ನೊಂದವರ ದನಿಯಾಗಿದ್ದ ಬೊಜ್ಜಾ ತಾರಕಂ
![ನೊಂದವರ ದನಿಯಾಗಿದ್ದ ಬೊಜ್ಜಾ ತಾರಕಂ ನೊಂದವರ ದನಿಯಾಗಿದ್ದ ಬೊಜ್ಜಾ ತಾರಕಂ](https://www.varthabharati.in/sites/default/files/images/articles/2017/01/21/bojja2.jpg)
ಬೊಜ್ಜಾ ತಾರಕಂರವರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಸಾಮಾಜಿಕ ಹೋರಾಟಗಾರ, ಕವಿ, ಕಾದಂಬರಿಕಾರ, ಅತ್ಯುತ್ತಮ ಲೇಖಕ, ಪತ್ರಕರ್ತ, ಸುಪ್ರಸಿದ್ಧ ವಕೀಲ, ಮಹಿಳಾವಾದಿ. ಅವರೇ ತಮ್ಮನ್ನು ತಾವು ಕರೆದುಕೊಳ್ಳುವಂತೆ ಅಂಬೇಡ್ಕರ್ವಾದಿ ಮತ್ತು ಮಾರ್ಕ್ಸ್ವಾದಿ. ತಮ್ಮ ಜೀವನದುದ್ದಕ್ಕೂ ಅಂಬೇಡ್ಕರ್ ಮತ್ತು ಮಾರ್ಕ್ಸ್ ಚಿಂತನೆಗಳನ್ನು ಬೆಸೆಯಲು ಪ್ರಯತ್ನ ಪಟ್ಟವರು. ಆ ಕಾರಣಕ್ಕಾಗಿಯೇ ಅಂಬೇಡ್ಕರ್ವಾದಿಗಳಿಂದಲೂ, ಮಾರ್ಕ್ಸ್ವಾದಿಗಳಿಂದಲೂ ಟೀಕೆಗೆ ಗುರಿಯಾದವರು.
ನ್ಯಾಯಾಂಗ ವ್ಯವಸ್ಥೆಯಲ್ಲಿ ಬೊಜ್ಜಾ ತಾರಕಂ ಅವರ ಹೆಸರನ್ನು ಕೇಳದವರೇ ಇಲ್ಲ. ಜಾತೀಯತೆ ನ್ಯಾಯಾಂಗ ವ್ಯವಸ್ಥೆಯಲ್ಲೂ ತಾಂಡವವಾಡುತ್ತಿದೆ ಎಂದು ಹೇಳಿದ ನಿಷ್ಠುರವಾದಿಯಾಗಿದ್ದರು ಅವರು. ಸದಾ ನೊಂದವರ ಪರ ಸಮಾಜದಲ್ಲಿ, ನ್ಯಾಯಾಲಯದಲ್ಲಿ ನಿಂತು ಹೋರಾಟ ಮಾಡಿದ ಚೇತನ ಬೊಜ್ಜಾ ತಾರಕಂ. ಇಂತಹ ಧೀಮಂತ ವ್ಯಕ್ತಿ ಕಳೆದ ಸೆಪ್ಟಂಬರ್ 16 ರಂದು ಇಹಲೋಕ ತ್ಯಜಿಸಿದ್ದಾರೆ.
