ಜಲಸಂರಕ್ಷಣೆಗೆ ಟೊಂಕ ಕಟ್ಟಿದಆಧುನಿಕ ಭಗೀರಥ
ಮತ್ತೊಬ್ಬ ಅನುಪಮ್ ಮಿಶ್ರಾ ಸಿಗುವುದು ಕಷ್ಟ...
![ಜಲಸಂರಕ್ಷಣೆಗೆ ಟೊಂಕ ಕಟ್ಟಿದಆಧುನಿಕ ಭಗೀರಥ ಜಲಸಂರಕ್ಷಣೆಗೆ ಟೊಂಕ ಕಟ್ಟಿದಆಧುನಿಕ ಭಗೀರಥ](https://www.varthabharati.in/sites/default/files/images/articles/2016/12/25/133781_800x600.gif)
ಭಾರತದ ನದಿಗಳಿಗಾಗಿ ಹೋರಾಟ ಮಾಡುವ ಜನರ ಬಳಿಗೆ ಹೋಗಿ ಅವರಿಗೆ ಗೌರವ ಸಮರ್ಪಿಸಬೇಕಾಗಿದೆ ಹಿರಿಯ ಗಾಂಧಿವಾದಿ ನಡೆಯಲು ಸಾಧ್ಯವಿಲ್ಲದಿದ್ದರೂ ನವೆಂಬರ್ 28ರಂದು ತಮ್ಮ ಒತ್ತಾಸೆ ವ್ಯಕ್ತಪಡಿಸಿದರು. ಭಾರತ ನದಿಗಳ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಅನುಪಮ್ ಮಿಶ್ರಾ ತಮ್ಮ ಹಾಸ್ಯಮಿಶ್ರಿತ ಶೈಲಿಯಲ್ಲಿ, ‘‘ನದಿಘಟ್ಟಗಳಲ್ಲಿ ಕಲ್ಲುಗಳು ಹಾಗೂ ವಿದ್ಯುತ್ ಕಂಬಗಳನ್ನು ಬದಲಿಸುವ ಮೂಲಕ ಸರಕಾರ ಗಂಗಾನದಿ ಪುನರುಜ್ಜೀವನಕ್ಕೆ ಹೊರಟಿದೆಯೇ’’ ಎಂದು ಕೇಳಿದರು. ಎಷ್ಟರ ಮಟ್ಟಿಗೆ ನಿಧಿ ಅಥವಾ ನಂಬಿಕೆ ಇದ್ದರೂ, ನದಿಗೆ ತಾಜಾ ನೀರು ಎಲ್ಲಿಂದ ಬರುತ್ತಿದೆ ಹಾಗೂ ಎಲ್ಲಿ ಅದು ಮಲಿನವಾಗುತ್ತಿದೆ ಎಂದು ಅರ್ಥಮಾಡಿಕೊಳ್ಳದಿದ್ದರೆ, ಯಾವ ಪ್ರಯೋಜನವೂ ಆಗದು ಎಂದು ನಿಷ್ಠುರವಾಗಿ ಹೇಳಿದರು.
20 ದಿನಗಳ ಬಳಿಕ ಅನುಪಮ್ಜಿ ಇನ್ನಿಲ್ಲ ಎಂದರೆ ನನಗೆ ನಂಬಲು ಕೂಡಾ ಸಾಧ್ಯವಾಗಲ್ಲ. 2016ರ ಡಿಸೆಂಬರ್ 19ರಂದು ಮುಂಜಾನೆ 5:27ಕ್ಕೆ ಅವರು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಕೊನೆಯುಸಿರೆಳೆದರು. ಅವರು ಎರಡು ಬಗೆಯ ಕ್ಯಾನ್ಸರ್ನಿಂದ ಬಳಲುತ್ತಿದ್ದರು; ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸಮಸ್ಯೆ ಬಿಗಡಾಯಿಸಿದ ಬಳಿಕ, ಅವರನ್ನು ಉಳಿಸಲು ಎಐಐಎಂಎಸ್ ವೈದ್ಯರು ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಆದರೆ ಪತ್ನಿ ಹಾಗೂ ಮಗ ಶುಭಂ ಅವರನ್ನು ಅನುಪಮ್ಜಿ ಅಗಲಿದರು.
