ಶಾರುಕ್ ಚಿತ್ರ ಪ್ರಚಾರದ ವೇಳೆ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಓರ್ವ ಸಾವು
ಹೊಸದಿಲ್ಲಿ,ಜ.24: ಬಾಲಿವುಡ್ ಸೂಪರ್ಸ್ಟಾರ್ ಶಾರುಕ್ ಖಾನ್, ತನ್ನ ರಾಯೀಸ್ ಚಿತ್ರದ ಪ್ರಚಾರಕ್ಕಾಗಿ ರೈಲನ್ನೇರಿದ ಸಂದರ್ಭ, ರೈಲುನಿಲ್ದಾಣದಲ್ಲಿ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ 45 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರೈಲು ನಿಲ್ದಾಣಕ್ಕೆ ಆಗಮಿಸಿದ ಶಾರುಕ್ ಅವರನ್ನು ಕಾಣಲು ಭಾರೀ ಸಂಖ್ಯೆಯ ಅಭಿಮಾನಿಗಳು ನಿಲ್ದಾಣದಲ್ಲಿ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಜನಜಂಗಳಿಯ ಮಧ್ಯೆ ಸಿಕ್ಕಿಹಾಕಿಕೊಂಡ ವಡೋದರಾದ ಸ್ಥಳೀಯ ರಾಜಕಾರಣಿಯಾದ ಫರೀದ್ ಖಾನ್ ಪಠಾಣ್ ಹೃದಯಾಘಾತದಿಂದ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದರು. ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿರುವುದಾಗಿ ಘೋಷಿಸಲಾಯಿತು. ಪಠಾಣ್ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂಬಂಧಿಯೊಬ್ಬರನ್ನು ಭೇಟಿಯಾಗಲು, ತನ್ನ ಪತ್ನಿ ಹಾಗೂ ಪುತ್ರಿಯೊಂದಿಗೆ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು.
ಶಾರುಕ್ ಖಾನ್ ಅವರಿದ್ದ ರೈಲು ಸೋಮವಾರ ಬೆಳಗ್ಗೆ 10:30ಕ್ಕೆ ಆಗಮಿಸಿದಾಗ, ಭಾರೀ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಹುಚ್ಚೆದ್ದು, ರೈಲಿನೆಡೆಗೆ ಮುನ್ನುಗಿದ್ದರು. ಜನರು ಒಬ್ಬರನ್ನೊಬ್ಬರು ರೈಲಿನತ್ತ ತಳ್ಳತೊಡಗಿದರು. ಒಂದು ವೇಳೆ ಜನರು ರೈಲುಹಳಿಯ ಮೇಲೆ ಬಿದ್ದಿದ್ದರೆ ಸಾವುನೋವು ಇನ್ನೂ ಅಧಿಕವಾಗಿರುತ್ತಿತ್ತು. ಈ ನೂಕುನುಗ್ಗಲಿನಲ್ಲಿ ಹಲವಾರು ಮಕ್ಕಳನ್ನು ರಕ್ಷಿಸುವಲ್ಲಿ ನಾವು ಸಫಲಾರಾಗಿದ್ದೆವು ಎಂದು ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ಜೆ.ಬಿ. ಬಾರಿಯಾ ಹೇಳುತ್ತಾರೆ.
ರೈಲು ನಿಲ್ದಾಣದಿಂದ ಹೊರಡುತ್ತಿದ್ದಂತೆಯೇ ಮತ್ತೆ ನೂಕುನುಗ್ಗಲು ಉಂಟಾಯಿತು ಕೆಲವರು ಅದರೊಂದಿಗೆ ಓಡತೊಡಗಿದರು. ಜನರ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಪಠಾಣ್ ಗೆ ಉಸಿರಾಡಲೂ ಸಾಧ್ಯವಾಗದೆ, ಪ್ರಜ್ಞೆ ತಪ್ಪಿದರು, ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿರುವುದಾಗಿ ಘೋಷಿಸಲಾಯಿತೆಂದು ಬಂಧುಗಳು ತಿಳಿಸಿದ್ದಾರೆ.
ಬುಧವಾರ ಬಿಡುಗಡೆಯಾಗಲಿರುವ ರಾಯೀಸ್ ಚಿತ್ರದ ಪ್ರಚಾರದ ಭಾಗವಾಗಿ ಶಾರುಕ್ ಖಾನ್ ಅವರು ಆಗಸ್ಟ್ ಕ್ರಾಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ಮುಂಬೈನಿಂದ ದಿಲ್ಲಿಯವರೆಗೆ ಪ್ರಯಾಣಿಸಿ, ಪ್ರಚಾರ ನಡೆಸಲಿದ್ದಾರೆ.
ತನ್ನ ಚಿತ್ರದ ಪ್ರಚಾರಕ್ಕೆ ಶಾರುಕ್ ಅನುಮತಿಯನ್ನು ಪಡೆದುಕೊಂಡಿದ್ದರೂ, ವಡೋದರಾ ನಿಲ್ದಾಣದಲ್ಲಿ ನಟನನ್ನು ಕಾಣಲು ಬಂದ ಅಭಿಮಾನಿಗಳ ಸಂಖ್ಯೆ ನಿರೀಕ್ಷೆಗಿಂತ ಮೂರು ಪಟ್ಟು ಹೆಚ್ಚಿತ್ತೆಂದು ಪೊಲೀಸರು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ನೆರೆದಿದ್ದ ಜನಜಂಗುಳಿಯನ್ನು ನಿಯಂತ್ರಿಸಲು ರೈಲ್ವೆ ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ಕಾಲ್ತುಳಿತ ಉಂಟಾಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಮಧ್ಯೆ ರಾಯೀಸ್ ಚಿತ್ರದ ಪ್ರಚಾರಕ್ಕೆ ಅನುಮತಿ ನೀಡಿದ್ದನ್ನು ಬಿಜೆಪಿ ನಾಯಕ ಕೈಲಾಸ್ ವಿಜಯ್ವರ್ಗಿಯ ತೀವ್ರವಾಗಿ ಟೀಕಿಸಿದ್ದಾರೆ. ಸಿನೆಮಾ ಪ್ರಚಾರದಿಂದಾಗಿ ಜನರು ತೊಂದರೆಗೀಡಾಗಿದ್ದಾರೆಂದು ಅವರು ಖಂಡಿಸಿದ್ದಾರೆ. ಈ ಮಧ್ಯೆ ಚಿತ್ರದ ಪ್ರಚಾರಕ್ಕೆ ಅನುಮತಿ ನೀಡಿದ ರೈಲ್ವೆ ಇಲಾಖೆಯ ವಿರುದ್ಧವೂ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಸಾರ್ವಜನಿಕರ ಸುರಕ್ಷತೆಯ ಜೊತೆ ರಾಜಿ ಮಾಡಿ, ಚಿತ್ರಪ್ರಚಾರಕ್ಕೆ ಅವಕಾಶ ನೀಡಲಾಗಿದೆಯೆಂಬ ಟೀಕೆಗಳು ಕೇಳಿಬಂದಿವೆ. ಈ ಮಧ್ಯೆ ಘಟನೆಗೆ ಸಂಬಂಧಿಸಿ ರೈಲ್ವೆ ಸಚಿವ ಸುರೇಶ್ ಪ್ರಭು ತನಿಖೆಗೆ ಆದೇಶಿಸಿದ್ದಾರೆ.