1939ರಲ್ಲಿ ಅವಿಭಜಿತ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪುಟ್ಟ ಹಳ್ಳಿ ಕಂಡಿಕೊಪ್ಪದಲ್ಲಿ ಬೊಜ್ಜಾ ಅಪ್ಪಾಲಸ್ವಾಮಿ ಮತ್ತು ಮಾವಲಮ್ಮ ದಂಪತಿಗಳ ಕೂಸು ಬೊಜ್ಜಾ ತಾರಕಂ ನೊಂದವರ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುವಂತೆ ಬೆಳೆದದ್ದು ನಿಜಕ್ಕೂ ರೋಚಕ. ಸಾಮಾನ್ಯ ದಲಿತ ಕುಟುಂಬದಲ್ಲಿ ಹುಟ್ಟಿದ ತಾರಕಂರವರು ತಮ್ಮ ಕುಟುಂಬದಿಂದಲೇ ಅಂಬೇಡ್ಕರ್ರವರ ಪರಿಚಯ ಪಡೆದುಕೊಂಡರು. ತಂದೆ ಅಪ್ಪಾಲಸ್ವಾಮಿಯವರು ಒಬ್ಬ ಅಂಬೇಡ್ಕರ್ವಾದಿಯಾಗಿದ್ದು ಅಂಬೇಡ್ಕರ್ರವರು ಸ್ಥಾಪಿಸಿದ್ದ ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್ ಆಂಧ್ರಪ್ರದೇಶ ಶಾಖೆಯ ನಾಯಕತ್ವ ವಹಿಸಿಕೊಂಡಿದ್ದರಲ್ಲದೆ 1952ರ ಚುನಾವಣೆಯಲ್ಲಿ ಶಾಸನ ಸಭೆಗೆ ಆಯ್ಕೆಯಾಗಿದ್ದರು.
ಇಂತಹ ವಾತಾವರಣದಲ್ಲಿ ಬೆಳೆದ ತಾರಕಂರವರಿಗೆ ಶೋಷಣಾ ಮುಕ್ತ ಸಮಾಜದ ಕನಸು ಕಾಣುವುದು ಅಷ್ಟೇನು ದೂರದ ವಿಚಾರವಾಗಿರಲಿಲ್ಲ.ವಿದ್ಯಾರ್ಥಿಯಾಗಿದ್ದಾಗಲೇ ಹೋರಾಟದ ಜೀವನವನ್ನು ಮೈಗೂಡಿಸಿಕೊಂಡು ರೆಡ್ಡಿ ಭೂಮಾಲಕರ ವಿರುದ್ಧ ತಿರುಗಿಬಿದ್ದಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅಂಬೇಡ್ಕರ್ ಯುವಜನ ಸಂಘದ ಸ್ಥಾಪನೆಗೆ ಕಾರಣರಾಗಿದ್ದರು. ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಮಾಡುವ ಆಸೆ ಇತ್ತಾದರೂ ಓದಿದ್ದು ಕಾನೂನು ಶಾಸ್ತ್ರ. ಆದರೆ ಅದು ವಿಫಲವಾಗಲಿಲ್ಲ. ಇಂದು ತಾರಕಂರವರು ನಮಗೆಲ್ಲಾ ಚಿರಪರಿಚಿತರಾಗಿರುವುದು ಒಬ್ಬ ನಿಷ್ಠಾವಂತ, ಬಡವರ ಪರ ವಕೀಲರಾಗಿಯೇ.
ಬೊಜ್ಜಾ ತಾರಕಂರವರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಸಾಮಾ ಜಿಕ ಹೋರಾಟಗಾರ, ಕವಿ, ಕಾದಂಬರಿಕಾರ, ಅತ್ಯುತ್ತಮ ಲೇಖಕ, ಪತ್ರಕರ್ತ, ಸುಪ್ರಸಿದ್ಧ ವಕೀಲ, ಮಹಿಳಾವಾದಿ. ಅವರೇ ತಮ್ಮನ್ನು ತಾವು ಕರೆದುಕೊಳ್ಳುವಂತೆ ಅಂಬೇಡ್ಕರ್ವಾದಿ ಮತ್ತು ಮಾರ್ಕ್ಸ್ವಾದಿ. ತಮ್ಮ ಜೀವನದುದ್ದಕ್ಕೂ ಅಂಬೇಡ್ಕರ್ ಮತ್ತು ಮಾರ್ಕ್ಸ್ ಚಿಂತನೆಗಳನ್ನು ಬೆಸೆಯಲು ಪ್ರಯತ್ನ ಪಟ್ಟವರು. ಆ ಕಾರಣಕ್ಕಾಗಿಯೇ ಅಂಬೇಡ್ಕರ್ವಾದಿಗಳಿಂದಲೂ, ಮಾರ್ಕ್ಸ್ವಾದಿಗಳಿಂದಲೂ ಟೀಕೆಗೆ ಗುರಿಯಾದವರು. ಅವರು ಬರೆದ ‘ಜಾತಿ ಮತ್ತು ವರ್ಗ’ ಕೃತಿ ನಮಗೆ ಹಲವು ಹೊಸನೋಟಗಳನ್ನು ಕೊಟ್ಟಿದೆ.
