ನಗರ ಸ್ಥಳೀಯ ಸಂಸ್ಥೆಗಳಿಗೆ ಫೆ.12ಕ್ಕೆ ಉಪ ಚುನಾವಣೆ
ಬೆಂಗಳೂರು, ಜ. 18: ಗ್ರಾಮ ಪಂಚಾಯತಿಯಿಂದ ಉನ್ನತೀಕರಿಸಿರುವ ನಗರ ಸ್ಥಳೀಯ ಸಂಸ್ಥೆಯಾದ ಬಳ್ಳಾರಿಯ ಕುಡುತಿನಿ ಪಟ್ಟಣ ಪಂಚಾಯ್ತಿ 19 ವಾರ್ಡ್ಗಳಿಗೆ ಫೆ.12ರಂದು ಮತದಾನ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.
ಅಲ್ಲದೆ, ವಿವಿಧ ಕಾರಣಗಳಿಗಾಗಿ ತೆರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯ ವಾರ್ಡ್ ಸಂಖ್ಯೆ-6, 16, 19,21, 22, 26, ಉಳ್ಳಾಲ ನಗರ ಸಭೆಯ ವಾರ್ಡ್ ಸಂಖ್ಯೆ-24, 26, ನಾಗಮಂಗಲ, ಕಮಲಾಪುರ ಪಟ್ಟಣ ಪಂಚಾಯ್ತಿಗಳು ಹಾಗೂ ಯಾದಗಿರಿಯ ಶೋರಾಪುರ ನಗರಸಭೆ ಸೇರಿದಂತೆ ಒಟ್ಟು 11ವಾರ್ಡ್ಗಳಿಗೆ ಫೆ.12ರಂದು ಮತದಾನ ನಡೆಯಲಿದೆ.
ಮೇಲ್ಕಂಡ ಸ್ಥಳೀಯ ಸಂಸ್ಥೆಗಳಿಗೆ ಜ.25ಕ್ಕೆ ಆಯಾ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಫೆ.1 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಫೆ.2ಕ್ಕೆ ನಾಮಪತ್ರ ಪರಿಶೀಲನೆ, ಫೆ.4 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಫೆ.12ರ ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಮತದಾನ ನಡೆಯಲಿದೆ. ಫೆ. 15ಕ್ಕೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದೇ ಫಲಿತಾಂಶ ಪ್ರಕಟಿಸಲಾಗುವುದು. ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜ.25ರಿಂದ ಫೆ.15ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಆಯೋಗ ತಿಳಿಸಿದೆ.