ವೈದ್ಯರ ಮೇಲೆ ಹಲ್ಲೆ ಪ್ರಕರಣ : ವಿವಿಧೆಡೆ ಭಾರತೀಯ ವೈದ್ಯಕೀಯ ಸಂಘದಿಂದ ಧರಣಿ

ಕಾರವಾರ, ಜ.7: ವೈದ್ಯರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ಅವರ ಕೃತ್ಯ ಖಂಡನೀಯವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕಾರವಾರ ಘಟಕದ ಅಧ್ಯಕ್ಷ ಸುರೇಶ ಶೆಟ್ಟಿ ಹೇಳಿದರು.
ಕಾರವಾರದ ಪಿಕ್ಳೆೆ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ಇಲಾಖೆ ಸಂಸದರ ವಿರುದ್ಧ ಸ್ವಯಂ ಪ್ರೇರಣೆಯಾಗಿ ದೂರು ದಾಖಲಿಸಿಕೊಂಡಿದ್ದು ತಕ್ಷಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸಂಸದ ಅನಂತ್ಕುಮಾರ್ ಹೆಗಡೆ ವೈದ್ಯರ ಹಾಗೂ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಸ್ಥೆಯೊಂದರ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರಿಗೆ ಸ್ವಾತಂತ್ರ್ಯವಿರುವುದಿಲ್ಲ.
ಆಡಳಿತ ಮಂಡಳಿಯವರ ಒತ್ತಡಕ್ಕೆ ಮಣಿದು ಅನ್ಯಾಯದ ವಿರುದ್ಧ ಹೋರಾಡಲು ಆಗುವುದಿಲ್ಲ. ವೈದ್ಯರ ಮೇಲೆ ಇಂತಹ ಸಾಕಷ್ಟು ಒತ್ತಡಬಂದಿದ್ದು, ಇದರಿಂದ ವೈದ್ಯರು ದೂರು ನೀಡಲು ಹಿಂದೇಟು ಹಾಕಿದ್ದಾರೆ. ಆದರೆ, ಈಗಾಗಲೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಕೂಡಲೇ ಸಂಸದರನ್ನು ಬಂಧಿಸಬೇಕು. ಸಂಸದ ಅನಂತ್ಕುಮಾರ್ ಹೆಗಡೆ ಅವರ ತಾಯಿಯನ್ನು ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಬಗ್ಗೆ ತಿಳಿಸಲಾಗಿತ್ತು. ಆದರೆ, ಈ ಬಗ್ಗೆ ಕೆಲ ಸಮಯ ತೆಗೆದುಕೊಂಡಿದ್ದ ಸಂಸದರ ಮನೆಯವರು ತಮ್ಮ ಆಪ್ತ ವೈದ್ಯರೊಂದಿಗೆ ಸಮಾಲೋಚನೆ ನಡೆಸುವದಾಗಿ ತಿಳಿಸಿದ್ದರು. ಇದಾದ ನಂತರ ಅಲ್ಲಿನ ವೈದ್ಯರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಈ ಘಟನೆಯಲ್ಲಿ ಎಲ್ಲಿಯೂ ವೈದ್ಯರ ತಪ್ಪಿಲ್ಲ ಎಂದ ಡಾ. ಸುರೇಶ ಶೆಟ್ಟಿ, ಹಲ್ಲೆ ನಡೆಸುವುದು ಕಾನೂನು ಬಾಹಿರ ಕೃತ್ಯವಾಗಿದೆ. ಜನಪ್ರತಿನಿಧಿಯಾದವರು ಜವಾಬ್ದಾರಿಯಿಂದ ವರ್ತಿಸುವುದು ಅಗತ್ಯವಾಗಿದೆ.
ಈ ರೀತಿ ಅಮಾನುಷವಾಗಿ ವರ್ತಿಸುವುದು ವಿಷಾದದ ಸಂಗತಿಯಾಗಿದೆ ಎಂದರು. ಸಂಘದ ಕಾರ್ಯದರ್ಶಿ ಕೀರ್ತಿ ನಾಯ್ಕ, ಉಪಾಧ್ಯಕ್ಷ ಶಿವಾನಂದ ಕುಡ್ತಳಕರ್, ಡಾ. ಎನ್. ವಿ. ನಾಯ್ಕ, ಅನ್ವಿತ್ ನಾಯ್ಕ, ದತ್ತಾನಂದ ರಾಯ್ಕರ್ ಹಾಗೂ ನಗರದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು. ಜಿಲ್ಲಾಧಿಕಾರಿಗೆ ದೂರು
ಸಂಸದ ಅನಂತ್ಕುಮಾರ್ ಹೆಗಡೆ ಬಂಧನಕ್ಕೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದವರು ಜಿಲ್ಲಾಧಿಕಾರಿಗೆೆ ಮನವಿ ಸಲ್ಲಿಸಿದ್ದಾರೆ.
ವೈದ್ಯರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಉಲ್ಲೇಖಿಸಿರುವ ಅವರು, ಹಲ್ಲೆಯ ಘಟನಾವಳಿಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಅದೇ ಆಧಾರದಲ್ಲಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಕೂಡಲೇ ಸಂಸದರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ತವ್ಯಕ್ಕೆ ವೈದ್ಯರ ಗೈರು
ಶಿರಸಿಯಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಕಾರವಾರ ಸೇರಿದಂತೆ ಜಿಲ್ಲೆಯಾದ್ಯಂತ ವೈದ್ಯರು ಶನಿವಾರ ಕರ್ತವ್ಯಕ್ಕೆ ಹಾಜರಾಗದೆ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಾರವಾರ ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 12ರವರೆಗೆ ತುರ್ತು ಸೇವೆಯನ್ನು ಹೊರತು ಪಡಿಸಿ, ಸಾರ್ವಜನಿಕರಿಗೆ ವೈದ್ಯರು ವೈದ್ಯಕೀಯ ಸೇವೆ ನೀಡಿಲ್ಲ. ಕೆಲ ಭಾಗಗಳಲ್ಲಿ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದರೆ ಇನ್ನೂ ಕೆಲವು ಭಾಗಗಳಲ್ಲಿ ವೈದ್ಯರು ಸಂಜೆವರೆಗೂ ಮುಷ್ಕರ ನಡೆಸಿದರು. ಸರಕಾರಿ ಮತ್ತು ಖಾಸಗಿ ಎರಡು ಆಸ್ಪತ್ರೆಗಳಲ್ಲೂ ಕೆಲ ಸೇವೆಗಳು ಸ್ಥಗಿತಗೊಂಡಿದ್ದವು.
ಅಲ್ಲದೆ ಭಾರತೀಯ ವೈದ್ಯಕೀಯ ಸಂಘದವರು ಕೈಗೊಂಡಿದ್ದ ಸಾಂಕೇತಿಕ ಪ್ರತಿಭಟನೆಗೆ ಬಹುತೇಕ ವೈದ್ಯರು ಬೆಂಬಲಿಸಿದರು. ಇದರಿಂದ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ನೂರಾರು ರೋಗಿಗಳು ತಪಾಸಣೆಗೆ ಆಗಮಿಸಿದ್ದರು. ಮಧ್ಯಾಹ್ನ 12ರ ನಂತರ ವೈದ್ಯರು ಯಥಾಸ್ಥಿತಿಯಂತೆ ತಮ್ಮ ಸೇವೆಯನ್ನು ಮುಂದುವರಿಸಿದರು.
ಹಲ್ಲೆಗೆ ಸಿಪಿಐ(ಎಂ) ಖಂಡನೆ
ಕಾರವಾರ: ಶಿರಸಿಯ ಟಿಎಸ್ಎಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ದೈಹಿಕ ಹಲ್ಲೆ ಮಾಡಿ ಬಾಯಿಗೆ ಬಂದಂತೆ ಬೈದ ಸಂಸದ ಅನಂತ್ಕುಮಾರ್ ಹೆಗಡೆೆಯನ್ನು ಬಂಧಿಸುವಂತೆ ಸಿಪಿಐ(ಎಂ)ಆಗ್ರಹಿಸಿದೆ.
ಈ ಸಂದರ್ಭ ಮಾತನಾಡಿದ ಸಿಪಿಐ(ಎಂ)ಜಿಲ್ಲಾ ಕಾರ್ಯ ದರ್ಶಿ ಯಮುನಾ ಗಾಂವ್ಕರ್, ಜನತೆಯ ಹಕ್ಕು ರಕ್ಷಿಸಬೇಕಾದ ಪ್ರಜಾಪ್ರಭುತ್ವದ ಉನ್ನತ ಜನಪ್ರತಿನಿಧಿಯಾದ ಬಿಜೆಪಿಯ ಸಂಸದರು ಪದೇಪದೇ ಸಾರ್ವಜನಿಕರು, ಅಧಿಕಾರಿಗಳು ಹಾಗೂ ತಮ್ಮದೇ ಪಕ್ಷದ ಮುಖಂಡರ ಮೇಲೂ ದಾಳಿ ನಡೆಸಿ, ಭಯದ ವಾತಾವರಣ ಸೃಷ್ಟಿಸಿ, ಉದ್ರೇಕಕಾರಿ ವಿವಾದಾತ್ಮಕ ಭಾಷಣ ಮಾಡಿ ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ನೀಚ ಕೃತ್ಯ ಮಾಡುತ್ತಿದ್ದಾರೆ. ಇಂಥ ಸಂಸದರನ್ನು ಈ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಭಾರತ ಕಮ್ಯುನಿಷ್ಟ್ ಪಕ್ಷ ಉತ್ತರ ಕನ್ನಡ ಜಿಲ್ಲಾ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸುತ್ತದೆ ಎಂದರು.







