ಧರ್ಮಕ್ಕಾಗಿ ಸಾಯುವ ಬದಲು ಬದುಕಿ: ಪ್ರೊಫೆಸರ್ ವಂ.ಕ್ಲಿಫರ್ಡ್ ಫೆರ್ನಾಂಡಿಸ್
ಉಡುಪಿಯಲ್ಲಿ ಸರ್ವಧರ್ಮ ಕ್ರಿಸ್ಮಸ್ ಆಚರಣೆ

ಉಡುಪಿ, ಡಿ.28: ನಾವು ಧರ್ಮಕ್ಕಾಗಿ ಸಾಯುವ ಬದಲು ಬದುಕಬೇಕು. ಜಾತಿ ಎಂಬುದು ಆರಾಧನೆಯ ರೀತಿಯಾದರೆ ಧರ್ಮ ಎಂಬುದು ಜೀವಿಸುವ ರೀತಿ ಎಂದು ಮಂಗಳೂರು ಸೈಂಟ್ ಜೋಸೆಫ್ಸ್ ಸೆಮಿನರಿಯ ಪ್ರೊಫೆಸರ್ ವಂ.ಕ್ಲಿಫರ್ಡ್ ಫೆರ್ನಾಂಡಿಸ್ ಹೇಳಿದ್ದಾರೆ.
ಉಡುಪಿ ಶೋಕಮಾತ ಇಗರ್ಜಿಯ ಆಶ್ರಯದಲ್ಲಿ ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಮತ್ತು ಘಟಕದ ವತಿಯಿಂದ ಇಗರ್ಜಿಯ ವಠಾರದಲ್ಲಿ ಬುಧವಾರ ಆಯೋಜಿಸಲಾದ ಸರ್ವಧರ್ಮ ಕ್ರಿಸ್ಮಸ್ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಸಮಾಜದಲ್ಲಿ ಸಂಭವಿಸುತ್ತಿರುವ ಅತ್ಯಾಚಾರ, ಕೊಲೆಗಳನ್ನು ನೋಡು ವಾಗ ನಾವು ಪ್ರಾಣಿಗಳಿಗಿಂತ ಕೀಳಾಗಿದ್ದೇವೆ. ಆದುದರಿಂದ ಇಂತಹ ಸೌಹಾರ್ದ ಕೂಟಗಳು ಪ್ರತಿದಿನ ನಡೆಯುವಂತಾಗಬೇಕು ಎಂದರು.
ಉಡುಪಿ ವಲಯ ಪ್ರಧಾನ ಧರ್ಮಗುರು ವಂ.ಫ್ರೆಡ್ ಮಸ್ಕರೇನಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ನಿಕೇತನಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ನಿರ್ದೇಶಕ ವಂ.ಫೆರ್ಡಿನಾಂಡ್ ಗೊನ್ಸಾಲ್ವಿಸ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಸಮಿತಿಯ ಸದಸ್ಯ ಅಕ್ಬರ್ ಅಲಿ ಶುಭಾಶಂಸನೆಗೈದರು.
ಸೌಹಾರ್ದ ಸಮಿತಿಯ ಸಂಚಾಲಕ ಅಲ್ಫೋನ್ಸ್ ಡಿಕೋಸ್ತ ಸ್ವಾಗತಿಸಿದರು. ಸದಸ್ಯ ಮುಹಮ್ಮದ್ ವೌಲ ವಂದಿಸಿದರು. ಸೈಂಟ್ ಮೇರಿಸ್ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಕ್ಲಾರಾ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸೈಂಟ್ ಮೇರಿಸ್ ವಿದ್ಯಾಸಂಸ್ಥೆ, ಪಾಂಬೂರು ಮಾನಸ ವಿಶೇಷ ಶಾಲೆ ವಿದ್ಯಾರ್ಥಿಗಳು, ಚರ್ಚ್ ಗಾಯನ ಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವಿಶೇಷ ಆಕರ್ಷಣೆಯಾಗಿ ಕ್ರಿಸ್ಮಸ್ ಟ್ರೀ, ಗೋದಲಿ ಪ್ರದರ್ಶನ, ನಕ್ಷತ್ರಗಳ ಬೆಳಗುವಿಕೆ, ಕ್ರಿಸ್ಮಸ್ ಕೇಕ್ ವಿತರಿಸಲಾಯಿತು.







