ನನ್ನ ಆರೋಪದಿಂದ ಪ್ರಧಾನಿ ವಿಚಲಿತ: ರಾಹುಲ್

ಹೊಸದಿಲ್ಲಿ, ಡಿ.27: ಟಿಎಂಸಿ ವರಿಷ್ಠ ಮಮತಾ ಬ್ಯಾನರ್ಜಿ ಹಾಗೂ ಇತರ ಕೆಲವು ಪಕ್ಷಗಳ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯೊಂದನ್ನು ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿಯವರಿಂದು, ನೋಟು ರದ್ದತಿಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. ಅವರು ಪ್ರಧಾನಿಯ ವಿರುದ್ಧದ ತನ್ನ ಭ್ರಷ್ಟಾಚಾರ ಆರೋಪವನ್ನು ಪುನರುಚ್ಚರಿಸಿದ್ದಾರೆ.
ಪ್ರಧಾನಿ ಭ್ರಷ್ಟಾಚಾರ ಆರೋಪದ ಬಗ್ಗೆ ವಿವರಣೆ ನೀಡಬೇಕು ಎಂದು ರಾಹುಲ್ ಆಗ್ರಹಿಸಿದ್ದಾರೆ. ರಾಹುಲ್ರಿಗೆ ಪ್ರೌಢತೆ ಹಾಗೂ ಗುರುತ್ವದ ಅಭಾವವಿದೆ ಎನ್ನುವ ಮೂಲಕ ಬಿಜೆಪಿ ಅವರ ಆರೋಪವನ್ನು ತಳ್ಳಿ ಹಾಕಿದೆ. ಪ್ರಧಾನಿ ತನ್ನ ವಾಗ್ದಾಳಿ ಹಾಗೂ ಟೀಕೆಗಳಿಂದ ವಿಚಲಿತರಾಗಿದ್ದಾರೆ. ಅವರು ಸ್ವತಃ ವಿಚಲಿತ ಹಾಗೂ ಕಂಗಾಲಾಗಿದ್ದಾರೆ. ಅದನ್ನು ಅವರ ಮುಖದಲ್ಲಿ ಕಾಣಬಹುದು. ಯಾಕೆಂದರೆ ಈ ಡೈರಿಗಳು ಹಾಗೂ ಟೇಪ್ಗಳು ಸತ್ಯ ಹಾಗೂ ಸರಿಯಾದುದಾಗಿದೆಯೆಂದು ಅವರು ಹೇಳಿದ್ದಾರೆ.
ಇದೇ ವೇಳೆ, ನೋಟು ರದ್ದತಿಯ ಬಗ್ಗೆ ಪ್ರಧಾನಿಯ ವಿರುದ್ಧ ಹರಿಹಾಯ್ದಿರುವ ಮಮತಾ ಬ್ಯಾನರ್ಜಿ ನಗದು ಕೊರತೆಯ ನಡುವೆ ಅದರಿಂದ ಜನರಿಗಾದ ತೊಂದರೆಯನ್ನು ‘ಸೂಪರ್ ಎಮರ್ಜೆನ್ಸಿ’ ಎಂದು ಕರೆದಿದ್ದಾರೆ. ಈ 50 ದಿನಗಳಲ್ಲಿ ನಮ್ಮ ದೇಶ 20 ವರ್ಷ ಹಿಂದೆ ಸರಿದಿದೆಯೆಂದು ಅವರು ಆರೋಪಿಸಿದ್ದಾರೆ.





