ಮನವಿ ಕೊಟ್ಟ ಕೂಡಲೇ ಬ್ಯಾರಿ ಅಕಾಡೆಮಿ ಘೋಷಿಸಿದ್ದ ಮಹದೇವ ಪ್ರಸಾದ್ !

ಸಚಿವ ಎಚ್.ಎಸ್.ಮಹದೇವ ಪ್ರಸಾದ್ ರವರ ಅತ್ಯಂತ ಅನಿರೀಕ್ಷಿತ ಹಾಗೂ ಅಕಾಲಿಕ ಮರಣದಿಂದ ನಾವೆಲ್ಲಾ ದುಃಖಿತರಾಗಿದ್ದೇವೆ. ಇವರಿಂದಾಗಿಯೇ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಲು ಸಾದ್ಯವಾದದ್ದು.
2007ರಲ್ಲಿ ಜಿಲ್ಲಾ ಬ್ಯಾರಿಗಳ ಒಕ್ಕೂಟದ ಆಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ 4ನೆ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಆಗಿನ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಅವರು ಬೆಳಗ್ಗಿನಿಂದ ರಾತ್ರಿಯವರೆಗೆ ಸಂಪೂರ್ಣವಾಗಿ ಭಾಗವಹಿಸಿದ್ದರು. ಆಗ ಅವರಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯ ಸ್ಥಾಪನೆಗೆ ಮನವಿ ಸಲ್ಲಿಸಿದಾಗ, ವೇದಿಕೆಯಿಂದಲೇ ದೂರವಾಣಿ ಮೂಲಕ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರನ್ನು ಸಂಪರ್ಕಿಸಿ ಅವರ ಮನವೊಲಿಸಿ, ಮೌಖಿಕ ಒಪ್ಪಿಗೆ ಪಡೆದು ಅದೇ ವೇದಿಕೆಯಲ್ಲಿ ಅಕಾಡಮಿ ಸ್ಥಾಪನೆಯ ಘೋಷಣೆ ಮಾಡುವುದರ ಮೂಲಕ ಬ್ಯಾರಿ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸಿದರು.
ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
-ಬಿ.ಎ ಮುಹಮ್ಮದ್ ಆಲಿ, ಉಪಾಧ್ಯಕ್ಷ, ಮುಸ್ಲಿಮ್ ಲೇಖಕರ ಸಂಘ





