಿ ಅದು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಒಂದು ತಲೆಮಾರಿನಲ್ಲಿ ಭಾರತವನ್ನು ಶ್ರೀಮಂತ ರಾಷ್ಟ್ರವನ್ನಾಗಿಸುವುದು ತನ್ನ ಕನಸು ಎಂದ ಅವರು, ತನ್ನ ಸರಕಾರವು ಮೂರು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ದೇಶದ ಆರ್ಥಿಕತೆಯಲ್ಲಿ ಪರಿವರ್ತನೆಗಳನ್ನು ತಂದಿದೆ ಎಂದರು.
ಭಾರತವು ಒಳ್ಳೆಯ ಆಡಳಿತವಿರುವ ತನ್ನ ಶೇರು ಮಾರುಕಟ್ಟೆಗಳಿಗಾಗಿ ವಿಶ್ವದಲ್ಲಿ ಹೆಸರು ಪಡೆದಿದೆ ಎಂದ ಮೋದಿ, ಈ ವರ್ಷ ಹಲವಾರು ಆರಂಭಿಕ ಸಾರ್ವಜನಿಕ ನೀಡಿಕೆ(ಐಪಿಒ)ಗಳಿಗೆ ಅನುಮತಿ ನೀಡಿದ್ದಕ್ಕೆ ಸೆಬಿಯನ್ನು ಅಭಿನಂದಿಸಿದರು.
ಇ-ನ್ಯಾಮ್ ಮೂಲಕ ಬಂಡವಾಳ ಮತ್ತು ಕೃಷಿ ಮಾರುಕಟ್ಟೆಗಳನ್ನು ಜೋಡಿಸುವಂತೆ ಸೆಬಿಗೆ ಅವರು ಸೂಚಿಸಿದರು. ಯಶಸ್ಸಿನ ನಿಜವಾದ ಅಳತೆಗೋಲು ಗ್ರಾಮಗಳಲ್ಲಿನ ಪರಿಣಾಮಗಳು ಆಗಿದೆಯೇ ಹೊರತು, ದಲಾಲ್ ಸ್ಟ್ರೀಟ್ ಅಥವಾ ದಿಲ್ಲಿಯ ಲುಟೈನ್ಸ್ ನಲ್ಲಿನ ಪರಿಣಾಮಗಳಲ್ಲ ಎಂದು ಅವರು ಹೇಳಿದರು.





