ಬೃಹತ್ ಜನಸಮೂಹ ಬದಲಾವಣೆಯ ಸಂಕೇತ: ಪ್ರಧಾನಿ ಮೋದಿ

ಲಕ್ನೋ, ಜ.2: "ಇಷ್ಟೊಂದು ಪ್ರಮಾಣದ ಜನ ಬದಲಾವಣೆಯ ಸಂಕೇತ. ಉತ್ತರಪ್ರದೇಶದಲ್ಲಿ ಬಿಜೆಪಿ ವನವಾಸ ಅಂತ್ಯವಾಗಲಿದೆ. 14 ವರ್ಷಗಳ ಅಭಿವೃದ್ದಿಯ ವನವಾಸಕ್ಕೂ ಅಂತ್ಯವಾಗಲಿದೆ'' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಏರ್ಪಡಿಸಿದ್ದ ಪರಿವರ್ತನಾ ರ್ಯಾಲಿಯೊಂದರಲ್ಲಿ ಹೇಳಿದ್ದಾರೆ.
ಲಕ್ನೋದ ಅಂಬೇಡ್ಕರ್ ಸ್ಟೇಡಿಯಂನಲ್ಲಿ ಬಿಜೆಪಿ ಬೃಹತ್ ಪರಿವರ್ತನಾ ರ್ಯಾಲಿ ಏರ್ಪಡಿಸಿದ್ದು, ನೆರೆದಿದ್ದ ಜನಸಮೂಹ ನೋಡಿ ಪ್ರಧಾನಿ ಮೋದಿ ಅಚ್ಚರಿ ವ್ಯಕ್ತಪಡಿಸಿದರು. ನಾನು ಇಷ್ಟೊಂದು ಜನಸಮೂಹವನ್ನು ಇದೇ ಮೊದಲ ಬಾರಿ ನೋಡಿದ್ದೇನೆ ಎಂದರು.
"ಇದು ನನ್ನ ರಾಜಕೀಯ ಜೀವನದ ಅತಿ ದೊಡ್ಡ ರ್ಯಾಲಿ. ಜಾತಿ-ಧರ್ಮ ಬದಿಗಿಟ್ಟು ಅಭಿವೃದ್ದಿಗಾಗಿ ಬಿಜೆಪಿಗೆ ಬೆಂಬಲ ನೀಡಿ. ಉತ್ತರಪ್ರದೇಶಕ್ಕೆ ಕೇಂದ್ರದಿಂದ ಅತ್ಯಂತ ಹೆಚ್ಚು ಅನುದಾನ ನೀಡುತ್ತಿದ್ದೇವೆ. ಕಳೆದ 2.5 ವರ್ಷದಲ್ಲಿ 2.5 ಲಕ್ಷ ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಆದರೆ, ರಾಜ್ಯ ಸರಕಾರ ಅದನ್ನು ಸದ್ಬಳಕೆ ಮಾಡಿಲ್ಲ. ಭಾರತ ಬದಲಾಗಬೇಕು ಅಂದರೆ ಉತ್ತರಪ್ರದೇಶ ಬದಲಾಗಬೇಕು. ನಮ್ಮ ಪಕ್ಷ ಭಾರತವನ್ನು ಅಭಿವೃದ್ದಿಪಥದತ್ತ ಸಾಗಿಸಲು ಬಯಸುತ್ತದೆ.ಉತ್ತರಪ್ರದೇಶದ ಜನರ ಕಷ್ಟ-ಸಂಕಷ್ಟಗಳು ದೂರವಾಗಬೇಕು. ಒಂದೇ ಒಂದು ಭಾರಿ ರಾಜ್ಯದ ವಿಕಾಸಕ್ಕಾಗಿ ನಮಗೆ ಮತ ನೀಡಿ'' ಎಂದು ಮೋದಿ ಕರೆ ನೀಡಿದರು.







