ಕುದಿಯುತ್ತಿದ್ದ ಸಾಂಬಾರ್ಗೆ ಬಿದ್ದು ಬಾಲಕ ಮೃತ್ಯು
ತೆಲಂಗಾಣ, ಡಿ.25: ಇಲ್ಲಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸಾಂಬಾರು ಪಾತ್ರೆಗೆ ಬಿದ್ದ 6ರ ಹರೆಯದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮಧ್ಯಾಹ್ನದ ಊಟಕ್ಕಾಗಿ ಶಾಲಾ ಮಕ್ಕಳು ಸರತಿ ಸಾಲಿನಲ್ಲಿ ನಿಂತಿದ್ದಾಗ ಮಕ್ಕಳ ಮಧ್ಯೆ ತಳ್ಳಾಟ ನಡೆಯಿತು. ಈ ವೇಳೆ ಜಯವರ್ಧನ್ ಎಂಬ ಬಾಲಕ ಆಯತಪ್ಪಿ ಕುದಿಯುತ್ತಿದ್ದ ಸಾಂಬಾರ್ ಪಾತ್ರೆಯೊಳಗೆ ಬಿದ್ದುಬಿಟ್ಟ. ತೀವ್ರ ಸುಟ್ಟ ಗಾಯಗೊಂಡ ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಗೌರವ್ ಉಪ್ಪಳ್ ಆಸ್ಪತ್ರೆಗೆ ತೆರಳಿ ಬಾಲಕನ ಕುಟುಂಬ ಸದಸ್ಯರನ್ನು ಭೇಟಿಯಾದರು. ಈ ಮಧ್ಯೆ, ಶಾಲಾ ಶಿಕ್ಷಕರು ಮತ್ತು ಬಿಸಿಯೂಟ ಯೋಜನೆಯ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಬಾಲಕನ ಕುಟುಂಬದವರಿಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ಹೈದರಾಬಾದ್ನ ಮಕ್ಕಳ ಹಕ್ಕುಗಳ ಸಂಸ್ಥೆ- ಬಾಲಲ ಹಕ್ಕುಲ ಸಂಘಂ ಒತ್ತಾಯಿಸಿದೆ.
Next Story