ಮಹಾರಾಷ್ಟ್ರದ ವಾರ್ಧಾದಲ್ಲಿ 1946ರ ಜೂನ್ 5ರಂದು ಹುಟ್ಟಿದ ಅವರು, ಖ್ಯಾತ ಕವಿ ಭವಾನಿ ಪ್ರಸಾದ್ ಮಿಶ್ರಾ ಅವರ ಮಗ. 1969ರಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ರಾಜಧಾನಿಯ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಮಿಶ್ರಾ ಜೀವನದಲ್ಲಿ ಗಾಂಧಿವಾದಿ ಲೇಖಕ ಹಾಗೂ ಪರಿಸರವಾದಿ ಎಂಬ ಹೆಗ್ಗಳಿಕೆ ಪಡೆದರು. ನೀರಿನ ಸಂರಕ್ಷಣೆ ಹಾಗೂ ಮಳೆನೀರು ಕೊಯ್ಲಿನ ಸಾಂಪ್ರದಾಯಿಕ ತಂತ್ರಗಳು ಮತ್ತು ನಿರ್ವಹಣೆ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲು ಜೀವನ ಮುಡಿಪಾಗಿಟ್ಟರು. ಅವರು ಗಾಂಧಿ ಹೆಸರನ್ನು ಹೇಳುತ್ತಿದ್ದುದು ಕೂಡಾ ವಿರಳ. ಆದರೆ ಅವರು ಗಾಂಧೀಜಿ ತತ್ವ ಹಾಗೂ ಆದರ್ಶಗಳನ್ನು ಯುವಸಮುದಾಯವೂ ಸೇರಿದಂತೆ ಎಲ್ಲ ಜನರಿಗೆ ಮನವಿ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದರು. ಗಾಂಧಿ ಶಾಂತಿ ಪ್ರತಿಷ್ಠಾನ ಹೊರತರುವ ಗಾಂಧಿಮಾರ್ಗ ಎಂಬ ದ್ವೈಮಾಸಿಕ ನಿಯತಕಾಲಿಕದ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಭಾರತದ ಸಾಂಪ್ರದಾಯಿಕ ನೀರು ಕೊಯ್ಲು ತಂತ್ರಗಳ ಬಗ್ಗೆ ಅಧಿಕಾರಯುತ ವಾಗಿ ಮಾತನಾಡುವಷ್ಟು ಅಪಾರ ಜ್ಞಾನವನ್ನು ಅನುಮಪ್ಜಿ ಹೊಂದಿದ್ದರು. ಈ ವಿಷಯದ ಬಗ್ಗೆ ಎಂಟು ವರ್ಷಗಳ ಕಾಲ ಕ್ಷೇತ್ರ ಅಧ್ಯಯನ ಮೂಲಕ ತಿಳಿದುಕೊಂಡ ಅವರು, ‘‘ಆಜ್ ಭಿ ಖರೇ ಹೈನ್ ತಲಾಬ್’’ (ಕೆರೆಗಳು ಇಂದಿಗೂ ಪ್ರಸ್ತುತ) ಎಂಬ ಖ್ಯಾತ ಕೃತಿಯಲ್ಲಿ, ಸಾಂಪ್ರದಾಯಿಕ ಕೆರೆಗಳ ಬಗ್ಗೆ ಹಾಗೂ ನೀರು ನಿರ್ವಹಣೆಯ ಸಮಗ್ರ ವಿವರಗಳನ್ನು ದಾಖಲಿಸಿದ್ದಾರೆ. ಇದನ್ನು ಬ್ರೈಲ್ಭಾಷೆ ಸೇರಿದಂತೆ 19 ಭಾಷೆಗಳಿಗೆ ಭಾಷಾಂತರಿಸಲಾಗಿದೆ. ಕೃತಿಯ ಒಂದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. 1995ರಲ್ಲಿ ಪ್ರಕಟಿಸಿದ ‘‘ರಾಜಸ್ಥಾನ್ ಕಿ ರಜತ್ ಬೂಂದಿನ್’’ (ರಾಜಸ್ಥಾನದ ಪ್ರಖರ ಮಳೆಹನಿ) ಕೃತಿಯಲ್ಲಿ, ಪಶ್ಚಿಮ ರಾಜಸ್ಥಾನದ ಭಾಗಗಳಲ್ಲಿ ಮಳೆ ನೀರು ಕೊಯ್ಲು ಹಾಗೂ ನಿರ್ವಹಣೆ ಬಗ್ಗೆ ವಿವರಗಳನ್ನು ನೀಡಿದ್ದಾರೆ.
