1000 ಪ್ರತಿಭಾವಂತ ಕ್ರೀಡಾಪಟುಗಳಿಗೆ ವಿಶೇಷ ತರಬೇತಿ: ಪ್ರಮೋದ್

ಉಡುಪಿ, ಜ.6: ರಾಜ್ಯದಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ತೋರುವ ಆಯ್ದ 1000 ಪ್ರತಿಭಾವಂತ ಕ್ರೀಡಾಪಟುಗಳಿಗೆ ಕಾರ್ಪೋರೇಟ್ ಸಂಸ್ಥೆಗಳ ನೆರವಿನಿಂದ ಎಲ್ಲಾ ರೀತಿಯ ಪ್ರೋತ್ಸಾಹ ನೀಡ ಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಸರಕಾರದ ಕ್ರೀಡಾ ಮಂತ್ರಾಲಯ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿಶೇಷ ಪ್ರೋತ್ಸಾಹ ಯೋಜನೆಗೆ 1000 ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಗುರಿಯಲ್ಲಿ ಈಗಾಗಲೇ 662 ಕ್ರೀಡಾಪಟುಗಳನ್ನು ಆಯ್ಕೆ ಮಾಡ ಲಾಗಿದೆ. ಈ ಕ್ರೀಡಾಪಟುಗಳಿಗೆ ವಿದೇಶಗಳಲ್ಲಿ ತರಬೇತಿ, ವಿದೇಶಿ ಕೋಚ್ ಗಳಿಂದ ತರಬೇತಿ, ವಿದ್ಯಾಭ್ಯಾಸದ ವೆಚ್ಚ, ಪ್ರಯಾಣ ವೆಚ್ಚ ಸೇರಿದಂತೆ ಎಲ್ಲಾ ರೀತಿಯ ವೆಚ್ಚಗಳನ್ನು ಕಾರ್ಪೋರೇಟ್ ಸಂಸ್ಥೆಗಳ ನೆರವಿನಿಂದ ಒದಗಿಸಲಾಗುವುದು ಎಂದರು.
ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಒಲಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಕ್ರೀಡಾಪಟುಗೆ 5 ಕೋಟಿ, ಬೆಳ್ಳಿ ಗೆದ್ದರೆ 3 ಕೋಟಿ ಹಾಗೂ ಕಂಚು ಗೆದ್ದರೆ 2 ಕೋಟಿ ರೂ.ಗಳ ಬಹುಮಾನವನ್ನು ರಾಜ್ಯ ಸರಕಾರ ಘೋಷಿಸಿದೆ ಎಂದು ಸಚಿವರು ಹೇಳಿದರು.







