ಸಂಸದ ಅನಂತಕುಮಾರ್ ಹೆಗಡೆ ದುರ್ವರ್ತನೆ ಖಂಡಿಸಿ ವೈದ್ಯರಿಂದ ಪ್ರತಿಭಟನೆ

ಭಟ್ಕಳ, ಜ.7 : ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಶಿರಶಿಯ ಟಿ.ಎಸ್.ಎಸ್. ಆಸ್ಪತ್ರೆಯ ಸೇವಾ ನಿರತ ವೈದ್ಯರ ಮೇಲೆ ಹಲ್ಲೆ ಮಾಡಿದ್ದನ್ನು ಭಟ್ಕಳ ವೈದ್ಯರ ಸಂಘ ತೀವ್ರವಾಗಿ ಖಂಡಿಸಿ ಅರ್ಧ ದಿನ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಈ ಕುರಿತು ಶನಿವಾರ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿದ್ದು , ಸಂಸದರು ವೈದ್ಯರ ಮೇಲೆ ಅಮಾನುಷವಾಗಿ ಹಲ್ಲೆಗೈದಿದ್ದಾರೆ.
ಸರ್ಕಾರದ ಅಧಿಸೂಚನೆಯಂತೆ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವ ವ್ಯಕ್ತಿಗೆ 3 ವರ್ಷದ ಕಾರಾಗೃಹವಾಸ ಹಾಗೂ 50ಸಾವಿರ ರೂ. ದಂಡ ವಿಧಿಸಬೇಕೆಂಬ ಆದೇಶವಿದ್ದು , ಈ ಕಾನೂನಿನಂತೆ ಸಂಸದನ ಮೇಲೆ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ರಾಜ್ಯದಲ್ಲಿ ಹಲವಾರು ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದರೂ, ಅವರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸುತ್ತಿಲ್ಲ. ಇದು ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಅಘಾತವನ್ನುಂಟುಮಾಡಿದೆ ಎಂದು ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಭಟ್ಕಳದ ಅಧ್ಯಕ್ಷ ಡಾ.ಆರ್.ವಿ.ಸರಾಫ್, ಕಾರ್ಯದರ್ಶಿ ಡಾ.ಎಂ. ಚೇತನ್ ಕಲ್ಕೂರ್ , ಡಾ.ಸುರೇಶ್ ನಾಯಕ, ಡಾ.ನಸೀಮ್ ಖಾನ್, ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.







