ಮಡಿಕೇರಿ: ಉರುಳಿಗೆ ಸಿಲುಕಿದ ಗಂಡು ಹುಲಿಯ ರಕ್ಷಣೆ

ಮಡಿಕೇರಿ, ಜ.19: ಬೆಕ್ಕೆಸೊಡ್ಲೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ ದಡದ ಕುರುಚಲು ಕಾಡಿನಲ್ಲಿ ಉರುಳಿಗೆ ಸಿಲುಕಿದ್ದ ಹುಲಿಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಗ್ರಾಮದ ಶ್ರೀ ಮಂದತವ್ವ ದೇವಸ್ಥಾನಕ್ಕೆ ಹೋಗುವ ಮಾರ್ಗದ ನದಿ
ದಡದಲ್ಲಿ ಪ್ರಾಣಿಗಳು ನಿರಂತರವಾಗಿ ಸಂಚರಿಸುತ್ತಿದ್ದು, ಇಲ್ಲಿ ಉರುಳನ್ನು ಹಾಕಲಾಗಿತ್ತು. ಈ ಉರುಳಿಗೆ ಹುಲಿಯ ಎಡ ಕೈ ಸಿಲುಕಿಕೊಂಡು ಅಲ್ಲಿಯೇ ಕುರುಚಲು ಕಾಡಿನೊಳಗೆ ನರಳಾಡುತ್ತಾ ಬಿದ್ದಿತ್ತು.
ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಘಗಳಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಉರುಳು ಬಿಡಿಸಿ ರಕ್ಷಿಸಿದರು. ಮಂಗಳವಾರ ರಾತ್ರಿ ಉರುಳಿಗೆ ಸಿಲುಕಿರಬಹುದೆಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.
ಸ್ಥಳಕ್ಕೆ ಡಿಎಫ್ಒ ಎಂ.ಎಂ. ಜಯಾ, ಪೊನ್ನಂಪೇಟೆ ಆರ್ಎಫ್ಒ ಪಿ.ಬಿ. ಉತ್ತಯ್ಯ, ಮತ್ತಿಗೋಡು ಆರ್ಎಫ್ಒ ಕಿರಣ್ ಕುಮಾರ್, ಪಶು ವೈದ್ಯಾಧಿಕಾರಿ ನಾಗರಾಜು ಹಾಗೂ ಕೂರ್ಗ್ವೈಲ್ಡ್ ಲೈಪ್ ಸೊಸೈಟಿಯ ಬೋಸ್ ಮಾದಪ್ಪ, ವೈಲ್ಡ್ ಲೈಪ್ ಟ್ರಸ್ಟ್ ಆಫ್ ಇಂಡಿಯಾ ಪ್ರತಿನಿಧಿಗಳ ಸಮ್ಮುಖದಲ್ಲಿ ಹುಲಿಯನ್ನು ಮೈಸೂರಿನ ಮೃಗಾಲಯಕ್ಕೆ ಸಾಗಿಸಲಾಯಿತು





