ಕಾಂಗ್ರೆಸ್ನಿಂದ ಬೆಂಕಿ ಹಚ್ಚುವ ಕೆಲಸ : ಸತ್ಯಜಿತ್ ಸುರತ್ಕಲ್
ಮಂಗಳೂರು, ಜ.3: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವೇ ರಾಜ್ಯಕ್ಕೆ ವ್ಯವಸ್ಥಿತವಾಗಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಗೋಹತ್ಯೆಗೆ ಮುಕ್ತ ಅವಕಾಶ, ಮೂಢನಂಬಿಕೆ ನಿಷೇಧ ಕಾನೂನಿನ ಹೆಸರಿನಲ್ಲಿ ಹಿಂದುಗಳ ಮೂಲ ನಂಬಿಕೆಗಳಿಗೆ ಕೊಡಲಿಯೇಟು ಹಾಕುವ ಯತ್ನ, ಬಿಜೆಪಿ ಕಾರ್ಯಕರ್ತರ ಹತ್ಯೆಗಳ ಮೂಲಕ ರಾಜ್ಯದಲ್ಲಿ ಮತೀಯ ಗಲಭೆಗಳನ್ನು ಹುಟ್ಟು ಹಾಕುವ ಪ್ರಯತ್ನವೇ ರಾಜ್ಯಕ್ಕೆ ಕಾಂಗ್ರೆಸ್ನ ಬೆಂಕಿ ಹಚ್ಚುವ ಪ್ರಯತ್ನಗಳು ಎಂದು ಅವರು ದೂರಿದರು.
ಕೊಣಾಜೆಯ ಕಾರ್ತಿಕ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಸಂಸದ ನಳಿನ್ ಕುಮಾರ್ ಭಾವೋದ್ವೇಗದಲ್ಲಿ ಆಡಿದ ಕೆಲವೊಂದು ಶಬ್ದಗಳನ್ನೇ ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿರುವುದು ನೋಡಿದಾಗ ‘ದೆವ್ವದ ಬಾಯಿಯಲ್ಲಿ ಭಗವದ್ಗೀತೆ’ ಕೇಳಿದಂತಾಗಿದೆ ಎಂದು ಅವರು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮೋರ್ಚಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ವಿನೋದ್ ಸಾಲ್ಯಾನ್, ಸದಾನಂದ ನಾವರ, ಭಾಸ್ಕರ ಸಾಲ್ಯಾನ್ ಉಪಸ್ಥಿತರಿದ್ದರು.







