ಸಮಾಜದ ಸ್ವಾಥ್ಯ ಕಾಪಾಡಲು ಮಾಧ್ಯಮ ಶ್ರಮ ವಹಿಸಲಿ: ನಾಡೊಜ ನಿಸಾರ್ ಅಹಮದ್
ಭಟ್ಕಳ ಪತ್ರಕರ್ತ ಸಂಘದ ಬೆಳ್ಳಿ ಮಹೋತ್ಸವ

ಭಟ್ಕಳ, ಜ.8: ಮಾಧ್ಯಮಗಳು ಜನರ ಮನಸ್ಸುಗಳನ್ನು ಕೆಡಿಸುವ ಕಾರ್ಯ ಮಾಡದೆ ಸಮಾಜದ ಸ್ವಾಸ್ಥ ಕಾಪಾಡುವ ಕೆಲಸ ಮಾಡಬೇಕಾಗಿದೆ ಎಂದು ನಿತ್ಯೋತ್ಸವ ಕವಿ ನಾಡೋಜ ಪ್ರೊ. ಕೆ. ಎಸ್. ನಿಸಾರ್ ಅಹಮದ್ ಹೇಳಿದರು.
ಅವರು ಶನಿವಾರ ರಾತ್ರಿ ಸಾಗರ ರಸ್ತೆಯ ಶ್ರೀ ಗುರುಸುಧೀಂದ್ರ ಕಾಲೇಜು ಮೈದಾನಲ್ಲಿ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷುಲ್ಲಕ ವಿಷಯಗಳನ್ನು ಮುಂದಿಟ್ಟುಕೊಂಡು ಗಂಟೆಗಟ್ಟಲೆ ಚರ್ಚಿಸುವ ಮಾಧ್ಯಮಗಳು ಜನರ ಸಮಸ್ಯೆಗಳನ್ನು ಮರೆಯುತ್ತಿವೆ. ಟಿಆರ್ಪಿಯೊಂದೇ ಅವರ ಮುಖ್ಯಗುರಿಯಾಗಿದೆ ಎಂದ ಅವರು, ಪತ್ರಕರ್ತನಾದವರು ಪಕ್ಷಾತೀತವಾಗಿ ವರ್ತಿಸಬೇಕು ಎಂದರು.
ಕನ್ನಡ ಭಾಷೆಯ ಮೇಲೆ ಹಿಡಿತವಿಲ್ಲ. ಕನ್ನಡ ವಿಷಯಜ್ಞಾನ ಇಲ್ಲದ ಪತ್ರಕರ್ತರೇ ಇಂದು ಮಾಧ್ಯಮ ರಂಗದಲ್ಲಿ ತುಂಬಿ ಕೊಂಡಿದ್ದಾರೆ. ಇಂಗ್ಲಿಷ್ ಭಾಷೆಯನ್ನು ಕನ್ನಡೀಕರಿಸಿ ಕನ್ನಡವನ್ನು ಅಪಭೃಂಶವನ್ನಾಗಿ ಮಾಡುತ್ತಿದ್ದಾರೆ. ಸಂಸ್ಕೃತ ಭೂಯಿಷ್ಟ ಪದಗಳ ಬಳಕೆಯಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗದು ಎಂದು ಅವರು ಇದೆ ವೇಳೆ ತಿಳಿಸಿದರು.
ಕೃತಕ ಭಾಷೆಯ ನಿರ್ಮಾಣದಿಂದಾಗಿ ಕನ್ನಡತನ ಹಾಳಾ ಗುತ್ತಿದೆ. ಇದು ನಿಲ್ಲಬೇಕು. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ವಿಶೇಷ ತರಬೇತಿಯ ಆವಶ್ಯಕತೆಯಿದೆ ಎಂದರು. ಸಿನೆಮಾ ಕ್ಷೇತ್ರವು ಅತ್ಯಂತ ಕಳಪೆಯಾಗಿದ್ದು ಕನ್ನಡವನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ದ್ವಂದ್ವಾರ್ಥ ನೀಡುವ ಪದಗಳ ಬಳಕೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಕನ್ನಡ ಪತ್ರಿಕೆಗೆ 175 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿ ಬೆಳೆಸಬೇಕು. ಕನ್ನಡಿಗರಿಗೆ ಕೆಲಸಕೊಡಿಸುವಂತಹ ಹೊಣೆ ಸರಕಾರದ್ದು, ಇದನ್ನು ಶಾಸಕರು ವಿಧಾನಸಭೆಯಲ್ಲಿ ಪ್ರಶ್ನಿಸಬೇಕು ಎಂದು ಉಪಸ್ಥಿತ ಶಾಸಕರಿಗೆ ಸೂಚಿಸಿದರು.
