ವೈರಲ್ ಆಡಿಯೋ : ಮುಸ್ಲಿಂ ಮುಕ್ತ ಭಾರತ ಹೇಳಿಕೆ ನೀಡಿದ ಸಾಧ್ವಿ ಪ್ರಾಚಿಗೆ ಮುಸ್ಲಿಂ ಯುವಕನ ಸಂದೇಶ
" ನಾವು ಈ ಮಣ್ಣಿನಲ್ಲಿ ಕಳೆದ ಬಾಲ್ಯವನ್ನು ಹಿಂದುರಿಗಿಸಿ , ನಾವು ಹೋಗುತ್ತೇವೆ "

ಹೊಸದಿಲ್ಲಿ, ಜ. 27 : ವಿಶ್ವ ಹಿಂದೂ ಪರಿಷದ್ ನಾಯಕಿ ಸಾಧ್ವಿ ಪ್ರಾಚಿಗೆ ' ಭಾರತೀಯ ಮುಸಲ್ಮಾನನ ಸಂದೇಶ' ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ತನ್ನನ್ನು ಹಿಂದೂಸ್ತಾನಿ ಮುಸಲ್ಮಾನ್ ಎಂದು ಗುರುತಿಸಿಕೊಂಡಿರುವ ಯುವಕನೊಬ್ಬನ ಆಡಿಯೋ ಇದು. ತಾನು ಸಾಧ್ವಿ ಪ್ರಾಚಿ ಅವರಿಗೆ ಕಾಲ್ ಮಾಡಿದಾಗ ಅವರು ಬ್ಯುಸಿ ಇದ್ದರು. ಹಾಗಾಗಿ ಅವರಿಗೆ ಕಳಿಸಿರುವ ವಾಟ್ಸ್ ಆಪ್ ಸಂದೇಶ ಇದು ಎಂದು ಈ ಆಡಿಯೋದಲ್ಲಿ ಆತ ಹೇಳಿದ್ದಾನೆ. " ನೀವು ಕಾಂಗ್ರೆಸ್ ಮುಕ್ತ ಭಾರತ ಆದ ಮೇಲೆ ಮುಸ್ಲಿಂ ಮುಕ್ತ ಭಾರತ ಮಾಡುವ ಮಾತನಾಡಿದ್ದೀರಿ. ಅದನ್ನು ಕೇಳಿ ಬೇಸರಗೊಂಡು ನಿಮ್ಮ ಜೊತೆ ನೇರವಾಗಿ ಮಾತನಾಡಲು ಕರೆ ಮಾಡಿದೆ " ಎಂದು ಈ ಸಂದೇಶದಲ್ಲಿ ಆತ ಹೇಳಿದ್ದಾನೆ.
"ನೀವು ಮುಸ್ಲಿಂ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳಿದ್ದೀರಿ. ಹಾಗೆಯೇ ಮಾಡಿ. ನಾವು ಇಲ್ಲಿಂದ ಹೋಗುತ್ತೇವೆ. ಅಮಾಯಕ ಮುಸ್ಲಿಮರನ್ನು ಭಯೋತ್ಪಾದಕರ ಪಟ್ಟ ಕಟ್ಟಿ 20 ವರ್ಷ ಜೈಲಿಗೆ ಹಾಕಿ ಮತ್ತೆ ನೀವು ನಿರಪರಾಧಿ ಎಂದು ಹೇಳುವ ದೇಶದಲ್ಲಿ ನಾವು ಇರಲು ಬಯಸುವುದಿಲ್ಲ. ನಿಮ್ಮಂತಹ ಜನರು ನಮ್ಮ ಸಮುದಾಯದ ಬಗ್ಗೆ ಪ್ರಶ್ನೆ ಎತ್ತುತ್ತೀರಿ. ನಮ್ಮ ಧರ್ಮದ ಅವಹೇಳನ ಮಾಡುತ್ತೀರಿ. ನಮ್ಮ ದೇಶಭಕ್ತಿ ಬಗ್ಗೆ ಸಂಶಯ ವ್ಯಕ್ತಪಡಿಸುತ್ತೀರಿ. ಪಾಕಿ, ಭಯೋತ್ಪಾದಕ ಎನ್ನುತ್ತೀರಿ. ನಾವು ಇಲ್ಲಿಯ ಪ್ರಜೆಗಳಲ್ಲ, ಬದಲಾಗಿ ಹೊರೆ ಎಂಬಂತೆ ನಮ್ಮನ್ನು ನೋಡುತ್ತೀರಿ " ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.
