ಕೇಜ್ರಿ ಪ್ರಕಾರ ಪ್ರಧಾನಿ ಮೋದಿಗೆ ಭಾರತ ರತ್ನ ನೀಡಬೇಕು !
ಇದಕ್ಕೆ ಅವರು ನೀಡಿದ ಕಾರಣ ಏನು ಗೊತ್ತೇ ?
ಹೊಸದಿಲ್ಲಿ, ಜ. 26 : ದಿಲ್ಲಿ ಮುಖ್ಯಮಂತ್ರಿ , ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ! ಅರೆ, ಇದೇನಿದು, ಇದ್ದಕ್ಕಿದ್ದಂತೆ ರಾಜಕೀಯದಲ್ಲಿ ಬದ್ಧ ವೈರಿಯೇ ಪ್ರಧಾನಿಗೆ ದೇಶದ ಅತ್ಯುನ್ನತ ಗೌರವ ನೀಡಬೇಕು ಎಂದು ಹೇಳುತ್ತಿದ್ದಾರೆ ಎಂದು ನೀವು ಅಚ್ಚರಿ ಪಡುವ ಮೊದಲು ಇದಕ್ಕೆ ಕೇಜ್ರಿವಾಲ್ ನೀಡಿರುವ ಕಾರಣ ನೋಡಿ.
ಗಣರಾಜ್ಯೋತ್ಸವ ಪ್ರಯುಕ್ತ ಕೇಂದ್ರ ಸರ್ಕಾರ 120 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಪೈಕಿ ಮಾಜಿ ಕೇಂದ್ರ ಸಚಿವ ಮರಾಠ ನಾಯಕ ಶರದ್ ಪವಾರ್ ಅವರ ಹೆಸರು ದೇಶದ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮ ವಿಭೂಷಣದ ಪಡೆಯುವವರ ಪಟ್ಟಿಯಲ್ಲಿದೆ. ಇದು ಸಹಜವಾಗಿ ಹಲವರ ಹುಬ್ಬೇರಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಭ್ರಷ್ಟಾಚಾರ , ಕಪ್ಪು ಹಣ ಹಾಗು ಕುಟುಂಬ ರಾಜಕಾರಣದ ಆರೋಪ ಹೊತ್ತ ಪವಾರ್ ಗೆ ಅತ್ಯುನ್ನತ ಪ್ರಶಸ್ತಿ ನೀಡಿರುವುದು ಸರಿಯಲ್ಲ ಎಂದು ಅನಿಸಿಕೆಗಳು ವ್ಯಕ್ತವಾಗುತ್ತಿವೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್ , " ಶರದ್ ಪವಾರ್ ಅವರಿಗೆ ಪದ್ಮ ವಿಭೂಷಣ ನೀಡುವ ಧೈರ್ಯ ತೋರಿಸಿದ್ದಕ್ಕೆ ಮೋದಿಯವರಿಗೆ ಭಾರತ ರತ್ನ ನೀಡಬೇಕು" ಎಂದು ವ್ಯಂಗ್ಯವಾಡಿದ್ದಾರೆ. ಇಷ್ಟಕ್ಕೇ ನಿಲ್ಲದ ಕೇಜ್ರಿ, ಪದ್ಮ ಪ್ರಶಸ್ತಿಗೆ ಮಾನದಂಡ ಏನು ಎಂದು ತಿಳಿಯಲು 1993ರ ವೋಹ್ರಾ ಸಮಿತಿಯ ವರದಿ ( ಕ್ರಿಮಿನಲ್ ಗಳು, ರಾಜಕಾರಣಿಗಳು ಹಾಗು ಅಧಿಕಾರಿಗಳ ನಡುವಿನ ಮೈತ್ರಿ ಕುರಿತ ವರದಿ) ಓದಬೇಕು ಎಂದೂ ಹೇಳಿದ್ದಾರೆ.
ಗಣರಾಜ್ಯೋತ್ಸವ ಹಿಂದಿನ ದಿನ ಪ್ರಧಾನಿ ಮೋದಿ ಸಿಬಿಐ ಮೂಲಕ ದಿಲ್ಲಿ ಸರ್ಕಾರದ ಫೀಡ್ ಬ್ಯಾಕ್ ಕಡತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿರುವ ಕೇಜ್ರಿ , ಈ ಸಂದರ್ಭದಲ್ಲಿ ಜನತೆ ದೇಶವನ್ನು ಹಿಟ್ಲರ್ ಮಾದರಿಯ ಸರ್ವಾಧಿಕಾರಿಗಳಿಂದ ರಕ್ಷಿಸಲು ಮುಂದೆ ಬರಬೇಕು ಎಂದು ಪ್ರಧಾನಿ ವಿರುದ್ಧ ಪರೋಕ್ಷ ದಾಳಿ ಮಾಡಿದ್ದಾರೆ.
शरद पवार को पद्म विभूषण देने की हिम्मत दिखाने के लिए मोदी जी को भारत रत्न मिलना चाहिए https://t.co/z1417VKBcB
— Arvind Kejriwal (@ArvindKejriwal) January 26, 2017
गणतंत्र दिवस के एक दिन पहले, कल मोदी जी ने CBI भेज कर दिल्ली सरकार के फ़ीड्बैक यूनिट की सारी फ़ाइल ज़ब्त कर लीं।
— Arvind Kejriwal (@ArvindKejriwal) January 26, 2017