ಫೈಝಲ್ ಕೊಲೆಪ್ರಕರಣ: ತನಿಖೆ ಕ್ರೈಂಬ್ರಾಂಚ್ಗೆ

ಮಲಪ್ಪುರಂ,ಜ.20: ಕೊಡಿಂಞಿ ಫೈಝಲ್ ಕೊಲೆ ಪ್ರಕರಣದ ತನಿಖೆಯನ್ನು ಕ್ರೈಂಬ್ರಾಂಚ್ಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ಎಲ್ಲ ಆರೋಪಿಗಳನ್ನು ಕ್ರೈಂಬ್ರಾಂಚ್ ಬಂಧಿಸಬೇಕೆಂದು ಆಗ್ರಹಿಸಿ ಸರ್ವ ಪಕ್ಷ ಸಮಿತಿಯ ನೇತೃತ್ವದಲ್ಲಿ ಕೊಡಿಂಞಿಯಲ್ಲಿ ನಡೆಸಿದ್ದ ಹರತಾಳ ಹಾಗೂ ಎಂಟು ಗಂಟೆಕಾಲ ರಸ್ತೆತಡೆ ನಡೆದ ಬೆನ್ನಿಗೆ ಪ್ರಕರಣವನ್ನು ಕ್ರೈಂಬ್ರಾಂಚ್ಗೊಪ್ಪಿಸಲು ಸರಕಾರ ನಿರ್ಧರಿಸಿತು.
ತೃಶೂರ್ ರೇಂಜ್ ಐಜಿ ಎಂ.ಆರ್. ಅಜಿತ್ಕುಮಾರ್ ಪ್ರಕರಣವನ್ನು ಕ್ರೈಂಬ್ರಾಂಚ್ಗೊಪ್ಪಿಸಿ ಆದೇಶ ಹೊರಡಿಸಿದ್ದು ಕ್ರೈಂಬ್ರಾಂಚ್ ಡಿವೈಎಸ್ಪಿ ಎಂ.ಪಿ. ಮೋಹನ್ ಚಂದ್ರನ್ ನೇತೃತ್ವದಲ್ಲಿ ಕೇಸು ತನಿಖೆ ನಡೆಯಲಿದೆ. ತಾನೂರ್, ಮಂಜೇರಿ ಸರ್ಕಲ್ ಇನ್ಸ್ಪೆಕ್ಟರ್ಗಳು ಈ ತನಿಖಾ ತಂಡದಲ್ಲಿ ಸದಸ್ಯರಾಗಿರಲಿದ್ದಾರೆ. ಮಲಪ್ಪುರಂ ಡಿವೈಎಸ್ಪಿ ಪ್ರದೀಪ್ಕುಮಾರ್ ನೇತೃತ್ವದಲ್ಲಿ ಈವರೆಗೂ ಪ್ರಕರಣದ ತನಿಖೆ ನಡೆದಿತ್ತು.
ಗುರುವಾರ ಬೆಳಗ್ಗೆ ಹತ್ತು ಗಂಟೆಗೆ ಚೆಮ್ಮಾಡ್ ನಗರದಲ್ಲಿ ರಾಜ್ಯ ಹೆದ್ದಾರಿ ತಡೆಯನ್ನು ಮಾಡಿ ಪ್ರತಿಭಟನೆ ಆರಂಭಗೊಂಡಿತ್ತು. ಶಾಸಕ ಪಿ.ಕೆ. ಅಬ್ದುರಬ್ ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪೈಝಲ್ರ ತಾಯಿ, ಮಕ್ಕಳು ಸಹೋದರಿಯರು ಕೂಡಾ ಭಾಗವಹಿಸಿದ್ದರು. ತನಿಖೆಯ ಹೊಣೆಯನ್ನು ಕ್ರೈಂಬ್ರಾಂಚ್ಗೊಪ್ಪಿಸಿದ ಬಳಿಕ ಸಂಜೆ ಆರುಗಂಟೆಗೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು ಎಂದು ವರದಿ ತಿಳಿಸಿದೆ.