ಆದರೆ ಆ ಬಳಿಕ ದೇಶಕ್ಕೆ ಮುಸ್ಲಿಮರು ನೀಡಿರುವ ಕೊಡುಗೆಗಳ ಬಗ್ಗೆ ವಿವರಿಸಿರುವ ಯುವಕ " ನಾವು ಹೋಗುವುದಿದ್ದರೆ ಅವೆಲ್ಲವನ್ನೂ ತೆಗೆದುಕೊಂಡೇ ಹೋಗುತ್ತೇವೆ " ಎಂದು ಸವಾಲು ಹಾಕಿದ್ದಾನೆ. " ದೇಶಭಕ್ತಿ ನಮ್ಮ ಧಾರ್ಮಿಕ ನಂಬಿಕೆಯ ಒಂದು ಅವಿಭಾಜ್ಯ ಅಂಗವಾಗಿದೆ. ನಮ್ಮ ಹಲವು ಪೀಳಿಗೆಗಳು ಈ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ತೆಗೆದುಕೊಂಡೇ ಹೋಗುತ್ತೇವೆ. ಹಾಗೇ ಹೋಗುವುದಿಲ್ಲ. ಈ ದೇಶದ ಮಣ್ಣಿನಲ್ಲಿ ನಮ್ಮ ಹಲವು ಪೀಳಿಗೆಗಳು ದಫನಗೊಂಡಿವೆ. ಈ ಮಣ್ಣು ನಮಗೆ ಜೀವನ ನೀಡಿದೆ. ಬದುಕಲು ಕಲಿಸಿದೆ. ನಮ್ಮ ಮಸೀದಿಗಳಿಂದ ನಾವು ದೇಶಕ್ಕಾಗಿ ಪ್ರಾರ್ಥಿಸಿದ್ದೇವೆ. ಇದೇ ಮಣ್ಣಿನಲ್ಲಿ ನಮ್ಮ ಬಾಲ್ಯದ ತುಂಟಾಟವಿದೆ. ಈ ಮಣ್ಣಿನ ಮೇಲೆ ನಮಗಿರುವ ಪ್ರೀತಿ ನಿಮಗಿಲ್ಲ " ಎಂದು ಆತ ಪ್ರಾಚಿಗೆ ಸವಾಲು ಹಾಕಿದ್ದಾನೆ.
" ನೀವು ಹೇಳಿದ ಹಾಗೆ ನಾವು ಹೋಗುತ್ತೇವೆ. ಆದರೆ ಅದಕ್ಕಿಂತ ಮೊದಲು ನಾವು ಕೂತು ಲೆಕ್ಕ ಹಾಕಬೇಕಾಗಿದೆ. ನಮಗೆ ನಮ್ಮದೆಲ್ಲವನ್ನೂ ನೀವು ವಾಪಸ್ ಕೊಡಬೇಕಾಗಿದೆ. ತಾಜ್ ಮಹಲ್ , ಕುತುಬ್ ಮಿನಾರ್ , ಕೆಂಪು ಕೋಟೆ ಇಂತಹ ಸಾವಿರಾರು ಕೊಡುಗೆಗಳನ್ನು ನಾವು ಹೋಗುವಾಗ ಬಿಟ್ಟು ಹೋಗುವುದಿಲ್ಲ. ಶೇರ್ ಶಾಹ್ ಸೂರಿ ಮಾಡಿರುವ ರಸ್ತೆಗಳು , ಬಿಸ್ಮಿಲ್ಲಾ ಖಾನ್ ರ ಶಹನಾಯಿಯ ಮಾಧುರ್ಯ , ಝಕೀರ್ ಹುಸೇನ್ ರ ತಬಲಾದ ನಾದ , ಎ ಆರ್ ರಹ್ಮಾನ್ ರ ಸಂಗೀತ ಇವೆಲ್ಲವನ್ನೂ ನಮಗೆ ವಾಪಸ್ ಕೊಡಿ. ಶೈತಾನ್ ನ ಆಯುಷ್ಯ ದೀರ್ಘ ಎಂದು ಕೇಳಿದ್ದೇನೆ. ಆದರೆ ನಿಮ್ಮ ಜೀವಮಾನದಲ್ಲಿ ನೀವಿದನ್ನು ವಾಪಸ್ ಕೊಡಲು ಸಾಧ್ಯವಿಲ್ಲ. "
