ಯುವಕರು ದೇಶದಲ್ಲಿ ಹೊಸತನವನ್ನು ಮೂಡಿಸಬೇಕು: ಶಶಿ ತರೂರ್

ಮಣಿಪಾಲ, ಜ.20: ದೇಶದ ಯುವಜನತೆ ತಮ್ಮ ಅಪರಿಮಿತ ಸಾಮರ್ಥ್ಯದ ಮೂಲಕ ಹೊಸತನದ (ಇನವೇಟಿವ್) ಕೌಶಲ್ಯದೊಂದಿಗೆ ದೇಶದ ಆರ್ಥಿಕ ಸ್ಥಿತಿಯನ್ನು ಬಲಿಷ್ಠಗೊಳಿಸು ಪ್ರಯತ್ನ ನಡೆಸಬೇಕು ಎಂದು ಸಂಸದ ಹಾಗೂ ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯ ಅಧ್ಯಕ್ಷ ಶಶಿ ತರೂರ್ ಹೇಳಿದ್ದಾರೆ.
ಮಣಿಪಾಲದ ಎಂಐಟಿಯಲ್ಲಿ ಮಣಿಪಾಲ ವಿವಿ ಹಾಗೂ ಇಂಕ್ ಸಂಸ್ಥೆ ಜಂಟಿಯಾಗಿ ಆಯೋಜಿಸಿದ ‘ಟೀನೋವೇಟರ್-2016’ ರಾಷ್ಟ್ರೀಯ ಮಟ್ಟದ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಸಂಶೋಧನಾ ಸಾಮರ್ಥ್ಯದ ಪ್ರತಿಭಾ ಪ್ರದರ್ಶನದ ಫೈನಲ್ನಲ್ಲಿ ಇಂದು ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಅವರು ವಿಶೇಷ ಉಪನ್ಯಾಸ ನೀಡುತಿದ್ದರು.
ದೇಶದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಜನ್ಮದಾತವಾಗಿ ಭಾರತೀಯರಿಗೆ ಬಂದಿದೆ. ಭಾರತ ಉದ್ದಿಮೆ ಆಧಾರಿತ ಆರ್ಥಿಕತೆಯತ್ತ ನಿಜವಾಗಿಯೂ ದಾಪುಗಾಲು ಹಾಕುತ್ತಿದೆ. ಈ ವಿಷಯದಲ್ಲಿ ನಮ್ಮ ಹೊಸ ತಲೆಮಾರು ಹೊಸ ಹೊಸ ಆಲೋಚನೆ, ಹೊಸ ಸಂಶೋಧನೆಗಳೊಂದಿಗೆ ದೇಶ ತಮ್ಮ ಮೇಲಿರಿಸಿದ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಬೇರೆ ಬೇರೆ ಕ್ಷೇತ್ರಗಳಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಪಡಿಸಿದೆ. ಇಂಥ ಎಲ್ಲಾ ಬದಲಾವಣೆ, ಹೊಸತನಗಳಿಂದ 2020ರ ವೇಳೆ ಭಾರತದ ಆರ್ಥಿಕ ಪರಿಸ್ಥಿತಿಯೇ ಬದಲಾಗಿ ಹೋಗುವ ನಿರೀಕ್ಷೆ ಇದೆ. ವಿಶ್ವ ಎಂಬುದು ಚಿಕ್ಕದು, ಆದರೆ ಅವಕಾಶಗಳು ಅತಿ ಹೆಚ್ಚು. 1990ರ ಉದಾರೀಕರಣದ ನಂತರ ಭಾರತ ನಾಟಕೀಯವಾಗಿ ವಿಶ್ವದ ಬಲಿಷ್ಠ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ ಎಂದರು.
ನೋಟು ಅಮಾನ್ಯೀಕರಣದ ಹೊಡೆತ:
2015ರಲ್ಲಿ ಐಎಂಎಫ್, ವಿಶ್ವದಲ್ಲಿ ಭಾರತದ ಆರ್ಥಿಕತೆ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರುವ ಆರ್ಥಿಕತೆ. 2020ರ ಸುಮಾರಿಗೆ ಅದು ವಿಶ್ವದ ಅಗ್ರಸ್ಥಾನಕ್ಕೇರಲಿದೆ ಎಂದು ಭವಿಷ್ಯ ನುಡಿದಿತ್ತು. ಆದರೆ ದುರದೃಷ್ಟವಶಾತ್ ಇತ್ತೀಚೆಗೆ ಮಾಡಲಾದ 500 ಮತ್ತು 1000ರೂ.ನೋಟುಗಳು ಅಮಾನ್ಯೀಕರಣದಿಂದ ಭಾರತ ತೀವ್ರ ಹಿನ್ನಡೆ ಕಾಣುವಂತಾಗಿದೆ ಎಂದು ಶಶಿ ತರೂರ್ ನುಡಿದರು.
ಚೀನಾ, ಜಪಾನ್, ಕೊರಿಯಾ ಹಾಗೂ ಅಮೆರಿಕ ಎಲ್ಲಾ ದೇಶಗಳಿಗೂ ಪ್ರಾಯವಾಗುತ್ತಿದೆ. ಇವುಗಳಿಗೆ ಹೋಲಿಸಿದರೆ ಭಾರತ 2020ರ ವೇಳೆ ಭಾರತದ ಜನರ ಸರಾಸರಿ ವಯಸ್ಸು 29 ಆಗಿರುತ್ತದೆ. ಅಮೆರಿಕದ್ದು 40, ಜಪಾನ್ದು 47 ಆಗಿರುತ್ತದೆ. ಭಾರತದ ದೊಡ್ಡ ಸಂಖ್ಯೆಯ ಜನರು 25 ವರ್ಷ (ಶೇ.50.1) ದೊಳಗಿನವರಾಗಿರುತ್ತಾರೆ. ಒಟ್ಟಾರೆ ಶೇ.65ರಷ್ಟು ಭಾರತೀಯರು 35 ವರ್ಷದೊಳಗಿನವರಾಗಿರುತ್ತಾರೆ ಎಂದರು.
