‘ಭಾರತೀಯ ಸಂಗೀತ ಪರಂಪರಾ’ ಕೊಂಕಣಿ ಕೃತಿ ಲೋಕಾರ್ಪಣೆ

ಪುತ್ತೂರು ,ಜ.2 : ಸಾಹಿತ್ಯದಲ್ಲಿ ರಸೋತ್ಪತ್ತಿ ಇಲ್ಲದಿದ್ದಲ್ಲಿ ಸಾಹಿತ್ಯ ಶುಷ್ಕವೆನಿಸುತ್ತದೆ. ಸಂಗೀತದ ರಸೋತ್ಪತ್ತಿ ಸಾಹಿತ್ಯಕ್ಕೆ ಶಕ್ತಿಯಾಗಿದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಟಿ. ರಂಗ ಪೈ ಹೇಳಿದರು.
ಅವರು ಕಾರ್ಕಳದ ಹೊಸಸಂಜೆ ಪ್ರಕಾಶನ ಪ್ರಕಟಿಸಿದ ಹಿರಿಯ ಸಾಹಿತಿ ಮಣಿಕ್ಕಾರ ಗೋಪಾಲಕೃಷ್ಣ ಶಾನುಭೋಗರ ಕೊಂಕಣಿ ಕೃತಿ ‘ಭಾರತೀಯ ಸಂಗೀತ ಪರಂಪರಾ’ ಕೃತಿಯನ್ನು ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಂಗೀತವು ಮಿಕ್ಕೆಲ್ಲಾ ಪ್ರಕಾರಗಳಿಂದ ಭಿನ್ನವಾದ ಶಾಸ್ತ್ರೀಯ ಚೌಕಟ್ಟು ಮತ್ತು ಕಟ್ಟು ನಿಟ್ಟಿನ ಕಲಿಕೆಯ ಶಿಸ್ತಿಗೆ ಒಳಪಟ್ಟಿದೆ. ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಾ ಸಂಗೀತ ಕ್ಷೇತ್ರ ಬೆಳೆದು ಬಂದಿದೆ ಎಂದು ಹೇಳಿದರು.
ಕಾರ್ಕಳ ಶಾಸ್ತ್ರಿಯ ಸಂಗೀತ ಸಭಾದ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಶೆಣೈ ಕೃತಿ ಪರಿಚಯ ಮಾಡಿದರು.
ಬಹುಭಾಷಾ ಸಾಹಿತಿ ಯು.ಕೆ. ಪೈ, ಕೃತಿಕಾರ ಮಣಿಕ್ಕಾರ ಗೋಪಾಲಕೃಷ್ಣ ಶಾನುಭೋಗ, ಹೊಸಸಂಜೆ ಪ್ರಕಾಶನದ ಮುಖ್ಯಸ್ಥ ಆರ್.ದೇವರಾಯ ಪ್ರಭು ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ಪದ್ಮಾಕರ ಭಟ್ ಅಧ್ಯಕ್ಷತೆ ವಹಿಸಿದ್ದರು.
ಪರೇಶ್ ಮಣಿಕ್ಕಾರ ಸ್ವಾಗತಿಸಿದರು.
ರಾಜೇಶ್ ಶಾನುಭಾಗ ವಂದಿಸಿದರು.
ನ್ಯಾಯವಾದಿ ಗೌರೀಶ್ ಚಂದ್ರ ಶಾನುಭೋಗ ನಿರೂಪಿಸಿದರು.