ರಾಜಸ್ಥಾನ್ ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶ ಸೇರಿದಂತೆ ದೇಶದ ಉದ್ದಗಲಕ್ಕೂ ನಗರ, ಪಟ್ಟಣ ಹಾಗೂ ಹಳ್ಳಿಗಳಿಗೆ ಭೇಟಿ ನೀಡಿದ ಅವರು, ಮಳೆ ನೀರು ಕೊಯ್ಲಿನ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿದರು. ಸೋಜಿಗವೆಂದರೆ ಅವರ ಕೃತಿಗಳು ಕೃತಿಸ್ವಾಮ್ಯದಿಂದ ಮುಕ್ತವಾಗಿದ್ದು, ವೆಬ್ತಾಣದಲ್ಲಿ ಇದರ ಪಿಡಿಎಫ್ ಪ್ರತಿಗಳು ಉಚಿತವಾಗಿ ಸಿಗುತ್ತವೆ. ಅವರ ಮಾಡಿದ ಏಕೈಕ ಕೋರಿಕೆ ಎಂದರೆ, ಮಾಹಿತಿಯ ಮೂಲವನ್ನು ಉಲ್ಲೇಖಿಸಿದರೆ ಉತ್ತಮ ಎನ್ನುವುದು. ಅವರ ಕೃತಿಯ ಪರಿಣಾಮವೋ ಗೊತ್ತಿಲ್ಲ; ರಾಜಸ್ಥಾನ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಇತರೆಡೆಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಸ್ಥಳೀಯ ಜಲ ವ್ಯವಸ್ಥೆಯನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷ ಸ್ಫೂರ್ತಿ ನೀಡಿದ್ದು, ಅನುಪಮ್ಜಿ ಅವರ ಕೃತಿ.
ಅನುಪಮ್ಜಿ ಅವರಿಗೆ 1996ರಲ್ಲಿ ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರವನ್ನು ಪರಿಸರ ಸಚಿವಾಲಯ ನೀಡಿ ಗೌರವಿಸಿತ್ತು. ಮಧ್ಯಪ್ರದೇಶ ಸರಕಾರ ಇವರಿಗೆ 2007ರಲ್ಲಿ ಅಮರ್ ಶಹೀದ್ ಚಂದ್ರಶೇಖರ ಆಝಾದ್ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಿತ್ತು. ಇವರು ನೀರು ಕೊಯ್ಲಿನ ಪ್ರಾಚೀನ ವಿಧಾನಗಳು ಎಂಬ ಬಗ್ಗೆ ಟಿಇಡಿ ಉಪನ್ಯಾಸವನ್ನೂ ಅವರು 2009ರಲ್ಲಿ ನೀಡಿದ್ದರು. ಜಮ್ನಾಲಾಲ್ ಬಜಾಜ್ ಪುರಸ್ಕಾರಕ್ಕೆ 2011ರಲ್ಲಿ ಪಾತ್ರರಾಗಿದ್ದರು.
ಈ ಪ್ರಶಸ್ತಿ-ಪುರಸ್ಕಾರಗಳ ಜತೆ ಅವರು ಭಾರತೀಯ ನದಿ ಸಪ್ತಾಹ-2016ರ ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭಗೀರಥ ಪ್ರಯಾಸ್ ಸನ್ಮಾನ್ ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಪುಗಾರರಾಗಿ 2014ರಿಂದ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಸರಿಯಿಲ್ಲದಿದ್ದರೂ, ಕೃಶ ಶರೀರ ಹೊಂದಿದ್ದರೂ, ಸಂಘಟನಾ ಸಮಿತಿ ಸಭೆಗಳಿಗೆ ಹಲವು ಬಾರಿ ಆಗಮಿಸಿದ್ದರು. ಇತ್ತೀಚೆಗೆ ಎಂದರೆ, ಸೆಪ್ಟಂಬರ್ನಲ್ಲಿ ಅವರು ಸಭೆಗೆ ಹಾಜರಾಗಿದ್ದರು.
ಭಾರತ ನದಿ ಸಪ್ತಾಹದ ಉದ್ಘಾಟನಾ ಸಮಾರಂಭದ ಚೇತೋಹಾರಿ ಭಾಷಣದ ಬಳಿಕ ಅವರು ಸಂಪೂರ್ಣವಾಗಿ ದಣಿದಿದ್ದರು. ಆದಾಗ್ಯೂ ಇದಕ್ಕೆ ಆಗಮಿಸುವ ಮೂಲಕ ನದಿ ಸಂರಕ್ಷಣೆ ವಿಷಯದ ಬಗೆಗಿನ ಬದ್ಧತೆ ಪ್ರದರ್ಶಿಸಿದ್ದರು.
