ಶಿಕ್ಷಣದಲ್ಲಿ ರಾ.ಸೇ.ಯೋ. ಕಡ್ಡಾಯವಾಗಲಿ: ಎ.ಜಿ.ಕೊಡ್ಗಿ

ಅಮಾಸೆಬೈಲು, ಡಿ.25: ಇಂದಿನ ಶಿಕ್ಷಣ ಕೇವಲ ನಾಲ್ಕು ಗೋಡೆಗಳ ನಡುವಿಗಷ್ಟೇ ಸೀಮಿತ ಎಂಬ ಭಾವನೆ ಬೆಳೆಯುತ್ತಿದೆ. ನಮ್ಮ ಯುವಜನರಲ್ಲಿ ನೈತಿಕಸ್ಥೈರ್ಯ ಹಾಗೂ ಸ್ವಾಭಿಮಾನವನ್ನು ಬೆಳೆಸುವ ಬಗ್ಗೆ ಇಂದು ಚಿಂತಿಸ ಬೇಕಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಈ ಬದಲಾವಣೆ ಸಾಧ್ಯ. ಹೀಗಾಗಿ ಶಾಲಾ, ಕಾಲೇಜು ಶಿಕ್ಷಣದಲ್ಲಿ ಎನ್ನೆಸ್ಸೆಸ್ನ್ನು ಕಡ್ಡಾಯಗೊಳಿ ಸಬೇಕು ಎಂದು ಮಾಜಿ ಶಾಸಕ, ಪ್ರಗತಿಪರ ಕೃಷಿಕ ಎ.ಜಿ. ಕೊಡ್ಗಿ ಹೇಳಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ರಾ.ಸೇ.ಯೋ. ಘಟಕವು ಕುಂದಾಪುರ ತಾಲೂಕು ಅಮಾಸೆಬೈಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಾ.ಸೇ.ಯೋ. ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದು ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಜಾತಿ ವಿಷವೃಕ್ಷ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಭಾರತದ ಗೌರವ ಹೆಚ್ಚಿಸಿದ ನಮ್ಮ ಸಂಸ್ಕೃತಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಅಳಿವಿನ ಅಂಚಿನಲ್ಲಿದೆ. ಆದುದರಿಂದ ವಿದ್ಯಾರ್ಥಿಗಳಿಗೆ ಎನ್ನೆಸ್ಸೆಸ್ ಮೂಲಕ ಸೇವಾ ಮನೋಭಾವವನ್ನು ರೂಢಿಸಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಗದೀಶ ಶೆಟ್ಟಿ ವಹಿಸಿದ್ದರು.
ಅಮಾಸೆಬೈಲು ಗ್ರಾಪಂ ಜಯಲಕ್ಷ್ಮೀ ಶೆಟ್ಟಿ, ಸದಸ್ಯೆ ಸುಪ್ರೀತಾ ಕುಲಾಲ್, ಕುಂದಾಪುರ ವಲಯ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಸೂರಪ್ಪಹೆಗ್ಡೆ, ಸ.ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಶೇಖರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿರಾಜ ಹೆಗ್ಡೆ, ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಾಧಿಕಾರಿ ಕಿಶೋರ್ ರಾವ್, ಶಿಬಿರಾಧಿಕಾರಿಗಳಾದ ಬಾಲರಾಜ್, ಸೌಮ್ಯ ಶೆಟ್ಟಿ, ಗೌರವ ಸಲಹೆಗಾರರಾದ ಡಾ.ಶ್ರೀಕಾಂತ್ ಸಿದ್ದಾಪುರ, ಮಂಜುನಾಥ ಕರಬ ಹಾಗೂ ಸುಕುಮಾರ್ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಬಾಲರಾಜ್ ಸ್ವಾಗತಿಸಿ ಅವಿನಾಶ್ ವಂದಿಸಿದರು. ಶ್ರುತಿ ರಾವ್ ಕಾರ್ಯಕ್ರಮ ನಿರೂಪಿಸಿದರು.







