ಕ್ವಾಟ್ರರ್ಸ್ನ ಗೋಡೆಗೆ ಮೂತ್ರ: ದಲಿತ ವರ್ಗದ ಯುವಕರನ್ನು ಮಾರಕವಾಗಿ ಥಳಿಸಿದ ಪೊಲೀಸರು

ಮಲಪ್ಪುರಂ,ಜ.30: ಕೇರಳ ರಾಜ್ಯಮಟ್ಟದ ಕಲೋತ್ಸವದಲ್ಲಿ ಪಾಲ್ಗೊಂಡು ಮರಳಿದ ಪ್ಲಸ್ಟು(ಪಿಯುಸಿ) ವಿದ್ಯಾರ್ಥಿ ಹಾಗೂ ಆತನ ಸಹೋದರನನ್ನು ಪೊಲೀಸರು ಕ್ರೂರವಾಗಿ ಹೊಡೆದಿದ್ದಾರೆ. ತಿರೂರ್ ಸರಕಾರಿ ಬಾಯ್ಸಾ ಹೈಯರ್ ಸೆಕಂಡರಿ ಸ್ಕೂಲ್ ವಿದ್ಯಾರ್ಥಿತಿರೂರ್ ಮುತ್ತೂರಿನ ಅತುಲ್ ಜೀತ್(7), ಆತನ ಚಿಕ್ಕಮ್ಮನ ಮಗ ಅಭಿಲಾಷ್(26) ಪೊಲೀಸರ ಹೊಡೆತಕ್ಕೊಳಗಾಗಿದ್ದು, ಇವರಿಬ್ಬರು ದಲಿತ ವರ್ಗಕ್ಕೆ ಸೇರಿದವರು.
ಕಣ್ಣೂರಿನ ಪೊಲೀಸ್ ಕ್ವಾಟ್ರರ್ಸ್ ಗೋಡೆಗೆ ಮೂತ್ರ ಹೊಯ್ದಿದ್ದಾರೆಂದು ಆರೋಪಿಸಿ ಇವರನ್ನು ಪೊಲೀಸರು ಬೆಂಡೆತ್ತಿದ್ದಾರೆ. ಹೊಟ್ಟೆಗೆ ಮಾರಕ ತುಳಿತಕ್ಕೊಳಗಾದ ಅತುಲ್ಜೀತ್ ಈಗಲೂ ಆಸ್ಪತ್ರೆಯಲ್ಲಿದ್ದಾನೆ. ಘಟನೆ ಕಳೆದ ಜನವರಿ 22ಕ್ಕೆ ಸಂಭವಿಸಿತ್ತು.
ಆರೋಪಿಪೊಲೀಸರ ವಿರುದ್ಧ ಕ್ರಮ ಜರಗಿಸಿಲ್ಲ. ಆದ್ದರಿಂದ ಅತುಲ್ನ ತಂದೆ ವಿಜಯನ್ ಮುಖ್ಯಮಂತ್ರಿ ಮತ್ತು ಡಿಜಿಪಿಗೆ ದೂರು ನೀಡಿದ್ದಾರೆ.
ಕಲೋತ್ಸವ ಕೊನೆಗೊಂಡಿದ್ದ ಜನವರಿ 22ರಂದು ರಾತ್ರೆ ಏಳೂವರೆಗಂಟೆಗೆ ಕಣ್ಣೂರ್ ರೈಲುನಿಲ್ದಾಣದ ಬಳಿಯ ಪೊಲೀಸ್ ಸೊಸೈಟಿಯ ಹಾಲ್ ಕೆಳಭಾಗದಲ್ಲಿ ಇವರು ಮೂತ್ರ ಒಯ್ದಿದ್ದರು. ಇದನ್ನು ಕಟ್ಟಡದ ಮೇಲ್ಭಾಗದಲ್ಲಿದ್ದ ಒಬ್ಬಮಹಿಳೆ ನೋಡಿ ಗದರಿಸಿದ್ದರು. ನಂತರ ಪೊಲೀಸರು ಇವರನ್ನು ವಿಚಾರಿಸಿ ಮಾರಕವಾಗಿ ಥಳಿಸಿದ್ದಾರೆ ಎಂದು ವರದಿ ತಿಳಿಸಿದೆ.







