ಸಸಿಹಿತ್ಲು ಸರ್ಫೀಂಗ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ
.jpg)
ಮುಲ್ಕಿ, ಡಿ.27: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಮುಂಡ ಬೀಚಿನ ಸರ್ಫಿಂಗ್ ನಡೆಯುವ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್ ಭೇಟಿ ನೀಡಿ ಸ್ಥಳೀಯರೊಡನೆ ಸಮಾಲೋಚಿಸಿದರು.
ಈ ಸಂದಭರ್ ಸ್ಥಳೀಯರಾದ ವಾಸುದೇವ ಸಾಲ್ಯಾನ್ ಮಾತನಾಡಿ, ಬೀಚ್ ರಸ್ತೆಯಲ್ಲಿ ಕೆಲ ಪ್ರವಾಸಿಗರು ಅತೀ ವೇಗದಲ್ಲಿ ಬೈಕು ಚಾಲನೆ ಮಾಡಿ ಅಸ್ಯವಾಗಿ ವರ್ತಿಸುತ್ತಿದ್ದಾರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸ್ಥಳೀಯ ಮೀನುಗಾರಿಕಾ ಮಹಿಳೆಯರು ಮಾತನಾಡಿ, ಮೀನುಗಾರಿಕೆಗೆ ಅನುಕೂಲವಾಗುವಂತೆ ಸಮುದ್ರವನ್ನು ಆಳ ಮಾಡಬೇಕು ಎಂದು ವಿನಂತಿಸಿದರು.
ಈ ಬಗ್ಗೆ ಉತ್ತರಿಸಿದ ಜಿಲ್ಲಾಧಿಕಾರಿ ಅವರು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪ್ರವಾಸದ್ಯಮವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರವಾಸೋದ್ಯಮ ಬೆಳೆಯುತ್ತಿದ್ದಂತೆ ಮುಕ್ಕಾ-ಸಸಿಹಿತ್ಲು ರಸ್ತೆಯನ್ನು ದ್ವಿಪಥಗೊಳಿಸಬೇಕೆಂದು ಪಂಚಾಯತ್ ಸದಸ್ಯ ವಸಂತ್ ಬೆರ್ನಾರ್ಡ್ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.
ಸಸಿಹಿತ್ಲು ಬೀಚಿನ ದ್ವಾರದ ಬಳಿ ಸಂಜೆಯಾಗುತ್ತಲೇ ಪುಂಡರು ಮದ್ಯ ಸೇವಿಸಿ ಗಲಾಟೆ ಮಾಡುತ್ತಿರುತ್ತಾರೆ ಅವರನ್ನು ನಿಯಂತ್ರಿಸಲು ಪೊಲೀಸರಿಗೆ ಸೂಚನೆ ನೀಡಬೇಕು ಹಾಗೂ ಸಸಿಹಿತ್ಲು ರಸ್ತೆಯಲ್ಲಿ ಅತೀ ವೇಗ ಚಾಲನೆ ನಿಯಂತ್ರಿಸಲು ವೇಗತಡೆಗಳನ್ನು ಹಾಕಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ವಿನಂತಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು. ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ 15 ದಿನಗಳಲ್ಲಿ ಪ್ರವಾಸೋದ್ಯಮ ಹಾಗೂ ಸರ್ಫಿಂಗ್ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದಭರ್ ಜಿಲ್ಲಾಧಿಕಾರಿಗಳೊಡನೆ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜ, ದನಂಜಯ ಮಟ್ಟು, ದನರಾಜ ಸಸಹಿತ್ಲು ಮತ್ತು ಮುಲ್ಕಿಯ ತಹಶೀಲ್ದಾರ್ ಕಿಶೋರ್ ಮತ್ತಿತರರಿದ್ದರು.