ಮನರಂಜನೆಯ ಹೆಸರಿನಲ್ಲಿ ಸಣ್ಣ ಮಕ್ಕಳಿಂದ ಅಶ್ಲೀಲ ದೃಶ್ಯಗಳನ್ನು ತೋರಿಸಲಾಗುತ್ತಿದೆ. ಬಾಲ್ಯವನ್ನು ಬಾಲ್ಯತನದಿಂದಲೇ ಕಳೆಯಲು ಬಿಡಬೇಕು. ಬಿಗ್ಬಾಸ್ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯ ಮೇಲೆ ದಾಳಿ ಮಾಡಲಾಗುತ್ತಿದೆ. ಮಹಿಳೆಯರ ಮಾನ ಹರಾಜು ಹಾಕುವ ದೃಶ್ಯಾವಳಿಗಳು ನಿರ್ಮಿಸಲಾಗುತ್ತಿದೆ. ಪ್ರಚಾರಕ್ಕೆ ಮಹಿಳೆಯರನ್ನು ವ್ಯಾಪಕವಾಗಿ ಬಳಸಿ ಕೊಳ್ಳಲಾಗುತ್ತಿದೆ ಎಂದು ಬೇಸರಿಸಿದರು.
ಭಟ್ಕಳ ಸರ್ವಧರ್ಮದ ಬೀಡಾಗಿದ್ದು ಇಲ್ಲಿನ ನವಾಯತ್ ಸಮುದಾಯವು ಆರ್ಥಿಕವಾಗಿ ಬಹಳಷ್ಟು ಕೊಡುಗೆಯನ್ನು ನೀಡಿದೆ. ನಾಮಧಾರಿ, ಗೊಂಡ, ವೈದಿಕ ಸಮುದಾಯ ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರೆತು ಸೌಹಾದರ್ ವಾತಾವರಣ ನಿರ್ಮಾಣಗೊಂಡಿದೆ ಎಂದು ಅವರು ಹೇಳಿದರು.
ಭಟ್ಕಳದ ಕಾರ್ಯನಿತರ ಪತ್ರಕರ್ತರ ಸಂಘ 25 ವರ್ಷಗಳು ಪೂರೈಸಿದ್ದು ಇಂದು ಹಬ್ಬದ ವಾತಾವರಣವನ್ನೇ ಸೃಷ್ಟಿಸಿದ್ದಾರೆ ಅಷ್ಟು ದೂರದಿಂದ ಬಂದ ತಮ್ಮ ಶ್ರಮ ಸಾರ್ಥಕವಾಯಿತು ಎಂದು ಅವರು ಹೇಳಿದರು.
ಶಾಸಕ ಮಾಂಕಾಳ್ ಎಸ್. ವೈದ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು, ಸಾಹಿತಿ ಡಾ.ಸೈಯದ್ ಝಮಿರುಲ್ಲಾ ಷರೀಫ್, ಸುವರ್ಣ ಕವರ್ ಸ್ಟೋರಿ ಸಂಪಾದಕಿ ವಿಜಯಲಕ್ಷ್ಮೀ ಶಿಬರೂರು, ಚಿತ್ರನಟ ಪ್ರೇಮ ಮತ್ತಿತರರು ಮಾತನಾಡಿದರು.
ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ, ಶ್ರೀ ಗುರುಸುಧೀಂದ್ರ ಕಾಲೇಜಿನ ಟ್ರಸ್ಟಿ ರಾಜೇಶ್ ನಾಯಕ, ಉ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಕ್ಕಳ, ಅನುಪಮಾ ಭಟ್, ಶ್ರೇಯಾ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು.ಉಪಾಧ್ಯಕ್ಷ ಎಂ.ಆರ್. ಮಾನ್ವಿ ಸ್ವಾಗತಿಸಿದರು. ಕಾರ್ಯದರ್ಶಿ ಭಾಸ್ಕರ್ ನಾಯ್ಕ ವಂದಿಸಿದರು. ಶ್ರೀಧರ ಶೇಟ್ ಹಾಗೂ ಕಲ್ಪನಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.







