ಚರ್ಚ್ನ ಜಾತ್ರೆ ಪ್ರಯುಕ್ತ ಭಿಕ್ಷುಕರಿಗೆ ನೀಡಿದ ದಾನವೆಷ್ಟು ಗೊತ್ತೇ ?

ಕಾರ್ಕಳ, ಜ.27: ಅತ್ತೂರು ಸಂತ ಲಾರೆನ್ಸ್ ಕಿರು ಬಾಸಿಲಿಕಾ ಚರ್ಚ್ನ ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ಭಿಕ್ಷುಕರಿಗೆ 10.30 ಲಕ್ಷ ರೂ. ಹಣವನ್ನು ದಾನದ ರೂಪದಲ್ಲಿ ಹಂಚಲಾಯಿತು.
ಜಾತ್ರೆಯ ಸಂದರ್ಭ ಭಿಕ್ಷಾಟನೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಭಿಕ್ಷುಕರಿಗೆ ದಾನ ನೀಡುವುದಕ್ಕಾಗಿ ಚರ್ಚ್ ಆವರಣದಲ್ಲಿ ಕಲ್ಪಿಸಲಾದ ಪ್ರತ್ಯೆಕ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಭಿಕ್ಷುಕರ ಅರ್ಹತೆಗೆ ಅನುಗುಣವಾಗಿ ಹಂಚಲಾಯಿತು. ಮಕ್ಕಳು ಮತ್ತು ಕೆಲಸ ಮಾಡಲು ಶಕ್ತರಾಗಿರುವ ಯುವಕರಿಗೆ ಹಣ ನೀಡದೆ ಕೇವಲ ಊಟವನ್ನು ಮಾತ್ರ ನೀಡಲಾಯಿತು.
ಬೆಳಗ್ಗಿನಿಂದಲೇ ತಂಡೋಪತಂಡವಾಗಿ ಅಸಂಖ್ಯಾತ ಭಿಕ್ಷುಕರು ಪುಣ್ಯ ಕ್ಷೇತ್ರದತ್ತ ಬಂದಿದ್ದು ವಿಕಲಚೇತನರು, ವೃದ್ಧರು, ಸಾಧು ಸಂತರು, ನಿಶಕ್ತರು, ಮಹಿಳೆಯರು, ಪುರುಷರು, ವೃದ್ಧರು, ವೃದ್ಧೆಯರು ಮತ್ತು ಕೆಲವು ಮಕ್ಕಳು ತಂಡದಲ್ಲಿದ್ದರು. ಮಧ್ಯಾಹ್ನ 12 ಗಂಟೆಗೆ ಎಲ್ಲರಿಗೂ ಗರಿಷ್ಟ 2000ರೂ. ಹಾಗೂ ಕನಿಷ್ಟ 300ರೂ. ಹಣವನ್ನು ಅವರವರ ದೈಹಿಕ ಅಸಮರ್ಥತೆಯನ್ನು ನೋಡಿ ಹಂಚುವುದರೊಂದಿಗೆ ಊಟವನ್ನು ಸಹ ನೀಡಲಾಯಿತು.
‘ಐದು ದಿನಗಳ ಉತ್ಸವಕ್ಕೆ ಗುರುವಾರ ತೆರೆ ಬಿದ್ದಿದ್ದು ನಿರೀಕ್ಷೆಗೂ ಮೀರಿ ಲಕ್ಷಾಂತರ ಮಂದಿ ಭಕ್ತಾಧಿಗಳು ಪುಣ್ಯಕ್ಷೇತ್ರಕ್ಕೆ ಆಗಮಿಸಿದ್ದಾರೆ. ಸಂತ ಲಾರೆನ್ಸರಿಗೆ ಬಡವರ ಮತ್ತು ಭಿಕ್ಷುಕರ ಮೇಲೆ ಅತೀವ ಪ್ರೀತಿ. ಅದಕ್ಕಾಗಿ ಪ್ರತಿವರ್ಷ ಭಿಕ್ಷುಕರಿಗಾಗಿ ದಾನ ನೀಡಲಾಗುವುದು’ ಎಂದು ಬೆಸಿಲಿಕಾದ ಚುನಾಯಿತ ಉಪಾಧ್ಯಕ್ಷ ಜಾನ್ ಡಿಸಿಲ್ವಾ ತಿಳಿಸಿದ್ದಾರೆ.
ಮೊದಲು ಭಿಕ್ಷುಕರು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯ ಮನವಿಯ ಮೇರೆಗೆ ಜಾತ್ರೆಯ ಸಂದರ್ಭದಲ್ಲಿ ಅದನ್ನು ಸಂಪೂರ್ಣ ನಿಷೇಧಿಸಿ ಭಿಕ್ಷುಕರಿಗಾಗಿ ಚರ್ಚಿನ ವಠಾರದಲ್ಲಿ ಮೂರು ಡಬ್ಬಿಗಳನ್ನು ಇಡಲಾಗಿತ್ತು. ಅದರಲ್ಲಿ ಸಂಗ್ರಹವಾದ ಹಣವನ್ನು ಜಾತ್ರೆ ಮುಗಿದ ಬಳಿಕ ಅವರವರ ಅರ್ಹತೆಗೆ ಅನುಗುಣವಾಗಿ ಹಂಚಲಾಗುತ್ತದೆ. ಹಣದ ಜೊತೆಗೆ ಅವರಿಗೆ ಮಧ್ಯಾಹ್ನದ ಊಟವನ್ನು ಕೂಡ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಚರ್ಚಿನ ಸಹಾಯಕ ಧರ್ಮಗುರು ವಂ.ವಿಜಯ್ ಡಿಸೋಜ, ಉಪಾಧ್ಯಕ್ಷ ರಿಚ್ಚಾರ್ಡ್ ಪಿಂಟೊ, ವಲೇರಿಯನ್ ಪಾಯಸ್, ಸಂತೋಶ್ ಡಿಸಿಲ್ವ್ವ, ಲಿಯೊ ಸಿಕ್ವೇರಾ ಮೊದಲಾದವರು ಉಪಸ್ಥಿತರಿದ್ದರು.







