2 ಕೋಟಿ ರೂ. ವೆಚ್ಚದಲ್ಲಿ ಕುದ್ಮಲ್ ರಂಗರಾವ್ ಭವನ: ಶಾಸಕ ಲೋಬೊ

ಮಂಗಳೂರು, ಜ. 17: ನಗರದ ಬಾಬುಗುಡ್ಡೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುದ್ಮಲ್ ರಂಗರಾವ್ ಸಭಾಭವನದ ಕಾಮಗಾರಿಯನ್ನು ಇಂದು ಪರಿಶೀಲಿಸಿದ ಶಾಸಕ ಜೆ.ಆರ್.ಲೋಬೊ ಅವರು ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸುವಂತೆ ಸಲಹೆ ನೀಡಿದ್ದಾರೆ.
ಮೂರು ಅಂತಸ್ತಿನ ಈ ಭವನದಲ್ಲಿ ಕೆಳಗೆ ಕಾರ್ಪಾರ್ಕಿಂಗ್, ಎರಡನೆ ಮಾಳಿಗೆಯಲ್ಲಿ ಸಭಾಭವನ ಮೂರನೆ ಮಾಳಿಗೆಯಲ್ಲಿ ಭೋಜನಕ್ಕೆ ವ್ಯವಸ್ಥೆ ಇದೆ. ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಮುಗಿಸುವಂತೆಯೂ ಇನ್ನೂ ಹೆಚ್ಚಿನ ಅನುದಾನ ಬೇಕಾಗಿದ್ದರೆ ಕೊಡಿಸುವ ಭರವಸೆಯನ್ನು ನೀಡಿದರು.
ಕಾಮಗಾರಿ ಮುಗಿದ ಬಳಿಕ ಲೋಕಾರ್ಪಣೆ ಮಾಡಿ ಸಾರ್ವಜನಿಕರಿಗೆ ಬಿಟ್ಟುಕೊಡಲಾಗುವುದು. ಕಾಮಗಾರಿಯಲ್ಲಿ ಲೋಪ ಕಂಡು ಬರದಂತೆ ನಿಗಾ ವಹಿಸುವಂತೆಯೂ ಲೋಬೊ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ಅಪ್ಪಿ, ಶೈಲಜಾ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ವಿಜಯಲಕ್ಷ್ಮೀ, ಗುತ್ತಿಗೆದಾರ ಅರುಣ್ ಕೊಯೆಲೋ ಮುಂತಾದವರು ಉಪಸ್ಥಿತರಿದ್ದರು.
Next Story