" ನಿಮಗೆ (ಅಲ್ಲಾಮಾ ಇಕ್ಬಾಲರು ಬರೆದ ) ಸಾರೆ ಜಹಾಂಸೆ ಅಚ್ಛಾ ಹಾಡನ್ನೂ ನಾವು ಬಿಟ್ಟು ಹೋಗುವುದಿಲ್ಲ. ಗಂಗಾ ನದಿಯ ದಂಡೆಯಲ್ಲಿರುವ ಎಲ್ಲ ಕಲಾತ್ಮಕ ನೇಕಾರರನ್ನೂ ನಾವು ಹೋಗುವಾಗ ಕರೆದುಕೊಂಡು ಹೋಗುತ್ತೇವೆ. ಇನ್ನು ನಾವು ತಯಾರಿಸುವ ಅಲೀಗಢದ ಬೀಗ ನಿಮಗೆ ಬಿಟ್ಟು ಹೋಗುವುದಿಲ್ಲ. ಶಾರುಖ್ , ಸಲ್ಮಾನ್ , ಆಮಿರ್ ಖಾನ್ ರನ್ನೂ ನಾವು ಕರೆದುಕೊಂಡೇ ಹೋಗುತ್ತೇವೆ " ಎಂದು ಯುವಕ ಸವಾಲು ಹಾಕಿದ್ದಾನೆ.
" ನಮ್ಮ ಮಕ್ಕಳು ಇಲ್ಲಿ ರಾಮ್ ಲೀಲಾ ನೋಡಿ ಕಳೆದ ಸಮಯವನ್ನು ನಮಗೆ ಹಿಂದುರುಗಿಸಿ. ಹಾಗೇ , ನಾವು ಜಾತಿ ಬೇಧ ಮರೆತು ರಾಮ್ ಲೀಲಾದಲ್ಲಿ ಮಾಡುತ್ತಾ ಬಂದಿರುವ ಅಭಿನಯವನ್ನೂ ನಮಗೆ ಹಿಂದುರುಗಿಸಿ. ಪಟ್ಟಿ ಇನ್ನೂ ಬಹಳ ಉದ್ದವಿದೆ. ನಾವು ಕೂತು ಲೆಕ್ಕ ಹಾಕೋಣ. "
" ನಮ್ಮ ಕೊಡುಗೆಗಳನ್ನು ನಮಗೆ ವಾಪಸ್ ಕೊಟ್ಟು ನಮ್ಮನ್ನು ಇಲ್ಲಿಂದ ಕಳುಹಿಸುವ ಅರ್ಹತೆ ನಿಮಗಿದೆಯೇ ಎಂದು ನನಗೂ ನೋಡಬೇಕಿದೆ. ಈ ದೇಶಕ್ಕಾಗಿ ನಮ್ಮ ಹಿರಿಯರು ಹರಿಸಿದ ರಕ್ತವನ್ನು ನಮಗೆ ಕೊಟ್ಟು ಬಿಡಿ. ನಮ್ಮ ಎಲ್ಲವನ್ನೂ ನಮಗೆ ಹಿಂದಿರುಗಿಸಿದ ದಿನ ನಾವು ಇಲ್ಲಿಂದ ತೆರಳುತ್ತೇವೆ. ಆದರೆ ನಮಗೆ ಗೊತ್ತು, ಆ ಅರ್ಹತೆ ನಿಮಗೆ ಈ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ ಇನ್ನು ಮುಂದೆಯೂ ಇರುವುದಿಲ್ಲ. "
"ಏಕೆಂದರೆ ಹಾಗೆ ವಾಪಾಸ್ ಕೊಡಲು ಯಾರಿಗೂ ಸಾಧ್ಯವಿಲ್ಲ. ಏಕೆಂದರೆ ಇದು ನಮ್ಮ ದೇಶ ಇನ್ನು ಮುಂದೆಯೂ ನಮ್ಮದೇ ಆಗಿರುವುದು. ನಾವು ಮುಸಲ್ಮಾನರು. ನಾವು ದೇಶಭಕ್ತಿ ಬಿಟ್ಟರೆ ನಮ್ಮ ಧರ್ಮವನ್ನೇ ಬಿಟ್ಟ ಹಾಗೆ " ಎಂದು ಪ್ರಾಚಿಗೆ ತಿರುಗೇಟು ನೀಡಿದ್ದಾನೆ.