ತಾರಕಂರವರು ‘ನಾಲಾಗೆ ಗೋದಾವರಿ’ (ನನ್ನಂತೆಯೇ ಗೋದಾವರಿ) ಎಂಬ ಕವನ ಸಂಕಲನವನ್ನೂ ಬರೆದಿದ್ದಾರೆ. ‘ಪಂಚತಂತ್ರಂ’ ಎಂಬ ಕಾದಂಬರಿಯನ್ನೂ ಬರೆದಿದ್ದಾರೆ. ಇವರ ಹಲವು ಕೃತಿಗಳು ಹೋರಾಟದ ಸಾಗರಕ್ಕೆ ಶಕ್ತಿ ತುಂಬಿವೆ. ಅವುಗಳಲ್ಲಿ ದಲಿತರ ರಾಜ್ಯ, ನೆಲ ನೇಗಿಲು ಪ್ರಮುಖವಾದವು. ಅವರ ‘ಪೊಲೀಸರು ಅರೆಸ್ಟ್ ಮಾಡಿದರೆ?’ ಎಂಬ ಕೃತಿ ಎರಡು ಲಕ್ಷದಷ್ಟು ಮಾರಾಟವಾಗಿ ಸಂಚಲನ ಮೂಡಿಸಿತ್ತು. ಅದರಲ್ಲಿ ಪೊಲೀಸರು ಹೋರಾಟಗಾರರನ್ನು ಅರೆಸ್ಟ್ ಮಾಡಿದರೆ ಅವರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಹಾಗೂ ಸಲಹೆಗಳಿದ್ದವು.
1989ರಲ್ಲಿ ತಾರಕಂರವರು ಸ್ನೇಹಿತರೊಡಗೂಡಿ ಆಂಧ್ರಪ್ರದೇಶದ ಮೊಟ್ಟಮೊದಲ ದಲಿತಪರ ಮಾಸಿಕ ಪತ್ರಿಕೆಯನ್ನೂ ಹೊರತಂದಿದ್ದರು. ಅದರ ಹೆಸರು ‘ನಲುಪು’ (ಕಪ್ಪು). ಅದರಲ್ಲಿ ಇಂದಿಗೂ ಮೂಲಭೂತವಾದಿಗಳ ಪಿತ್ತ ನೆತ್ತಿಗೇರಿಸುವ ‘ಅಂಬೇಡ್ಕರರ ರಾಮ ಕೃಷ್ಣರ ಒಗಟುಗಳು’ ಮತ್ತು ‘ಶೂದ್ರರು ಯಾರು’ ಎಂಬ ಸಂಶೋಧನಾ ಗ್ರಂಥಗಳನ್ನು ಅನುವಾದಿಸಿ ಪ್ರಕಟಿಸಿದ್ದರು.
