ಯುನಿವೆಫ್ ನಿಂದ ಉಳ್ಳಾಲದಲ್ಲಿ ಸಮಾವೇಶ

ಉಳ್ಳಾಲ, ಜ.8 : "ಭಾರತದಲ್ಲಿ ನಾಗರಿಕ ಕಾನೂನು ಹಾಗೂ ಸಾಮಾಜಿಕ ನ್ಯಾಯ ಮತ್ತು ಪ್ರವಾದಿ ಹಃ ಮುಹಮ್ಮದ್(ಸ)” ಎಂಬ ಕೇಂದ್ರೀಯ ವಿಷಯದಲ್ಲಿ 2016 ರ ಡಿಸೆಂಬರ್ 16ರಿಂದ 2017 ರ ಫೆಬ್ರವರಿ 3 ರ ತನಕ ಯುನಿವೆಫ್ ಕರ್ನಾಟಕ ಆಯೋಜಿಸಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಅಭಿಯಾನದ ಪ್ರಯುಕ್ತ ಉಳ್ಳಾಲದ ರಾಣಿ ಅಬ್ಬಕ್ಕ ಸರ್ಕಲ್ ನಲ್ಲಿ ಬೃಹತ್ ಉಳ್ಳಾಲ ಸಮಾವೇಶ ಜರುಗಿತು.
ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರು “ಶರೀಅತ್ ನಮ್ಮ ಕಾನೂನು ಪ್ರವಾದಿ (ಸ) ನಮ್ಮ ನಾಯಕ” ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿದರು.
ಪ್ರವಾದಿ ಮುಹಮ್ಮದ್ (ಸ) ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟ ಆದರ್ಶ ನಾಯಕರಾಗಿದ್ದರು. ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ, ಜಾರ್ಜ್ ಬರ್ನಾರ್ಡ್ ಶಾ, ಸರೋಜಿನಿ ನಾಯ್ಡು ಮುಂತಾದ ಕಾಲದ ಮಹಾಮೇಧಾವಿಗಳು ಪ್ರವಾದಿ (ಸ) ರವರ ಜೀವನದಿಂದ ಪ್ರಭಾವಿತರಾಗಿದ್ದರು. ಇಂದು ಮುಸ್ಲಿಮರು ತಮ್ಮ ಜೀವನದ ಪ್ರತಿಯೊಂದು ರಂಗದಲ್ಲೂ, ಅದು ವೈಯಕ್ತಿಕವಾಗಿರಲಿ, ಸಾಮಾಜಿಕವಾಗಿರಲಿ, ವೈವಾಹಿಕವಾಗಿರಲಿ, ವ್ಯಾವಹಾರಿಕ ಜೀವನವಾಗಿರಲಿ ಅಥವಾ ರಾಜಕೀಯ ಜೀವನವಾಗಿರಲಿ ಹೀಗೆ ಪ್ರತಿ ರಂಗದಲ್ಲೂ ಪ್ರವಾದಿ (ಸ) ರು ಬೋಧಿಸಿದ ಶರೀಅತ್ ನ್ನು ಪಾಲಿಸುವುದಾದರೆ ಮುಸ್ಲಿಮ್ ಸಮುದಾಯ ಇಂದು ಅನುಭವಿಸುತ್ತಿರುವ ಸಂಕಷ್ಟಗಳಿಂದ ಖಂಡಿತವಾಗಿ ಮುಕ್ತಿ ಪಡೆಯಬಹುದು ಎಂದು ರಫೀಉದ್ದೀನ್ ಕುದ್ರೋಳಿ ಹೇಳಿದರು.
ಜಿಲ್ಲಾಧ್ಯಕ್ಷ ಸೈುದ್ದೀನ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.
ಖಾಲಿದ್ ಬಿನ್ ಮುಹಮ್ಮದ್ ಅಲಿ ಕಿರ್ಅತ್ ಪಠಿಸಿದರು.
ಕಾರ್ಯಕ್ರಮ ಸಂಚಾಲಕ ಸಲೀಮ್ ಮಲಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಡ್ವೊಕೇಟ್ ಸಿರಾಜುದ್ದೀನ್ ವಂದಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಯು.ಕೆ. ಖಾಲಿದ್ ಮತ್ತು ರಾಜ್ಯ ಸಲಹಾ ಸಮಿತಿ ಸದ್ಯಸ್ಯ ಅಬ್ದುಲ್ಲಾ ಪಾರೆ ಉಪಸ್ಥಿತರಿದ್ದರು.







