ಮೆಲ್ಕಾರ್: ಇಸ್ಲಾಮಿಕ್ ಬ್ಯಾಂಕಿಂಗ್ ಮಾಹಿತಿ, ಸಂವಾದ

ಬಂಟ್ವಾಳ , ಜ.13 : ಇಸ್ಲಾಂನಲ್ಲಿ ಬಡ್ಡಿ ಪಡೆಯುವುದು ಮತ್ತು ಕೊಡುವುದು ನಿಷಿದ್ಧವಾಗಿದೆ. ಬಡ್ಡಿ ಇಲ್ಲದೆಯೂ ಇಸ್ಲಾಮಿಕ್ ಬ್ಯಾಂಕ್ ನಡೆಸಲು ಸಾಧ್ಯವಿದೆ. ಅಲ್ಲಲ್ಲಿ ಅಲ್ಪಸಂಖ್ಯಾತರ ಸಹಕಾರಿ ಸಂಘ ನಡೆಯುತ್ತಿದೆ. ಇದಕ್ಕೆ ಬೆಂಬಲ ನೀಡುವ ಕಾರ್ಯ ಸಮುದಾಯದಿಂದ ಆಗಬೇಕು ಎಂದು ಬಂಟ್ವಾಳ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಅಡ್ವಕೇಟ್ ಅಬೂಬಕರ್ ನೋಟರಿ ವಿಟ್ಲ ಅವರು ಹೇಳಿದರು.
ಅವರು ಬಂಟ್ವಾಳ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಶುಕ್ರವಾರ ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ನಡೆದ ಇಸ್ಲಾಮಿಕ್ ಫೈನಾನ್ಸ್ ಹಾಗೂ ಬ್ಯಾಂಕಿಂಗ್ ಕುರಿತು ಮಾಹಿತಿ, ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ಖಲೀಲುಲ್ಲಾ ಅಧ್ಯಕ್ಷತೆ ವಹಿಸಿದರು.
ಕೇರಳದ ಶಾಂತಪುರಂ ಕಲಾ ಮತ್ತು ವಿಜ್ಞಾನ ವಿದ್ಯಾಲಯ ಇಸ್ಲಾಮಿಕ್ ಹಣಕಾಸು ವಿಭಾಗದ ಉಪನ್ಯಾಸಕ ಡಾ. ಸಯಿದ್ ರಮ್ಜಾನ್ ಸಿ.ಪಿ. ಹಾಗೂ ಉಡುಪಿ ಜನಸೇವಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಹುಸೈನ್ ಕೋಡಿಬೆಂಗ್ರೆ ಇಸ್ಲಾಮಿಕ್ ಬ್ಯಾಂಕಿಂಗ್ ಕುರಿತು ಮಾಹಿತಿ ನೀಡಿದರು.
ಬಂಟ್ವಾಳ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಎಸ್. ಅಬ್ಬಾಸ್ ಹಾಜಿ ಸಜಿಪ ಪ್ರಸ್ತಾವನೆಗೈದರು.
ನಿರ್ದೇಶಕ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸ್ವಾಗತಿಸಿದರು.
ಉಪಾಧ್ಯಕ್ಷ ಕೆ.ಎಸ್. ಮುಹಮ್ಮದ್ ಕಡೇಶ್ವಾಲ್ಯ ವಂದಿಸಿದರು.
ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.
ರಾಶಿದ್ ಬಂಟ್ವಾಳ ಕಿರಾಅತ್ ಪಠಿಸಿದರು.
ನಿರ್ದೇಶಕರಾದ ಅಬ್ಬಾಸ್ ಅಲಿ ಬೋಳಂತೂರು, ನಾಝೀಮ ನಾವೂರು, ಸಾಯಿರಬಾನು ಬಿಳಿಯೂರು, ಕಾರ್ಯದರ್ಶಿ ಎ. ನಾಗೇಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.







