ಸಚಿವ ಮಹದೇವ ಪ್ರಸಾದ್ ರವರ ವ್ಯಕ್ತಿ ಪರಿಚಯ

ಎಚ್.ಎಸ್ ಮಹದೇವ ಪ್ರಸಾದ್: (ಜನನ 5-8-1958 ರಿಂದ ಮರಣ: 3-1-2017)
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿಯವರಾದ ಎಚ್.ಎಸ್ ಮಹದೇವಪ್ರಸಾದ್ ಅವರು ರಾಜ್ಯಶಾಸ್ತ್ರ ಪದವೀಧರರು. ವೃತ್ತಿಯಿಂದ ಕೃಷಿಕರಾಗಿದ್ದರು. ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿ ಕೊಂಡಿದ್ದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರವನ್ನು 1994 ರಿಂದ 2013 ರವರೆಗೆ ಸತತ 5 ಬಾರಿ ಪ್ರತಿನಿಧಿಸಿ ವಿಜಯ ಪತಾಕೆಯನ್ನು ತನ್ನಲ್ಲೇ ಇರಿಸಿಕೊಂಡ ಹೆಗ್ಗಳಿಕೆ ಇವರದ್ದು. ಇದಕ್ಕೂ ಮುನ್ನ 1985 ಹಾಗೂ 1989 ರ ವಿಧಾನಸಭಾ ಚುನಾವಣೆಯಲ್ಲೂ ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2004ರಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. 2007ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದರು.
ಪ್ರಸ್ತುತ ಸಿದ್ದರಾಮಯ್ಯ ನೇತೃತ್ವ ಸರಕಾರದಲ್ಲಿ ಸಹಕಾರ ಮತ್ತು ಸಕ್ಕರೆ ಸಚಿವರಾಗಿ ನೇಮಕಗೊಂಡ ಮಹದೇವ ಪ್ರಸಾದ್ ಅವರು ಸಹಕಾರ ಕ್ಷೇತ್ರವನ್ನು ಬಲಪಡಿಸಲು ಹಾಗೂ ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ದೊರಕಿಸಲು ಸತತವಾಗಿ ಶ್ರಮಿಸಿದರು.ರೈತರ ಬೆನ್ನೆಲುಬಿನಂತಿರುವ ಸಹಕಾರ ಕ್ಷೇತ್ರದಲ್ಲಿ ಮಹತ್ವದ ಉಪಕ್ರಮಗಳ ಮೂಲಕ ಅನ್ನದಾತನ ಸಂಕಷ್ಟಕ್ಕೆ ಸ್ಪಂದಿಸಿದರು. ಇವರ ಅವಧಿಯಲ್ಲಿ,
ಇಡೀ ದೇಶದಲ್ಲೇ ಮೊದಲ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ಗಳವರೆಗಿನ ಕೃಷಿ ಸಾಲವನ್ನು ನೀಡಲಾಯಿತು.
2015-16ನೇ ಸಾಲಿನಲ್ಲಿ 10 ಸಾವಿರ ಕೋಟಿ ರೂ.ಗಳ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಸುಮಾರು 23 ಲಕ್ಷ ರೈತರಿಗೆ ನೀಡುವ ಗುರಿ ಮೀರಿದ ಸಾಧನೆಯನ್ನು ಸಹಕಾರ ಇಲಾಖೆ ಮಾಡಿದೆ. ಇದು ರೈತರ ಅಭ್ಯುದಯದ ಕುರಿತ ಅವರ ಬದ್ಧತೆಗೆ ಸಾಕ್ಷಿ.
ರಾಜ್ಯದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರು ಪಡೆದ ಅವಧಿ ಸಾಲ ವಿವಿಧ ಕಾರಣಗಳಿಗಾಗಿ ಸುಸ್ತಿಯಾಗಿದ್ದವರ 32 ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಲಾಯಿತು.
ಅತ್ಯಂತ ಜನಪ್ರಿಯವಾಗಿರುವ ಯಶಸ್ವಿನಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಲಾಯಿತು.
ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವವರ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುವಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ವಿಕಲಚೇತನರು, ಮಹಿಳೆಯರು ಹಾಗೂ ಬಿಪಿಎಲ್ ಕುಟುಂಬದ ತಲಾ ಒಬ್ಬ ಸದಸ್ಯರಿಗೆ ಸಹಕಾರ ಸಂಘಗಳ ಸದಸ್ಯತ್ವ ನೋಂದಣಿಯನ್ನು ಮಾಡಲಾಯಿತು.
ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಒದಗಿಸುವಂತೆ ಮಾಡಲು ಸಚಿವರು ಸತತವಾಗಿ ಶ್ರಮಿಸಿದರು.







