ಹೊನ್ನಾವರ : ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆಗೆ ಸನ್ಮಾನ

ಹೊನ್ನಾವರ , ಡಿ. 27 : ಕುಮಟಾ ಹಾಗೂ ಹೊನ್ನಾವರ ತಾಲೂಕುಗಳು ತನಗೆ ಎರಡು ಕಣ್ಣುಗಳಿದ್ದಂತೆ. ಅಭಿವೃದ್ದಿಯಲ್ಲಿ ತಾರತಮ್ಯ ಮಾಡಿಲ್ಲ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕಿ ಹಾಗೂ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ ಶೆಟ್ಟಿ ಹೇಳಿದರು.
ಪಟ್ಟಣದ ಶರಾವತಿ ಕಲಾಮಂದಿರದಲ್ಲಿ ಬುಧವಾರ ಹೊನ್ನಾವರ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಂದು ಹೇಳಿದರು. ಕ್ಷೇತ್ರದ ಹೊನ್ನಾವರ ತಾಲೂಕಿಗೆ ಅಭಿವೃದ್ದಿಯ ಅಭಿವೃದ್ದಿಯ ಮಹಾಪೂರವೇ ಹರಿದುಬಂದಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಆರ್. ಎಸ್. ರಾಯ್ಕರ ಸಮಾರಂಭ ಉದ್ಘಾಟಿಸಿ ಮಾತನಾಡಿ, ದಿ. ಮೋಹನ ಶೆಟ್ಟಿಯವರು ಎಲ್ಲ ಸಮಾಜದವರೊಂದಿಗೆ ಆತ್ಮೀಯರಾಗಿದ್ದರು. ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆತು ಜನಪ್ರಿಯ ಶಾಸಕರಾಗಿ ಕೆಲಸ ಮಾಡಿದ್ದರು. ಅವರ ಅಕಾಲಿಕ ನಿಧನದ ನಂತರ ಅವರ ಧರ್ಮಪತ್ನಿ ಶಾರದಾ ಶೆಟ್ಟಿಯವರಿಗೆ ಕಾಂಗ್ರೆಸ್ ಪಕ್ಷ ಜನಸೇವೆಗೆ ಅವಕಾಶ ಮಾಡಿಕೊಟ್ಟಿದ್ದು ಅವರೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ರವಿಕುಮಾರ ಶೆಟ್ಟಿ ಮಾತನಾಡಿ, ಕೆಲವರು ಹೊನ್ನಾವರದಲ್ಲಿ ಅಭಿವೃದ್ದಿ ಆಗುತ್ತಿಲ್ಲ. ಕುಮಟಾದಲ್ಲಿ ಆಗುತ್ತಿದೆ ಎಂದು ಎಂದು ಮಾಡುತ್ತಿರುವ ಆರೋಪ ಸರಿಯಲ್ಲ. ಹೊನ್ನಾವರದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಹೊಸ ಕಟ್ಟಡ ಕಟ್ಟಲಾಗಿದೆ. ಯುಜಿಡಿ ಕಾಮಗಾರಿ ಆರಂಭಿಸಲಾಗಿದೆ. ಆದರೆ ಕುಮಟಾದಲ್ಲಿ ಮಿನಿವಿಧಾನ ಸೌಧ ಕಟ್ಟಡ ಇನ್ನೂ ಟೆಂಡರ್ ಹಂತದಲ್ಲಿದೆ. ಹಲವು ಅಭಿವೃದ್ದಿ ಕಾಮಗಾರಿಗಳು ಇನ್ನು ಆರಂಭವಾಗಬೇಕಿದೆ ಎಂದರು.
ಸನ್ಮಾನಿತ ತಾ.ಪಂ. ಅಧ್ಯಕ್ಷ ಅಣ್ಣಯ್ಯ ನಾಯ್ಕ ಮಾತನಾಡಿ ಕಾಂಗ್ರೆಸ್ ಬಲಯುತವಾಗಿದ್ದು ಶಾಸಕರು ಹೆಚ್ಚು ಜವಾಬ್ದಾರಿಯಿಂದ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ದಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಎಂದರು.
ಸನ್ಮಾನಿತ ಪ. ಪಂ. ಅಧ್ಯಕ್ಷೆ ಜೈನಾಬಿ ಸಾಬ್ ಕೃತಜ್ಞತಾ ಮಾತುಗಳನ್ನಾಡಿದರು. ತಾ.ಪಂ. ಅಧ್ಯಕ್ಷ ಅಣ್ಣಯ್ಯ ನಾಯ್ಕ, ಉಪಾಧ್ಯಕ್ಷೆ ಲಲಿತಾ ನಾಯ್ಕ, ಪ,ಪಂ. ಅಧ್ಯಕ್ಷೆ ಜೈನಾಬಿ ಸಾಬ್, ಉಪಾಧ್ಯಕ್ಷೆ ಶರಾವತಿ ಮೇಸ್ತ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ ತೆಂಗೇರಿ ಸ್ವಾಗತಿಸಿ ಮಾತನಾಡಿದರು. ಕಾಂಗ್ರೆಸ್ ಹಿರಿಯ ಮುಖಂಡ ರಾಮನಾಥ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡ ಕಾಮಿನ್ ಲೊಪಿಸ್, ಹಳದೀಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ದಾಮೋದರ ನಾಯ್ಕ, ನವಿಲಗೋಣ ಗ್ರಾ.ಪಂ. ಸದಸ್ಯ ವಿನಾಯಕ ಶೇಟ್, ಜಿ.ಪಂ. ಮಾಜಿ ಸದಸ್ಯೆ ಸರೋಜಾ ಪೂಜಾರಿ, ತಾ.ಪಂ. ಸದಸ್ಯೆ ಲಕ್ಷ್ಮೀ ಗೊಂಡ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಮೇಸ್ತ, ಕಡ್ಲೆ ಗ್ರಾ.ಪಂ. ಅಧ್ಯಕ್ಷೆ ಊರ್ಮಿಳಾ ಶೇಟ್, ಚಂದಾವರ ಗ್ರಾ.ಪಂ. ಅಧ್ಯಕ್ಷ ಚಂದ್ರು ನಾಯ್ಕ, ನವಿಲಗೋಣ ಗ್ರಾ.ಪಂ. ಅಧ್ಯಕ್ಷ ಸತೀಶ ಹೆಬ್ಬಾರ ಮತ್ತಿತರರು ಉಪಸ್ಥಿತರಿದ್ದರು.







