ಕಾರ್ಮಿಕ ಮಹಿಳೆಯ ಖಾತೆಯಲ್ಲಿ 100 ಕೋಟಿ ರೂ.: ಪ್ರಧಾನಿಗೆ ಪತ್ರ ಬರೆದ ಪತಿ
ಮೀರತ್,ಡಿ.26: ನೋಟು ಅಮಾನ್ಯಗೊಂಡ ಬಳಿಕ ಸಾಮಾನ್ಯ ಜನರ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಪ್ರಕರಣ ವರದಿಯಾಗುತ್ತಲೇ ಇವೆ. ಉತ್ತರ ಪ್ರದೇಶದ ಮೀರತ್ನ ಕಾರ್ಮಿಕ ಮಹಿಳೆಯ ಜನಧನ್ ಖಾತೆಗೆ ಸುಮಾರು 100 ಕೋಟಿ ರೂಪಾಯಿ ಜಮೆ ಮಾಡಲಾಗಿದೆ. ಈ ವಿಷಯ ತಿಳಿದ ಮಹಿಳೆ ಹಾಗೂ ಅವರ ಪತಿ ಅಶ್ಚರ್ಯಗೊಂಡು ಕೂಡಲೇ ಮಹಿಳೆಯ ಪತಿ ಪ್ರಧಾನಿಗೆ ಪತ್ರ ಬರೆದಿದ್ದಾರೆಂದು ವರದಿಯೊಂದು ತಿಳಿಸಿದೆ. ಮೀರತ್ ಮಾಧ್ವಗಂಜ್ ಠಾಣಾ ವ್ಯಾಪ್ತಿಯ ನಿವಾಸಿ ಶೀತಲ್ ಯಾದವ್ 2015ರಲ್ಲಿ ಶಾರದಾ ರಸ್ತೆ ಸ್ಟೇಟ್ಬ್ಯಾಂಕ್ನಲ್ಲಿ ಜನಧನ್ ಖಾತೆ ತೆರೆದಿದ್ದರು. ಅದರಲ್ಲಿ ಕಾರ್ಖಾನೆಯೊಂದರಲ್ಲಿ ದುಡಿಯುತ್ತಿದ್ದ ತಿಂಗಳ ಸಂಬಳ ಐದು ಸಾವಿರ ರೂಪಾಯಿ ಜಮೆ ಆಗುತ್ತಿತ್ತು. ಡಿಸೆಂಬರ್ 18ಕ್ಕೆ ತನ್ನ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದಾಗ ಖಾತೆಯಲ್ಲಿ 99ಕೋಟಿ, 99 ಲಕ್ಷ 99 ಸಾವಿರದ 394 ರೂಪಾಯಿ ಜಮೆಯಾಗಿರುವುದು ಗೊತ್ತಾಗಿದೆ. ತನ್ನ ಖಾತೆಯಲ್ಲಿ ಜಮೆ ಆದ ಹಣದ ಬಗ್ಗೆ ಪತಿ-ಪತ್ನಿ ಇಬ್ಬರು ಬ್ಯಾಂಕ್ಗೆ ಹೋಗಿ ಅಧಿಕಾರಿಗಳಿಗೆ ವಿವರಿಸಿದ್ದರು. ಕಡೆಗಣಿಸಿದ್ದರು. ಬ್ಯಾಂಕ್ ಮ್ಯಾನೇಜರ್ ಈಗ ಇಲ್ಲ. ಬಂದ ಮೇಲೆ ಎಲ್ಲ ಸರಿಯಾಗುತ್ತದೆ ಎಂದು ಬ್ಯಾಂಕ್ನ ಅಧಿಕಾರಿಗಳು ಹೇಳಿ ಕಳುಹಿಸಿದ್ದರು. ನಂತರ ಮಹಿಳೆಯ ಪತಿ ಜಿಲೆದಾರ್ ಸಿಂಗ್ ಪ್ರಧಾನಿಗೆ ಇಮೇಲ್ ಮಾಡಿ ತನಿಖೆ ನಡೆಸಲು ಕೋರಿದ್ದಾರೆ. ಜೊತೆಗೆ ಆದಾಯ ತೆರಿಗೆ ಇಲಾಖೆ, ಸ್ಟೇಟ್ಬ್ಯಾಂಕ್ನ ಹಿರಿಯ ಅಧಿಕಾರಿಗಳಿಗೂ ಇಮೇಲ್ ಕಳುಹಿಸಿದ್ದಾರೆ. ಅನಿರೀಕ್ಷಿತವಾಗಿ ಮಹಿಳೆಯ ಖಾತೆಗೆ ಇಷ್ಟು ಹಣ ಜಮೆ ಆದದ್ದು ನೋಡಿ ಅವರ ಇಡೀ ಕುಟುಂಬ ಆತಂಕಗೊಂಡಿದೆ ಎಂದು ವರದಿ ತಿಳಿಸಿದೆ.





