ಕಾಸರಗೋಡಿನ ಅಂತರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿಗೆ ಸ್ವಂತ ಮನೆಯಿಲ್ಲ !

ಕಾಸರಗೋಡು , ಜ.7 : ಏಷ್ಯನ್ ಜೂನಿಯರ್ ತ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆದ್ದ ತಂಡದ ಆಟಗಾರ್ತಿಯಾಗಿರುವ ಕಾಸರಗೋಡಿನ ಕುವರಿಗೆ ಸ್ವಂತ ಮನೆಯಿಲ್ಲ , ಇರುವ ಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ; ಆದರೂ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡುತ್ತಿರುವ ಈಕೆಯ ಕಂಗಳಲ್ಲಿ ನೂರಾರು ಕನಸುಗಳಿವೆ.
ಈ ಪ್ರತಿಭೆ , ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ತ್ರೋ ಬಾಲ್ ನ ಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಭಾರತೀಯರಲ್ಲಿ ಬದಿಯಡ್ಕ ಕುಂಬ್ಡಾಜೆ ಬೆಳ್ಳೂರು ಮಿತ್ತಮಜಲು ಎಂಬ ಕುಗ್ರಾಮದಿಂದ ಬೆಳೆದು ಬಂದ ರಾಷ್ಟ್ರೀಯ ಪ್ರತಿಭೆ ಯಸ್ಮಿತಾ.
ಸ್ವಂತ ಮನೆ , ಮೂಲಭೂತ ಸೌಲಭ್ಯಗಳ ಕೊರತೆ , ಆರ್ಥಿಕ ಅಡಚಣೆಗಳಿದ್ದರೂ ಸಾಲಗೀಲ ಮಾಡಿ ಎಲ್ಲವನ್ನು ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರಶಸ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದವಳು ಯಸ್ಮಿತಾ.
ಯಸ್ಮಿತಾಳ ಕುಟುಂಬಕ್ಕೆ ಸ್ವಂತ ಮನೆ ಇಲ್ಲ. ತಂದೆ ಸುಬ್ಬಣ್ಣ ನಾಯ್ಕ್ ಕೂಲಿ ಕಾರ್ಮಿಕ. ಚಿಕ್ಕಪ್ಪನ ಮನೆಯಲ್ಲಿ ಇದೀಗ ವಾಸವಾಗಿದ್ದಾರೆ. ಮನೆಗೆ ಧನಸಹಾಯ ಕ್ಕಾಗಿ ಸ್ಥಳೀಯ ಕುಂಬ್ಡಾಜೆ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಮಂಜೂರಾಗಿಲ್ಲ . ಕುಡಿಯುವ ನೀರಿನ ಸಮಸ್ಯೆ ಯೂ ಈ ಕುಟುಂಬವನ್ನು ಕಾಡುತ್ತಿದೆ.
ಗ್ರಾಮೀಣ ಶಾಲೆಯೊಂದರ ಮೈದಾನದಲ್ಲಿ ತನ್ನ ಛಲದಿಂದಲೇ ಬೆಳೆದು ಇದೀಗ ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿ ಚಿನ್ನ ಗೆದ್ದಿದ್ದಾಳೆ .
ದೇಶವನ್ನು ಪ್ರತಿನಿಧೀಕರಿಸಿದ್ದರೂ ಈಕೆಗೆ ಸರಕಾರದಿಂದ ಯಾವುದೇ ಸವಲತ್ತು ಲಭಿಸಿಲ್ಲ.
ಶಾಲಾ ವಿದ್ಯಾರ್ಥಿಗಳು , ಶಿಕ್ಷಕರು, ಪೋಷಕರು , ಸಂಬಂಧಿಕರು ಒಟ್ಟುಗೂಡಿಸಿದ ಹಣ, ಪ್ರೋತ್ಸಾಹ , ಬೆಂಬಲ ಹಾಗೂ ಸಾಲ ಮಾಡಿ ಯಸ್ಮಿತಾ ಚಾಂಪಿಯನ್ ಶಿಪ್ ಗೆ ತೆರಳಿದ್ದಾಳೆ. ತ್ರೋ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು 60 ಸಾವಿರ ರೂ. ವೆಚ್ಚವಾಗಿದೆ. ಈ ಪೈಕಿ 32 ಸಾವಿರ ರೂ. ಸಂಗ್ರಹ ವಾಗಿದೆ. ಜೆರ್ಸಿ ಯನ್ನು ಸ್ವಂತ ಹಣದಿಂದ ಖರೀದಿಸಿದ್ದಾಳೆ.
