ಆಜೀವ ಅಧ್ಯಕ್ಷ ಸ್ಥಾನ ನಿರಾಕರಿಸಿದ ಕಲ್ಮಾಡಿ
ಐಒಎಗೆ ಕ್ರೀಡಾ ಸಚಿವಾಲಯದ ಶೋಕಾಸ್ ನೋಟಿಸ್
ಹೊಸದಿಲ್ಲಿ,ಡಿ.28: ಕಳಂಕಿತ ಮಾಜಿ ಅಧ್ಯಕ್ಷರಾದ ಸುರೇಶ ಕಲ್ಮಾಡಿ ಮತ್ತು ಅಭಯಸಿಂಗ್ ಚೌತಾಲಾ ಅವರನ್ನು ತನ್ನ ಆಜೀವ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಯ ಕ್ರಮ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಮಾಡಿ ಬುಧವಾರ ಈ ಹುದ್ದೆಯನ್ನು ನಿರಾಕರಿಸಿದ್ದರೆ, ಐಒಎದ ವಿವಾದಾತ್ಮಕ ನಿರ್ಧಾರಕ್ಕಾಗಿ ಕ್ರೀಡಾ ಸಚಿವಾಲಯವು ಅದಕ್ಕೆ ಶೋಕಾಸ್ ನೋಟಿಸನ್ನು ಹೊರಡಿಸಿದೆ. ಈ ಇಬ್ಬರನ್ನೂ ಆಜೀವ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸದಿದ್ದರೆ ಐಒಎ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ಬೆದರಿಕೆಯನ್ನೂ ಅದು ಒಡ್ಡಿದೆ.
ಕಲ್ಮಾಡಿಯವರು ಸ್ಥಾನವನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಐಒಎ ತನ್ನನ್ನು ಆಜೀವ ಅಧ್ಯಕ್ಷನನ್ನಾಗಿ ನೇಮಿಸಲಿದೆ ಎಂಬ ವಿಷಯವೂ ಅವರಿಗೆ ಗೊತ್ತಿರಲಿಲ್ಲ. ಆರೋಪಮುಕ್ತ ಗೊಳ್ಳುವವರೆಗೂ ಯಾವುದೇ ಸ್ಥಾನವನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದಾರೆ ಎಂದು ಕಲ್ಮಾಡಿಪರ ವಕೀಲ ಹಿತೇಶ ಜೈನ್ ಅವರು ಟಿವಿ ವಾಹಿನಿಯೊಂದಕ್ಕೆ ತಿಳಿಸಿದರು.
ಮಂಗಳವಾರ ಚೆನ್ನೈನಲ್ಲಿ ನಡೆದ ತನ್ನ ವಾರ್ಷಿಕ ಮಹಾಸಭೆಯಲ್ಲಿ ಕಲ್ಮಾಡಿ ಮತ್ತು ಚೌತಾಲಾರಿಗೆ ಆಜೀವ ಅಧ್ಯಕ್ಷ ಸ್ಥಾನಗಳನ್ನು ನೀಡಲು ಐಒಎ ನಿರ್ಧರಿಸಿತ್ತು.
ಐಒಎ ಕ್ರಮ ಅದರ ಸಂವಿಧಾನಕ್ಕೆ ವಿರುದ್ಧವಾಗಿದೆ. ಕ್ರೀಡಾ ಸಚಿವಾಲಯವು ಇದನ್ನು ಒಪ್ಪಿಕೊಳ್ಳುವುದಿಲ್ಲ. ಕಲ್ಮಾಡಿ ಮತ್ತು ಚೌತಾಲಾ ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಾವು ಕ್ರೀಡೆಗಳಲ್ಲಿ ಪಾರದರ್ಶಕತೆಯನ್ನು ಬಯಸಿದ್ದೇವೆ. ಈ ಇಬ್ಬರೂ ರಾಜೀನಾಮೆ ನೀಡುವವರೆಗೆ ಅಥವಾ ವಜಾಗೊಳ್ಳುವವರೆಗೆ ನಾವು ಐಒಎ ಜೊತೆ ವ್ಯವಹರಿಸುವುದಿಲ್ಲ ಎಂದು ಕೇಂದ್ರ ಕ್ರೀಡಾಸಚಿವ ವಿಜಯ ಗೋಯೆಲ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಗೋಯೆಲ್ ವಿರುದ್ಧ ದಾಳಿನಡೆಸುವ ಮೂಲಕ ತನ್ನನ್ನು ಸಮರ್ಥಿಸಿಕೊಂಡಿರುವ ಚೌತಾಲಾ, ಸಚಿವರ ಪ್ರತಿಕ್ರಿಯೆ ತನಗೆ ಅಚ್ಚರಿಯನ್ನುಂಟು ಮಾಡಿದೆ. ತನ್ನ ವಿರುದ್ಧ ಕ್ರಿಮಿನಲ್ ಮತ್ತು ಭ್ರಷ್ಟಾಚಾರದ ಪ್ರಕರಣಗಳಿವೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ತನ್ನ ವಿರುದ್ಧ ಇರುವುದು ರಾಜಕೀಯ ಪ್ರಕರಣವೇ ಹೊರತು ಕ್ರಿಮಿನಲ್ ಪ್ರಕರಣವಲ್ಲ ಎಂದಿದ್ದಾರೆ.
1996-2011ರ ಅವಧಿಯಲ್ಲಿ ಐಒಎ ಅಧ್ಯಕ್ಷರಾಗಿದ್ದ ಕಲ್ಮಾಡಿ 2010ರ ದಿಲ್ಲಿ ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿದ್ದ ಆರೋಪವನ್ನು ಹೊತ್ತಿದ್ದು, 10 ತಿಂಗಳು ಜೈಲುವಾಸವನ್ನು ಅನುಭವಿಸಿ ಜಾಮೀನಿನಲ್ಲಿ ಬಿಡುಗಡೆ ಗೊಂಡಿದ್ದಾರೆ.
ಚೌತಾಲಾ 2012,ಡಿಸೆಂಬರ್-2014,ಫೆಬ್ರವರಿ ಅವಧಿಯಲ್ಲಿ ಐಒಎ ಅಧ್ಯಕ್ಷ ರಾಗಿದ್ದರು. ಈ ವೇಳೆ ನ್ಯಾಯಾಲಯದಲ್ಲಿ ಅರೋಪಪಟ್ಟಿ ಸಲ್ಲಿಸಲ್ಪಟ್ಟಿರುವ ವ್ಯಕ್ತಿಗಳನ್ನು ಚುನಾವಣೆಗೆ ನಿಲ್ಲಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಐಒಎ ಅನ್ನು ಅಮಾನತುಗೊಳಿಸಿತ್ತು ಮತ್ತು ಐಒಎ ಅಧ್ಯಕ್ಷರಾಗಿ ಚೌತಾಲಾ ಆಯ್ಕೆಯನ್ನು ರದ್ದುಗೊಳಿಸಿತ್ತು.







