ಜ. 5 ರಿಂದ 8ರವರೆಗೆ ಸುರಿಬೈಲ್ ಉಸ್ತಾದ್ ರ ಆಂಡ್ ನೇರ್ಚೆ
ಬಂಟ್ವಾಳ, ಜ. 4: ಮರ್ಹೂಂ ಸುರಿಬೈಲ್ ಉಸ್ತಾದ್ ಅವರ 15ನೆ ಆಂಡ್ ನೇರ್ಚೆ ಜ. 5, 6, 7 ಮತ್ತು 8ರಂದು ಸುರಿಬೈಲ್ ದಾರುಲ್ ಅಶ್ ಅರಿಯ್ಯ ಎಜುಕೇಶನಲ್ ಸೆಂಟರ್ನ ಸಭಾಂಗಣದಲ್ಲಿ ನಡೆಯಲಿದ್ದು, ಡಾ. ಫಾರೂಕ್ ನಈಮೀ ಕೊಲ್ಲಂ ಮತ್ತು ಮುಳ್ಳೂರ್ಕೆರೆ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಚಾರ ಸಮಿತಿ ಚೇಯರ್ ಮ್ಯಾನ್ ಬಿ.ಇಬ್ರಾಹೀಂ ಖಲೀಲ್ ಮುಸ್ಲಿಯಾರ್ ತಿಳಿಸಿದರು.
ಬುಧವಾರ ವಿಟ್ಲದ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾರುಲ್ ಅಶ್ ಅರಿಯ್ಯ ಎಜುಕೇಶನಲ್ ಸೆಂಟರ್ ಅನಾಥ ಹಾಗೂ ನಿರ್ಗತಿಕರ ಮಂದಿರವಾಗಿದೆ. ಇಲ್ಲಿ ಸುಮಾರು 500ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಸುರಿಬೈಲ್ ಉಸ್ತಾದ್ ಧಾರ್ಮಿಕ ಶಿಕ್ಷಣವನ್ನು ನೀಡುತ್ತಾ ನಾಡಿನಲ್ಲಿ ವಿಜ್ಞಾನದ ಪ್ರಭೆಯನ್ನು ವಿಸ್ತರಿಸಿ ವಿದೇಶದಲ್ಲಿಯೂ ಸುರಿಬೈಲ್ ಉಸ್ತಾದ್ ಎಂದು ಗುರುತಿಸಿದ್ದರು. ಬಳಿಕ ಇಲ್ಲಿಯೇ ಮರಣ ಹೊಂದಿದ್ದರು. ವರ್ಷಂಪ್ರತಿ ಅವರ ಆಂಡ್ ನೇರ್ಚೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಇದೀಗ 15ನೇ ಆಂಡ್ ನೇರ್ಚೆ ಆಚರಿಸಲಾಗುತ್ತಿದೆ ಎಂದರು.
ಜ. 5ರಂದು ಬೆಳಿಗ್ಗೆ ಸ್ವಾಗತ ಸಮಿತಿ ಚೇಯರ್ ಮ್ಯಾನ್ ಸುಲೈಮಾನ್ ಹಾಜಿ(ಸಿಂಗಾರಿ) ಧ್ವಜಾರೋಹಣಗೈಯ್ಯುವ ಮೂಲಕ ಆಂಡ್ ನೇರ್ಚೆಗೆ ಚಾಲನೆ ನೀಡಲಿದ್ದಾರೆ. ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳಿಂದ ಮೀಲಾದ್ ಕಾರ್ಯಕ್ರಮ ನಡೆಯಲಿದ್ದು, ಜ. 6 ರಂದು ಅಶ್ ಅರಿಯ್ಯ ದರ್ಸ್ ಮತ್ತು ಬೋರ್ಡಿಂಗ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ಸ್ಪರ್ಧಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಜ.7 ರಂದು ಬೆಳಿಗ್ಗೆ ಬೃಹತ್ ಮಹಿಳಾ ತರಗತಿಯು ರಾಜ್ಯ ಕೆ.ಎಂ.ಜೆ.ಸಿ ಪ್ರಧಾನ ಕಾರ್ಯದರ್ಶಿ ಹೆಚ್.ಐ ಅಬೂಸುಫ್ಯಾನ್ ಇಬ್ರಾಹಿಂ ಮದನಿ ಮದನಿ ಯವರ ನೇತೃತ್ವದಲ್ಲಿ ನಡೆಯಲಿದೆ.
