ಕೊಳವೆಬಾವಿ ಕೊರೆಯಲು ನಿರ್ಬಂಧ ರೈತರ ಆತ್ಮಹತ್ಯೆಗೆ ಪ್ರೇರಣೆ: ಆರೋಪ
ಸಾಗರ, ಡಿ.27: ರಾಜ್ಯದಲ್ಲಿ ಈಗಾಗಲೇ 1,650 ಕ್ಕೂ ಹೆಚ್ಚು ರೈತರು ವಿವಿಧ ಕಾರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಕೊಳವೆಬಾವಿ ಕೊರೆಯಲು ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಅಧಿಸೂಚನೆ ಹೊರಡಿಸುವ ಮೂಲಕ ಮತ್ತಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ನೀಡುತ್ತಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಬಿಜೆಪಿ ವತಿಯಿಂದ ಕೊಳವೆಬಾವಿ ತೆಗೆಯುವುದನ್ನು ನಿಷೇಧಿಸಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ, ತಕ್ಷಣ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್ ಮಾತನಾಡಿ, ಅಂತರ್ಜಲ ಕುಸಿಯುತ್ತಿದೆ ಎನ್ನುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೊಳವೆಬಾವಿ ಕೊರೆಯುವುದರ ಮೇಲೆ ನಿಷೇಧ ಹೇರಿರುವುದು ರೈತರಿಗೆ ಮರಣ ಶಾಸನವಾಗಿದೆ ಎಂದರು.
ಈಗಾಗಲೇ ಕೋಟ್ಯಾಧಿಪತಿಗಳು ಸಾಕಷ್ಟು ಬೋರ್ವೆಲ್ಗಳನ್ನು ತೆಗೆಸಿಕೊಂಡಿದ್ದಾರೆ. ಸಣ್ಣ ಹಾಗೂ ಅತಿಸಣ್ಣ ರೈತರು ಬೆಳೆ ಉಳಿಸಿಕೊಳ್ಳಲು ಬೋರ್ವೆಲ್ ತೆಗೆಯುವ ಸಂದರ್ಭದಲ್ಲಿ ಜಿಲ್ಲಾಡಳಿತ ಇಂತಹ ಕರಾಳ ಕಾನೂನು ಜಾರಿಗೆ ತಂದಿರುವುದು ಖಂಡನೀಯ. ತಕ್ಷಣ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಪ್ರಮುಖರಾದ ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭೀಮನೇರಿ ಶಿವಪ್ಪ, ವಿ.ಮಹೇಶ್, ಕೆ.ಆರ್. ಗಣೇಶ್ಪ್ರಸಾದ್, ಬಿ.ಮೋಹನ್, ರಘುಪತಿ ಭಟ್, ಕಲಸೆ ಚಂದ್ರಪ್ಪ, ಚೇತನರಾಜ್ ಕಣ್ಣೂರು ಮತ್ತಿತರರು ಹಾಜರಿದ್ದರು.