ಚಿಕ್ಕಂದಿನಿಂದಲೇ ಯಸ್ಮಿತಾಳಿಗೆ ಕ್ರೀಡೆಯಲ್ಲಿ ಆಸಕ್ತಿ . ಆದರೆ ಪ್ರೋತ್ಸಾಹ ನೀಡುವವರು ಯಾರು ಇರಲಿಲ್ಲ. ಈಗ ಬದಿಯಡ್ಕ ಸಮೀಪದ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಶಾಲಾ ಪ್ಲಸ್ ವನ್ ವಿದ್ಯಾರ್ಥಿಯಾಗಿರುವ ಯಶ್ಮಿತಾ ಶಾಲಾ ಮಟ್ಟದಲ್ಲಿ ಉತ್ತಮ ಹೆಸರು ಪಡೆದುಕೊಂಡಿದ್ದಳು. ಇದನ್ನು ಗುರುತಿಸಿದ ಶಾಲಾ ಕ್ರೀಡಾ ಅಧ್ಯಾಪಕ ಶಶಿಕಾಂತ್ ಬಲ್ಲಾಳ್ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಬೆಳೆಯಲು ಅವಕಾಶ ಮಾಡಿಕೊಟ್ಟರು .
ಶಾಲಾ ಮಟ್ಟದ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ ಈಕೆ ಬಳಿಕ ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಳು . ಟೆನ್ನಿಸ್, ಶಟಲ್ , ಬ್ಯಾಡ್ಮಿಂಟನ್ ನಲ್ಲೂ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದಿದ್ದಾಳೆ.
ಜಿಲ್ಲೆಯಲ್ಲಿ ಕ್ರೀಡಾ ತರಬೇತಿಗೆ ಅಗತ್ಯ ಸೌಕರ್ಯಗಳಿಲ್ಲ . ಆದರೂ ಶಾಲಾ ಮೈದಾನದಲ್ಲಿ ಎಲ್ಲಾ ಪರಿಮಿತಿಗಳನ್ನು ಮೀರಿ ಅಂತಾರಾಷ್ಟ್ರೀಯ ಕ್ರೀಡಾ ಪುಟಗಳಲ್ಲಿ ಮಿಂಚಿದ್ದಾಳೆ.
ದೇಶದ ತಂಡವನ್ನು ಪ್ರತಿನಿಧಿಸಿದ ಯಸ್ಮಿತಾಳ ಕುಟುಂಬಕ್ಕೆ ಸೂಕ್ತ ಸೂರು , ಕ್ರೀಡಾ ತರಬೇತಿ , ಸಬಲತ್ತುಗಳು ಲಭಿಸಬೇಕಿದೆ. ಕ್ರೀಡೆಯಲ್ಲಿ ತೀರಾ ಹಿಂದೆ ಉಳಿದಿರುವ ಕಾಸರಗೋಡು ಜಿಲ್ಲೆಗೆ ಯಸ್ಮಿತಾಳ ಸಾಧನೆ ಹೊಸ ಆಶಾಕಿರಣ ಮೂಡಿಸಿದ್ದು , ಬೆಳೆಯುತ್ತಿರುವ ಆಟಗಾರರಿಗೆ ಬೆಳಕಾಗಿದೆ .
ಮುಂದಿನ ಕನಸು ಒಲಿಂಪಿಕ್ಸ್
ತ್ರೋಬಾಲ್ ನಲ್ಲಿ ಪಾಕಿಸ್ತಾನವನ್ನು ಬಗ್ಗುಪಡಿದು ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ತಂಡದ ಸದಸ್ಯೆ ಯಸ್ಮಿತಾ ಳ ಮುಂದಿನ ಕನಸು ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಬೇಕೆಂಬುದು. ಇದಕ್ಕಾಗಿ ಕಠಿಣ ಪರಿಶ್ರಮ ಮಾಡುತ್ತಿದ್ದು , ಸೂಕ್ತ ತರಬೇತಿ , ಪ್ರೋತ್ಸಾಹ , ಆರ್ಥಿಕ ಮುಗ್ಗಟ್ಟು , ಸೌಲಭ್ಯಗಳನ್ನು ಈಕೆಯನ್ನು ಕಾಡುತ್ತಿದೆ.ಗ್ರಾಮೀಣ ಶಾಲೆಯ ಪ್ರತಿಭೆಯನ್ನು ಗುರುತಿಸುವಲ್ಲಿ ಸರಕಾರ ಕೂಡಾ ಮುಂದೆ ಬಂದಿಲ್ಲ .
ಯಸ್ಮಿತಾಳ ಕುಟುಂಬಕ್ಕೆ ಮನೆ ಮಂಜೂರುಗೊಳಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ರಾಜ್ಯ ಕ್ರೀಡಾ ಸಚಿವರ ಜೊತೆ ಮಾತುಕತೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅಗತ್ಯ ಇರುವ ಎಲ್ಲಾ ಸಹಾಯ ನೀಡುವ ಬಗ್ಗೆ ಪ್ರಯತ್ನ ಮಾಡಲಾಗುವುದು.
---ಶಾಸಕ ಎನ್. ಎ ನೆಲ್ಲಿಕುನ್ನು