ಅದೇ ದಿನ ಮಗರಿಬ್ ನಮಾರ್ ಬಳಿಕ ಉದ್ಯಾವರ ಸಯ್ಯಿದ್ ಇಬ್ರಾಹಿಂ ಪೂಕಂಞ ತಂಙಳ್ ಅವರು ಜಲಾಲಿಯ್ಯ ರಾತೀಬ್ಗೆ ನೇತೃತ್ವ ನೀಡಲಿದ್ದಾರೆ. ಸಂಜೆ 7 ಗಂಟೆಗೆ ಖ್ಯಾತ ವಾಗ್ಮಿ ಮುಳ್ಳೂರ್ ಕೆರೆ ಮಹಮ್ಮದಾಲಿ ಸಖಾಫಿ ಅವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ.
ಜ.8 ರಂದು ಬೆಳಿಗ್ಗೆ ಉಲಮಾಗಳಿಗೆ ದರ್ಸ್ ಕಾರ್ಯಕ್ರಮ ಅಶ್ ಅರಿಯ್ಯ ಪ್ರಾಂಶುಪಾಲ ಪಿ.ಎ ಅಬ್ದುರಹ್ಮಾನ್ ಬಾಖವಿ ಅಲ್ ಜುನೈದಿಯವರ ನೇತೃತ್ವದಲ್ಲಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಖತ್ಮುಲ್ ಖುರ್ಆನ್ ಮಜ್ಲಿಸ್ ನಡೆಯಲಿದ್ದು, ಬಳಿಕ ಪೂರ್ವ ವಿದ್ಯಾರ್ಥಿ ಸಂಗಮವು ಸಂಸ್ಥೆಯ ವ್ಯವಸ್ಥಾಪಕ ಮಹಮ್ಮದಾಲಿ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಜೆ ಬೋಳಂತೂರುನಿಂದ ಅಶ್ ಅರಿಯ್ಯ ತನಕ ದಫ್ ಮತ್ತು ಸ್ಕೌಟ್ನೊಂದಿಗೆ ಬೃಹತ್ ಸಂದೇಶ ಜಾಥ ಹಾಗೂ ಸಂದಲ್ ಮೆರವಣಿಗೆ ನಡೆಯಲಿದೆ. ಸಂಜೆ 7 ಗಂಟೆಗೆ ಸುರಿಬೈಲು ಉಸ್ತಾದ್ ಅನುಸ್ಮರಣಾ ಮಹಾ ಸಮ್ಮೇಳನ ಹಾಗೂ ಜೀಲಾನಿ ಪ್ರಭಾಷಣ ನಡೆಯಲಿದ್ದು, ಡಾ. ಫಾರೂಕ್ ನಈಮೀ ಕೊಲ್ಲಂ ಅವರು ಮುಖ್ಯ ಪ್ರಭಾಷಣ ಮಾಡಲಿದ್ದು, ಪಿ.ಎ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ.
ತಾಜಶ್ಯರೀ ಶೈಖುನಾ ಅಲಿಕುಂಞ ಉಸ್ತಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ಝೈನುಲ್ ಉಲಮಾ ಮಾಣಿ ಉಸ್ತಾದ್, ತಲಕ್ಕಿ ತಂಙಳ್, ಜಲಾಲ್ ತಂಙಳ್, ಶಾಫಿ ಸಅದಿ ಬೆಂಗಳೂರು, ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಮೂಸಲ್ ಮದನಿ ಅಲ್ ಬಿಶಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ ಖಾದರ್, ಹಾಗೂ ಇನ್ನಿತರ ಉಲಮಾ ಉಮಾರ ನೇತಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಶೈಖುನಾ ವಾಲೆಮುಂಡೋವ್ ಉಸ್ತಾದ್, ವ್ಯವಸ್ಥಾಪಕ ಮಹಮ್ಮದಾಲಿ ಸಖಾಫಿ, ಅಬ್ದುಲ್ ರಶೀದ್ ಹನೀಫಿ, ಸ್ವಾಗತ ಸಮಿತಿ ಕನ್ವೀನರ್ ಉಸ್ಮಾನ್ ಸೆರ್ಕಳ, ಮುಖ್ಯೋಪಾಧ್ಯಾಯ ಕೆ.ಎಚ್ ನಾಸೀರ್ ಉಪಸ್ಥಿತರಿದ್ದರು.







