ಮಹಿಳೆಯರು -ದಲಿತರು ದೇವಾಲಯ ಪ್ರವೇಶಕ್ಕೆ ಅವಕಾಶ: ಸಿಎಂ ಸೂಚನೆ

ಬೆಂಗಳೂರು, ಜ.18:ನಿರ್ಬಂಧ ಹೇರುವ ದೇವಾಲಯಗಳಿಗೆ ಮಹಿಳೆಯರು ಮತ್ತು ದಲಿತರು ಸೇರಿದಂತೆ ಇತರೆ ಸಮುದಾಯದವರಿಗೆ ಪ್ರವೇಶ ಕಲ್ಪಿಸಲು ಮುಜರಾಯಿ ಇಲಾಖೆ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬುಧವಾರ ನಗರದ ಪುರಭವನದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಆಯೋಜಿಸಿದ್ದ ‘ಘಂಟನಾದ ಸಮ್ಮೇಳನ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇವಾಲಯಗಳಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಕೆಲ ಪದ್ಧತಿಗಳನ್ನು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ನಗರ ಪ್ರದೇಶಗಳಲ್ಲಿನ ಬಹುತೇಕ ದೇವಾಲಯಗಳಲ್ಲಿ ಮಹಿಳೆಯರು ಮತ್ತು ಎಲ್ಲ ವರ್ಗದ ಜನರಿಗೆ ಪ್ರವೇಶವಿದೆ. ಆದರೆ ರಾಜ್ಯದ ಕೆಲವೊಂದು ದೇವಾಲಯಗಳಲ್ಲಿ ಮಹಿಳೆಯರು ಮತ್ತು ದಲಿತರಿಗೆ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ. ಇದು ಬದಲಾಗಬೇಕು. ಮಹಿಳೆಯರು ಸೇರಿದಂತೆ ಎಲ್ಲ ಜಾತಿ ಜನಾಂಗದವರಿಗೂ ದೇವಾಲಯ ಪ್ರವೇಶಕ್ಕೆ ಮುಜರಾಯಿ ಇಲಾಖೆ ಅವಕಾಶ ಕಲ್ಪಿಸಲು ಮುಂದಾಗಬೇಕು ಎಂದರು.
ಸಮಾಜದಲ್ಲಿ ಬಡವ ಮತ್ತು ಶ್ರೀಮಂತರ ನಡುವೆ ಇರುವ ಕಂದಕವನ್ನು ಮುಚ್ಚುವ ಕೆಲಸ ಆಗಬೇಕಿದೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮಗಳನ್ನು ವ್ಯಾಖ್ಯಾನ ಮಾಡಿಕೊಳ್ಳಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಆಶಯದಂತೆ ನಮ್ಮಲ್ಲಿ ವೇದಾಂತದ ಧರ್ಮದ ಮೆದುಳು ಇರಬೇಕು, ಇಸ್ಲಾಂ ಧರ್ಮದ ದೇಹವಿದ್ದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದು ವ್ಯಾಖ್ಯಾನಿಸಿದರು.
ನಾಸ್ತಿಕನೆಂದು ಅಪಪ್ರಚಾರ: ತನ್ನನ್ನು ನಾಸ್ತಿಕ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ನಾನೂ ದೇವಾಲಯಗಳನ್ನು ಹುಡುಕಿಕೊಂಡು ಹೋಗುವನಲ್ಲ. ದೇವಾಲಯಕ್ಕೆ ಹೋಗಬೇಕೆಂದರೆ ತಿರುಪತಿ, ಚಾಂಮುಡೇಶ್ವರಿ ಬೆಟ್ಟಕ್ಕೆ ಹೋಗುತ್ತೇನೆ. ನಮ್ಮ ಧರ್ಮದ ಬಗ್ಗೆ ಗೌರವ, ನಂಬಿಕೆ ಇರಬೇಕು. ಇದರ ಜೊತೆಗೂ ಅನ್ಯ ಧರ್ಮದ ಸಹಿಷ್ಣುತೆ ಇರಬೇಕು ಎಂದು ವಾದಿಸುತ್ತೇನೆ. ಆದರೆ ಇದಕ್ಕೆ ತಪ್ಪು ವ್ಯಾಖ್ಯಾನ ನೀಡುವುದು ಬೇಡ ಎಂದರು.
ದೇವರ ಮತ್ತು ಭಕ್ತರ ನಡುವೆ ರಾಯಭಾರಿಗಳಂತೆ ಅರ್ಚಕರು ಕಾರ್ಯ ನಿರ್ವಹಿಸುತ್ತಾರೆ. ಭಕ್ತರ ಕಷ್ಟ ನೋವುಗಳನ್ನು ಹೇಳಿಕೊಳ್ಳಲು ದೇವಾಲಯಕ್ಕೆ ಬರುತ್ತಾರೆ. ಅವರಿಗೆ ಮನೋಸ್ಥೈರ್ಯ, ಸಮಾಧಾನ ಪಡಿಸುವಂತ ಕೆಲಸವನ್ನು ಮಾಡುತ್ತಾರೆ. ಆದರೆ ಅರ್ಚಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಈಗಲೇ ಭರವಸೆ ನೀಡಲು ಆಗುವುದಿಲ್ಲ. ನಿಮ್ಮ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಸರಕಾರ ಸ್ಪಂದಿಸಲಿದೆ ಎಂದರು.
ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ತಾಸ್ತಿಕ್ ಅನುದಾನವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಎ, ಬಿ, ಸಿ ವರ್ಗಗಳ ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಅರ್ಚಕರಿಗೆ ಸಮಾನ ವೇತನ ನೀಡುವ ಕುರಿತು ಮುಂದಿನ ಹತ್ತು ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ನೌಕರರಿಗೂ ವಿಮೆ ಸೌಲಭ್ಯ ಕಲ್ಪಿಸಲು ಇಲಾಖೆಯ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸುತ್ತೇನೆ. ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಮುಂದಿನ ಬಜೆಟ್ ಅಧಿವೇಶನದ ಸಮಯದಲ್ಲಿ ಘೋಷಣೆ ಮಾಡಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಬಿನ್ನವತ್ತಳೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಘದ ಅಧ್ಯಕ್ಷ ಅಚ್ಯತ್ ಪಟ್ಟಾಭಿರಾಂ, ಮುಜರಾಯಿ ಇಲಾಖೆಯ ಆಯುಕ್ತ ಎಸ್.ವಿ. ಷಡಕ್ಷರಿ ಸ್ವಾಮಿ ಸೇರಿದಂತೆ ಇತರರು ಉಪಸ್ಥಿರಿದ್ದರು.
ಬೆಂಗಳೂರು ನಗರವನ್ನು ವಿಶ್ವದ ಡೈನಮಿಕ್ ಸಿಟಿ ಎಂದು ಗುರುತಿಸಿರುವುದು ಸಂತಸ ತಂದಿದೆ. ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಿರುವ ಪಾಲಿಕೆಯ ಎಲ್ಲ ಸಿಬ್ಬಂದಿಗೂ ವಂದನೆಗಳು.
-ಸಿದ್ದರಾಮಯ್ಯ, ಮುಖ್ಯಮಂತ್ರಿ







