ಎಪಿಎಂಸಿ ಚುನಾವಣೆ: ನೀರಸ ಮತದಾನ
ಉಡುಪಿ, ಜ.12: ಜಿಲ್ಲೆಯ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಇಂದು ಶಾಂತಿಯುತ ಮತದಾನ ನಡೆದಿದೆ. ಜಿಲ್ಲೆಯ ಮತದಾರರು ಚುನಾವಣೆಗೆ ನೀರಸ ಪ್ರತಿಕ್ರಿಯೆ ತೋರಿಸಿದ್ದು ಕೇವಲ 27.12 ಶೇ.ಮತದಾನವಾಗಿದೆ.
ಉಡುಪಿ ತಾಲೂಕಿನ 111 ಮತಗಟ್ಟೆಗಳು, ಕುಂದಾಪುರ ತಾಲೂಕಿನ 34 ಹಾಗೂ ಕಾರ್ಕಳ ತಾಲೂಕಿನ 74 ಮತಗಟ್ಟೆ ಸೇರಿದಂತೆ ಒಟ್ಟು 219 ಮತಗಟ್ಟೆಗಳಲ್ಲಿ ಇಂದು ಸಂಜೆ 5:00 ಗಂಟೆಯವರೆಗೆ ಮತದಾನ ನಡೆಯಿತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ತಾಲೂಕಿನ ಒಟ್ಟು 95,159 ಮತದಾರರಲ್ಲಿ 198,697 ಮಂದಿ (ಶೇ.19.65) ಮತ ಚಲಾಯಿಸಿದ್ದರೆ, ಕುಂದಾಪುರ ತಾಲೂಕಿನ 30,303 ಮಂದಿಯ ಪೈಕಿ 12,454 ಮಂದಿ (ಶೇ.33.67) ಹಾಗೂ ಕಾರ್ಕಳ ತಾಲೂಕಿನ 43,867 ಮಂದಿಯಲ್ಲಿ 14,768 ಮಂದಿ (ಶೇ.33.67) ಮಂದಿ ಮತ ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1,69,329 ಮತದಾರರಲ್ಲಿ ಇಂದು 45,919 (ಶೇ.27.12) ಮಂದಿ ಮತಚಲಾಯಿಸಿರುವುದಾಗಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.