ದಲಿತರ ಪರವಾಗಿ ಕೆಲಸ ಮಾಡಿದ ತಾರಕಂರವರ ಕೊಡುಗೆ ನಿಜಕ್ಕೂ ಅವಿಸ್ಮರಣೀಯ. 1978ರಲ್ಲಿ ಹೈಕೋರ್ಟಿನ ವಕೀಲರಾಗಿ ತಮ್ಮ ವೃತ್ತಿಯನ್ನು ಆರಂಭಿಸುವ ಅವರು ಬಡವರ ಪರವಾಗಿ ವಾದಿಸಿ ಗೆಲ್ಲಿಸಿದ ಪ್ರಕರಣಗಳೆಷ್ಟೋ. ಆದರೆ ಯಾವಾಗ ಕಾರಂಚೇಡುವಿನಲ್ಲಿ 1985ರಲ್ಲಿ ದಲಿತರ ಹತ್ಯಾಕಾಂಡ ಮಾಡಲಾಯಿತೋ ಅದನ್ನು ಖಂಡಿಸಿ ತಮ್ಮ ಸರಕಾರಿ ವಕೀಲ ವೃತ್ತಿಗೆ ರಾಜೀನಾಮೆ ನೀಡುತ್ತಾರೆ. ಮುಂದೆ ಕಾರಂಚೇಡು, ಚುಂಡೂರು ಮತ್ತು ಲಕ್ಷ್ಮೀಪೇಟ ಪ್ರಕರಣಗಳಲ್ಲಿ ದಲಿತರ ಪರವಾಗಿ ವಾದಿಸುತ್ತಾರೆ. 1989ರಲ್ಲಿ ದಲಿತ ಮಹಾಸಭಾ ಸ್ಥಾಪಿಸುತ್ತಾರೆ. ಆಂಧ್ರಪ್ರದೇಶದಲ್ಲಿ ಬಿಎಸ್ಪಿ ಪಕ್ಷದ ಪರವಾಗಿ ದುಡಿಯುತ್ತಾರೆ. ಆದರೆ 1994ರಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್ಪಿ-ಬಿಜೆಪಿ ಸಖ್ಯ ಬೆಳೆಸಿದಾಗ ಆ ಬೆಳವಣಿಗೆಯನ್ನು ಪ್ರತಿಭಟಿಸಿ ಹೊರಬರುತ್ತಾರೆ. ನಂತರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸೇರುತ್ತಾರೆ. ಆದರೆ ಅಠಾವಳೆ ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದನ್ನು ವಿರೋಧಿಸಿ ಅಲ್ಲಿಂದಲೂ ಹೊರಬಂದು ದಲಿತರ ಪರವಾಗಿ, ಆದಿವಾಸಿಗಳ ಪರವಾಗಿ ದುಡಿಯುತ್ತಿದ್ದ ಬೊಜ್ಜಾ ತಾರಕಂರವರಿಗೆ 2013ರಲ್ಲಿ ಬ್ರೈನ್ ಟ್ಯೂಮರ್ ಇರುವುದು ತಿಳಿಯುತ್ತದೆ. ಆದರೂ ಬೊಜ್ಜಾ ತಾರಕಂರವರ ಹೊರಾಟ ನಿಲ್ಲುವುದಿಲ್ಲ. ಕಡೆಯ ಉಸಿರು ಇರುವವರೆಗೂ ಹೋರಾಟವನ್ನೇ ಮೈಗೂಡಿಸಿಕೊಂಡು ಬದುಕಿದವರು ಬೊಜ್ಜಾ ತಾರಕಂರವರು.
ಬೊಜ್ಜಾ ತಾರಕಂರವರು ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಒಡನಾಡಿಗಳೂ ಆಗಿದ್ದರು. ಅಸ್ಪಶ್ಯತೆಯನ್ನು ವಿರೋಧಿಸಿ ಬೌದ್ಧ ಧರ್ಮಕ್ಕೆ ಮರಳಿದ್ದರು.
2015ರಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ಕಂಬಾಲಪಲ್ಲಿ ನರಮೇಧದ ನೆನಪಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಬೊಜ್ಜಾ ತಾರಕಂರವರು ಬೆಂಗಳೂರಿಗೆ ಬಂದಿದ್ದರು. ಅಂದು ಅವರ ಮಾತನ್ನು ಕೇಳುವ ಮತ್ತು ಅವರನ್ನು ನೋಡಿ ಮಾತನಾಡಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಜೀವನದ ಮರೆಯಲಾರದ ಘಟನೆಗಳಲ್ಲಿ ಒಂದು. ಬೊಜ್ಜಾ ತಾರಕಂ ನಮ್ಮೆಲ್ಲರ ನೆನಪಿನಲ್ಲಿ ಸದಾ ಇರುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ರಾಜಕೀಯ ಮತ್ತು ಸಾಮಾಜಿಕ ಬದ್ಧತೆಗಳು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿವೆ.