ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಸಾವು
ಶಿವಮೊಗ್ಗ, ಜ.7: ಜಿಲ್ಲೆಯ ಸಾಗರ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಸಾಗರ ವರದಿ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಕೋಡು ಗ್ರಾಮದ ಬಳಿ ಪ್ರವಾಸಿ ಶಾಲಾ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಉಡುಪಿ ಸಮೀಪದ ಮಲ್ಪೆಯ ನಿವಾಸಿ ಹರೀಶ್(35) ಸಾವಿಗೀಡಾದವರೆಂದು ಗುರುತಿಸಲಾಗಿದೆ.
ಇವರು ತಮ್ಮ ಬುಲೆಟ್ ಬೈಕ್ನಲ್ಲಿ ಮಲ್ಪೆಗೆ ತೆರಳುವಾಗ ಬ್ಯಾಕೋಡು ಬಳಿ ಸಿಗಂಧೂರಿಗೆ ತೆರಳುತ್ತಿದ್ದ ಜಮಖಂಡಿ ತಾಲೂಕಿನ ಅಲಗೂರು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿದ್ದ ಪ್ರವಾಸಿ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಹರೀಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತೀರ್ಥಹಳ್ಳಿ ವರದಿ: ತಾಲೂಕಿನ ಕಟ್ಟೆಹಕ್ಲು ಸಮೀಪ ವೇಗವಾಗಿ ಬಂದ ಟಾಟಾ ಏಸ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಅಸುನೀಗಿರುವ ಘಟನೆ ವರದಿಯಾಗಿದೆ.
ಗಾರೆ ಕೆಲಸ ಮಾಡುವ ಪ್ರಶಾಂತ್(25) ಸಾವಿಗೀಡಾದವರೆಂದು ಗುರುತಿಸಲಾಗಿದೆ. ಅಪಘಾತ ಎಸಗಿದ ಟಾಟಾ -407 ವಾಹನ ತರಕಾರಿಯನ್ನು ಉಡುಪಿಯತ್ತ ಸಾಗಿಸುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