ವೈಯಕ್ತಿಕವಾಗಿ ನನ್ನ ಎರಡು ದಶಕಗಳ ಚಟುವಟಿಕೆಗಳಿಗೆ ಅವರು ಉತ್ತೇಜನ ನೀಡುವವರು ಹಾಗೂ ತೀರಾ ಆಪ್ಯಾಯಮಾನವಾಗಿ ಕಾಣುವವರೂ ಆಗಿದ್ದರು. 20 ವರ್ಷದ ಹಿಂದೆ ನನಗೆ ಅಂಚೆ ಕಾರ್ಡ್ ಬರೆದಿದ್ದಾಗ, ಭಾರತದ ಜಲ ನೀತಿ ವಿಷಯಗಳ ಬಗ್ಗೆ ಆಗಷ್ಟೇ ಕಾರ್ಯ ಆರಂಭಿಸಿದ್ದೆ. ಅವರಿಂದ ಪತ್ರವನ್ನು ನಾನು ನಿರೀಕ್ಷಿಸಿಯೂ ಇರಲಿಲ್ಲ. ಆದರೆ ಆ ಬಳಿಕ ಅವರು ನಿರಂತರವಾಗಿ ನನಗೆ ಉತ್ತೇಜನ ನೀಡುತ್ತಲೇ ಬಂದಿದ್ದಾರೆ. ಭಾರತದ ಜಲ ಹಾಗೂ ಪರಿಸರದ ಸಮಸ್ಯೆಗಳ ಬಗ್ಗೆ ಕಾರ್ಯಪ್ರವೃತ್ತವಾದ ದೊಡ್ಡ ತಂಡವೇ ಅವರ ಹಿಂದಿದೆ ಎನ್ನುವುದು ನನಗೆ ಆ ಬಳಿಕ ಗಮನಕ್ಕೆ ಬಂತು.
ಮತ್ತೊಬ್ಬ ಅನುಪಮ್ಜಿಯವರು ಭಾರತಕ್ಕೆ ಸಿಗುವುದು ಕಷ್ಟ. ಡೆಹ್ರಾಡೂನ್ನ ಪೀಪಲ್ಸ್ ಸೈನ್ಸ್ ಇನ್ಸ್ಟಿಟ್ಯೂಟ್ ನಿರ್ದೇಶಕ ರವಿ ಛೋಪ್ರಾ ಹೇಳುವಂತೆ, ‘‘ಅವರು ನಿಜವಾಗಿಯೂ ವಿಶಿಷ್ಟ. ಹೋಲಿಕೆ ಇಲ್ಲದ ಅಪರೂಪದ ವ್ಯಕ್ತಿ.’’ ಸ್ನೇಹಿತನಾಗಿ, ಸಹೋದ್ಯೋಗಿಯಾಗಿ ಅವರನ್ನು ಕಳೆದುಕೊಂಡ ನನಗೆ ಇಷ್ಟೊಂದು ಕಳವಳವಾಗಿದೆ ಎಂದರೆ, ಅವರ ನಿಕಟ ಕುಟುಂಬ ಹಾಗೂ ಸ್ನೇಹಿತರಿಗೆ ಎಂಥ ದುಃಖವಾಗಿರಬೇಡ ಎಂದು ನಾನು ಕಲ್ಪಿಸಿಕೊಳ್ಳಬಲ್ಲೆ. ಅವರು ಹಾಕಿಕೊಟ್ಟ ಮಾರ್ಗ ಎಷ್ಟು ಸಮೃದ್ಧ ಎಂದರೆ, ಅದು ಎಂದೂ ಮಸುಕಾಗದು ಎಂದೇ ಹೇಳಬಹುದು. ಕೊನೆಯದಾಗಿ ಸಾರ್ವಜನಿಕವಾಗಿ ಅವರು ಕಾಣಿಸಿಕೊಂಡಾಗ ತೀರಾ ನೋವಿನಿಂದಲೇ ಭಾಷಣ ಮಾಡಿದರು. ‘‘ನಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ನಾವು ನಮ್ಮ ನದಿಗಳನ್ನು ರಕ್ಷಿಸಬೇಕು’’ ಎಂದು ಹೇಳುವ ಮೂಲಕ ಭಾಷಣ ಪೂರ್ಣಗೊಳಿಸಿದ್ದರು. ನದಿಸಪ್ತಾಹ ನಿರಂತರವಾಗಿರಲಿ ಎಂದು ಆಶಿಸಿದ್ದರು.
ಬಹುಶಃ ಅವರ ಈ ಹೇಳಿಕೆಯೊಂದೇ ಪ್ರತಿದಿನ ನಮ್ಮ ಜವಾಬ್ದಾರಿಯನ್ನು ನೆನಪಿಸುವಷ್ಟು ಶಕ್ತಿಶಾಲಿ. ನಮ್ಮ ಕೆಲಸದಲ್ಲಿ ನಾವು ಜಯ ಸಾಧಿಸಲೇಬೇಕು.