ಆದರೆ ಭಾರತ ಈಗಿನಂತೆ ಅಶಿಕ್ಷಿತ ಹಾಗೂ ನಿರುದ್ಯೋಗಿ ಯುವಕರನ್ನು ಈಗಿನಂತೆ ಸೃಷ್ಟಿಸುತ್ತಾ ಹೋದರೆ ದೇಶದ ಪರಿಸ್ಥಿತಿ ಬಿಗಡಾಯಿಸಲಿದೆ ಎಂದವರು ಎಚ್ಚರಿಸಿದರು. ದೇಶದ 165 ಜಿಲ್ಲೆಗಳಲ್ಲಿ ನಿರುದ್ಯೋಗದಿಂದಾ ಗಿಯೇ ದೊಡ್ಡ ಸಂಖ್ಯೆಯ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದವರು ವಿವರಿಸಿದರು.
‘ಯುವಕರಿಗೆ ಸೂಕ್ತವಾದ ವಿದ್ಯೆ ಹಾಗೂ ಕೌಶಲ್ಯವನ್ನು ಕಲಿಸಲು ನಾವು ವಿಫಲರಾಗಿದ್ದೇವೆ. ವಿದ್ಯೆ ಎಂಬುದು ಪ್ರತಿಯೊಂದು ಕುಟುಂಬದ ಅವಿಭಾಜ್ಯ ಅಂಗವಾಗಿರುವಂತೆ ನೋಡಿಕೊಳ್ಳಬೇಕು. ಹೊಸ ತಲೆಮಾರು ವಿಶ್ವ ಮಟ್ಟದಲ್ಲಿ ಸಾಧನೆ ಮಾಡುವಂತೆ ನೋಡಿಕೊಳ್ಳಬೇಕು. ಹೊಸ ತಲೆಮಾರು ಅವಕಾಶವಂಚಿತರ ಪರವಾಗಿ ಕೆಲಸ ಮಾಡಬೇಕು ಎಂದರು.
ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಸ್ವಾಗತಿಸಿದರು. ಮಣಿಪಾಲ ವಿವಿ ರಿಜಿಸ್ಟ್ರಾರ್ ಡಾ.ನಾರಾಯಮ ಸಭಾಹಿತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂಕ್ನ ಸಿಇಒ ಹಾಗೂ ಸ್ಥಾಪಕಿ ಲಕ್ಷ್ಮೀ ಪ್ರಚೂರಿ ಪರಿಚಯಿಸಿದರು.
ರಾಜಕೀಯದಲ್ಲಿ ದಪ್ಪಚರ್ಮ ಇರಬೇಕು
ಲಕ್ಷ್ಮೀ ಪ್ರಚೂರಿ ಅವರೊಂದಿಗೆ ನಡೆಸಿದ ಪ್ರಶ್ನೋತ್ತರ ಸಂದರ್ಭದಲ್ಲಿ ರಾಜಕೀಯದಲ್ಲಿ ವಿರೋಧಿಗಳಿಂದ ಈಗಾಗಲೇ ಸಾಕಷ್ಟು ನೊಂದಿದ್ದರೂ, ದೇಶದೊಳಗೆ, ಹೊರ ದೇಶಗಳಲ್ಲಿ ಒಳ್ಳೆಯ ಅವಕಾಶವಿದ್ದರೂ ಯಾಕೆ ರಾಜಕೀಯ ಬಿಟ್ಟು ಅದನ್ನು ಸ್ವೀಕರಿಸುತ್ತಿಲ್ಲ ಎಂಬ ಪ್ರಶ್ನೆಗೆ ರಾಜಕೀಯದಲ್ಲಿ ನಾನು ದಪ್ಪ ಚರ್ಮ ಬೆಳೆಸಿಕೊಂಡಿದ್ದೇನೆ ಎಂದರು.ಇದೇ ಸಮಸ್ಯೆ ಹಿಂದೆ ನಟವರ್ ಸಿಂಗ್ಗೆ ಬಂದಾಗ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಾಜಕೀಯದಲ್ಲಿ ಇರುವಾಗ, ಜನರ ಸೇವೆ ಮಾಡಲು ನೀವು ದಪ್ಪ ಚರ್ಮ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ನಾನು ಸಹ ಅದನ್ನೇ ಅನ್ವಯಿಸಿಕೊಂಡಿದ್ದೇನೆ. ಕೇವಲ ಪ್ರತಿಪಕ್ಷಗಳು ಮಾತ್ರವಲ್ಲ, ಸ್ವಪಕ್ಷೀಯರೂ ನನ್ನ ವಿರುದ್ಧ ಸಾಕಷ್ಟು ಸುಳ್ಳು ಪ್ರಚಾರದ ಮೂಲಕ ಮಾನಸಿಕ ಹಿಂಸೆ ನೀಡುತಿದ್ದಾರೆ ಎಂದರು.







