ವೃತ್ತಿ ಕೌಶಲ ತರಬೇತಿ ಕಾರ್ಯಾಗಾರ
ಮಂಗಳೂರು, ಜ.28: ಜಿಲ್ಲಾ ಸಾಕ್ಷರತಾ ಸಮಿತಿ, ಜನ ಶಿಕ್ಷಣ ಟ್ರಸ್ಟ್ ಕಂಕನಾಡಿ ಇವರ ಜಂಟಿ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ನವಸಾಕ್ಷರರಿಗೆ ವೃತ್ತಿ ಕೌಶಲ ತರಬೇತಿಯ ಪೂರ್ವಭಾವಿ ಕಾರ್ಯಾಗಾರ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ನೆರವೇರಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಕಾರ್ಯಕ್ರಮವನ್ನು ಸೋಲಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜದ ಸಮಸ್ಯೆಗಳು ಆಳವಾಗಿ ಬೇರೂರಿರುತ್ತವೆ. ಅಂತೆಯೇ ಅದರ ಪರಿಹಾರ ತಳಮಟ್ಟದಿಂದಾಗಬೇಕು. ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಬೇಕು.ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ಸಂತೋಷ ತರಲು, ಅವರ ಜೀವನದಲ್ಲಿ ನೆಮ್ಮದಿ ಮೂಡಿಸಲು ದುಡಿದಾಗ ವೃತ್ತಿಯಲ್ಲಿ ಸಾರ್ಥಕತೆ ಕಾಣಲು ಸಾಧ್ಯ. ಜಿಲ್ಲೆಯ ಪ್ರತೀ ಗ್ರಾಪಂನಲ್ಲಿ ಓರ್ವ ಪ್ರೇರಕರನ್ನು ನೇಮಕ ಮಾಡಿಕೊಳ್ಳಲು ಎಲ್ಲ ಗ್ರಾಪಂ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ನವಸಾಕ್ಷರರಿಗೆ ನೀಡುವ ಕೌಶಲ್ಯಾಭಿವೃದ್ಧಿ ತರಬೇತಿಗೆ ಜಿಪಂ ಸಂಪೂರ್ಣ ಸಹಕಾರ ನೀಡುತ್ತದೆ ಎಂಬುದಾಗಿ ತಿಳಿಸಿದರು.
ಜಿಪಂ ಉಪಕಾರ್ಯದರ್ಶಿ ಎನ್.ಆರ್.ಉಮೇಶ್, ಜಿಲ್ಲೆಯಲ್ಲಿ ಜಲ ಸಾಕ್ಷರತೆಯನ್ನುಂಟು ಮಾಡಲು ಎಲ್ಲರೂ ಶ್ರಮಿಸಬೇಕು. ಈಗಾಗಲೇ ಕಿಂಡಿ ಅಣೆಕಟ್ಟೆಗಳ ಮೂಲಕ ನೀರು ಮರುಪೂರಣದ ಕೆಲಸದ ಕಡೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಮಾಜಿ ಓಂಬುಡ್ಸ್ಮನ್ ಶೀನ ಶೆಟ್ಟಿ ಸ್ವಚ್ಛತಾ ಪ್ರಮಾಣ ವಚನ ಬೋಧಿಸಿದರು. ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣಮೂಲ್ಯ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ ಕೆ. 2016-17ನೆ ಸಾಲಿನ ನವಸಾಕ್ಷರರ ವೃತ್ತಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದ ರೂಪುರೇಷೆಗಳು, ತರಬೇತಿಯ ಹಂತಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಗ್ರಾಪಂನ ಅಭಿವೃದ್ಧಿ ಅಧಿಕಾರಿಗಳು, ಗ್ರಾಮವಿಕಾಸ ಕೇಂದ್ರದ ಪ್ರೇರಕರು ಭಾಗವಹಿಸಿದ್ದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೆ.ಸುಧಾಕರ ಸ್ವಾಗತಿಸಿದರು.







